ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಗಬೇಕಿದೆ: ಜೆಡಿಎಸ್
ಹಾಪ್ ಕಾಮ್ಸ್ ಗಳನ್ನು ಅಭಿವೃದ್ಧಿ ಮಾಡುವಲ್ಲಿ ಬಿಜೆಪಿ ಸರ್ಕಾರ ಈ ಕಡೆ ಆಸಕ್ತಿ ತೋರಲಿಲ್ಲ ಎಂದು ಜೆಡಿಎಸ್ ಟ್ವೀಟರ್ ಮೂಲಕ ಹೇಳಿದೆ.
ಬೆಂಗಳೂರು,ಫೆಬ್ರವರಿ13: ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದಷ್ಟೇ ಗೊತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹಾಪ್ ಕಾಮ್ಸ್ ಗಳನ್ನು ಉದ್ಧರಿಸುವ ಆಸಕ್ತಿ, ಬದ್ಧತೆ ಇಲ್ಲ. ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಗಬೇಕಿದೆ ಎಂದು ಜೆಡಿಎಸ್ ರಾಜ್ಯ ಘಟಕ ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣು-ತರಕಾರಿ ಪೂರೈಸುವ ಉದ್ದೇಶದಿಂದ ಆರಂಭವಾದ ಹಾಪ್ ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ನಷ್ಟದ ಹಾದಿಯಲ್ಲಿ ಮುಂದುವರಿದಿರುವ ಬಗ್ಗೆ ಮಾಧ್ಯಮದಲ್ಲಿ ವಿವರವಾಗಿ ವರದಿಯಾಗಿದೆ.
ಮುಕ್ತ ಮಾರುಕಟ್ಟೆಯ ಕಾರಣದಿಂದ ತೀವ್ರವಾದ ಸ್ಪರ್ಧೆ ಎದುರಿಸಬೇಕಿರುವ ಹಾಪ್ ಕಾಮ್ಸ್ ಗಳು ಹೊಸ ತಂತ್ರಜ್ಞಾನಗಳ ಅಳವಡಿಸುವಲ್ಲಿ ಸೋತಿವೆ. ವಿಸ್ತರಣೆಯಾಗದ ವ್ಯಾಪಾರ ಚಟುವಟಿಕೆಗಳು, ಮಾರುಕಟ್ಟೆಯ ಏರಿಳಿತಗಳ ಅಸಮರ್ಪಕ ನಿರ್ವಹಣೆ, ಪೂರೈಕೆ ಜಾಲ ವ್ಯವಸ್ಥಿತವಾಗದೆ ಇರುವುದು ಹೀಗೆ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ ಎಂದು ಟ್ವೀಟ್ ಮೂಲಕ ಜೆಡಿಎಸ್ ಹೇಳಿದೆ.

ಈ ಸಮಸ್ಯೆಗಳ ಗಂಭೀರತೆ ಅರಿತು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಕೆಎಂಎಫ್ ಮಾದರಿಯಲ್ಲಿ ಹಾಪ್ ಕಾಮ್ಸ್ ಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದರು. ಅಷ್ಟರಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕಾಯಿತು. ನಂತರ ಬಂದ ಬಿಜೆಪಿ ಸರ್ಕಾರ ಈ ಕಡೆ ಆಸಕ್ತಿ ತೋರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ರೂಪಿಸಿದ್ದ ಯೋಜನೆಯಲ್ಲಿ ಹಾಸನ, ರಾಮನಗರ, ವಿಜಯಪುರ ಸೇರಿದಂತೆ ರಾಜ್ಯದ ನಾಲ್ಕು ಕಡೆ ದೊಡ್ಡ ಮಾರುಕಟ್ಟೆ ನಿರ್ಮಿಸಲು 500 ಕೋಟಿ ಮಂಜೂರು ಮಾಡುವ ಪ್ರಸ್ತಾವವಿತ್ತು. ಸಂಸ್ಥೆಯ ಸಿಬ್ಬಂದಿಯೇ ನೇರವಾಗಿ ಹಳ್ಳಿಗಳಿಗೆ ತೆರಳಿ ತರಕಾರಿ, ಹಣ್ಣು ಖರೀದಿಸಬೇಕು ಎನ್ನುವುದು ಇದರ ಭಾಗವಾಗಿತ್ತು.
ಬೆಳೆಗಳಿಗೂ ಉತ್ತಮ ಬೆಲೆ ನೀಡಿ, ಬೆಳೆಗಾರರು ಮಾರುಕಟ್ಟೆ ಅಲೆಯುವುದ ತಪ್ಪಿಸುವುದೇ ಇದರ ಹಿಂದಿನ ಚಿಂತನೆ. ಹಾಗೆಯೇ, ಈ ನಾಲ್ಕು ದೊಡ್ಡ ಮಾರುಕಟ್ಟೆಗಳಿಂದ ಹಣ್ಣು-ತರಕಾರಿಗಳನ್ನು ಜಿಲ್ಲಾ ಕೇಂದ್ರಗಳು, ಹೊರ ರಾಜ್ಯಗಳಿಗೆ ಪೂರೈಸುವ ಯೋಚನೆ ಇತ್ತು. ಬೇಡಿಕೆ ಆಧರಿಸಿ ಉತ್ಪನ್ನಗಳ ರಫ್ತು ಮಾಡುವ ಚಿಂತನೆ ಕೂಡ ಸೇರಿತ್ತು. ಈ ರೀತಿಯ ದೂರದೃಷ್ಟಿತ್ವ ಇರುವ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ ಎಂದು ಜೆಡಿಎಸ್ ಟೀಕಿಸಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಹಾಪ್ ಕಾಮ್ಸ್ ಮಾರಾಟ ಮಳಿಗೆಗಳು ಮುಚ್ಚುವ ದಿನಗಳು ದೂರವಿಲ್ಲ. ರೈತರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಿಲ್ಲದೆ ಸೃಷ್ಟಿಯಾಗಿದ್ದ ಕೊಂಡಿಯೊಂದು ಕಳಚುವ ಆತಂಕ ನಿಜವಾಗುತ್ತಿದೆ. ಹಾಗಾಗದಿರಲು, ಹಾಪ್ ಕಾಮ್ಸ್ ಗಳ ಸಮಗ್ರ ಅಭಿವೃದ್ಧಿ ಅತ್ಯಗತ್ಯ ಎಂದು ಜೆಡಿಎಸ್ ರಾಜ್ಯ ಘಟಕ ಹೇಳಿದೆ.












Click it and Unblock the Notifications