ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಗಡಿ ವಿಚಾರದಲ್ಲಿ ರಾಜಕೀಯ ದೃಷ್ಟಿ ಇಲ್ಲ: ಸಿಎಂ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 06: ಗುಜರಾತ್ ರಾಜ್ಯದಲ್ಲಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬರಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ. ರಾಜ್ಯದಲ್ಲಿ 2023ಕ್ಕೆ ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 66 ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಸುದ್ದಿಗಾರರಿಗೆ ಪ್ರಶ್ನೆಗೆ ಅವರು ಉತ್ತರಿಸಿದರು.
ಕರ್ನಾಟಕದ ಜನರು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುತ್ತಾರೆ. ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಜಯಭೇರಿ ಭಾರಿಸಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಇದೊಂದು ಸಕಾರಾತ್ಮಕ, ಅಧಿಕಾರದ ಪರ ಮತದಾರರ ತೀರ್ಪು. ಗುಜರಾತ್ ನಲ್ಲಿ 7ನೇ ಬಾರಿಗೆ ಬಿಜೆಪಿ ಆಯ್ಕೆಯಾಗಲಿದೆ. ಇದು ನರೇಂದ್ರ ಮೋದಿಯವರ ನಾಯಕತ್ವ, ಆಡಳಿತದಲ್ಲಿ ಜನರ ಪ್ರಬಲವಾದ ನಂಬಿಕೆ ತೋರಿಸುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಕನ್ನಡಿಗರ ಹಿತ ರಕ್ಷಣೆ : ಚುನಾವಣೆ ದೃಷ್ಟಿ ಇಲ್ಲ
ಗಡಿವಿವಾದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮಹಾರಾಷ್ಟ್ರ ಸಚಿವರು ಬೆಳಗಾವಿ ಜಿಲ್ಲೆಗೆ ಬಾರದಿರುವುದು ಹಾಗೂ ಚುನಾವಣೆಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರ ರಾಜ್ಯದವರು ಅನೇಕ ವರ್ಷಗಳಿಂದ ಗಡಿಯಲ್ಲಿ ವಿವಾದ ಮಾಡಿಕೊಂಡು ಬರುತ್ತಿದ್ದಾರೆ. ವಿವಾದದಿಂದ ಎರಡೂ ಕಡೆ ಪ್ರತಿಕ್ರಿಯೆ ಬರುತ್ತದೆ. ಜನರ ಮಧ್ಯೆ ಸಾಮರಸ್ಯ ಕದಡುವ ಕೆಲಸ ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಎರಡು ರಾಜ್ಯಗಳ ಗಡಿ ವಿವಾದ ಪ್ರಕರಣ ಸದ್ಯ ಸುಪ್ರೀಂಕೋರ್ಟ್ ನಲ್ಲಿದೆ. ಕರ್ನಾಟಕದ ನಡೆ ಸಂವಿಧಾನಬದ್ಧವಾಗಿರುವ ಕಾರಣ ನಾವು ಕಾನೂನು ಸಮರವನ್ನು ಗೆಲ್ಲುವ ವಿಶ್ವಾಸವಿದೆ. ನಮಗೆ ಚುನಾವಣಾ ದೃಷ್ಟಿಕೋನವಿಲ್ಲ ಅಥವಾ ವಿವಾದ ಹುಟ್ಟಿಸುವ ಇರಾದೆಯೂ ಇಲ್ಲ. ನಮ್ಮ ಗಡಿ ಹಾಗೂ ಜನರ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿರುವ ಕನ್ನಡಿಗರ ಹಿತಚಿಂತನೆಯನ್ನೂ ಸರ್ಕಾರ ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.












Click it and Unblock the Notifications