ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ಕರ್ನಾಟಕದ ಕನಸು ನನಸಾಗಿದೆ : ‘ ಸಿದ್ದರಾಮಯ್ಯ’ ಸಂತಸ
ಬೆಂಗಳೂರು, ಜನವರಿ 19: ಅನ್ನಭಾಗ್ಯ ಯೋಜನೆಯ ಮೂಲಕ ಹಸಿವುಮುಕ್ತ ಕರ್ನಾಟಕದ ಕನಸು ನನಸಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಕರ್ನಾಟಕದ ಬಗ್ಗೆ ತಾನು ಕಂಡ ಕನಸುಗಳನ್ನು ಕರ್ನಾಟಕದ ಮಹಾಜನತೆಯ ಜೊತೆ ಹಂಚಿಕೊಂಡಿದ್ದರು... ಅದು ಹಸಿವು, ಅನಾರೋಗ್ಯ, ಅನಕ್ಷರಸ್ಥತೆ, ನಿರುದ್ಯೋಗ ಮತ್ತು ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣದ ಕನಸು.

ಸಿದ್ದರಾಮಯ್ಯನವರು ಕೇವಲ ಕನಸುಗಾರರು ಮಾತ್ರವಲ್ಲ ಕೆಲಸಗಾರರು ಹೌದು. ಹಿಂದಿನ ಅವಧಿಯ ಅವರು ಮಂಡಿಸಿದ್ದ ಆರು ಬಜೆಟ್ ಗಳ ಪುಟಗಳಲ್ಲಿ ಅವರ ಕನಸುಗಳನ್ನು ನನಸು ಮಾಡುವ ಯೋಜನೆಗಳ ನೀಲಿನಕ್ಷೆಯನ್ನೂ ಕಾಣಬಹುದು. ನುಡಿದಂತೆ ನಡೆಯುವ ದೀಕ್ಷೆ ತೊಟ್ಟು ಮುಂದುವರಿದ ಸಿದ್ದರಾಮಯ್ಯನವರು ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನೆಲ್ಲ ಈಡೇರಿಸಿದ ಕೀರ್ತಿಗೆ ಪಾತ್ರರಾದರು. ವಚನ ಭ್ರಷ್ಟರೇ ತುಂಬಿರುವ ರಾಜಕಾರಣದಲ್ಲಿ ವಚನಪಾಲಕ ಸಿದ್ದರಾಮಯ್ಯನವರದ್ದು ಭಿನ್ನ ನಿಲುವು. ಅದು ನುಡಿದಂತೆ ನಡೆಯಬೇಕೆಂಬ ಒಲವು.
"ಅನ್ನಭಾಗ್ಯದ ಮೂಲಕ ಹಸಿವುಮುಕ್ತ ಕರ್ನಾಟಕದ ಕನಸು ನನಸಾಗಿದೆ"
— CM of Karnataka (@CMofKarnataka) January 19, 2024
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ @siddaramaiah ಅವರು ಕರ್ನಾಟಕದ ಬಗ್ಗೆ ತಾನು ಕಂಡ ಕನಸುಗಳನ್ನು ಕರ್ನಾಟಕದ ಮಹಾಜನತೆಯ ಜೊತೆ ಹಂಚಿಕೊಂಡಿದ್ದರು... ಅದು ಹಸಿವು, ಅನಾರೋಗ್ಯ, ಅನಕ್ಷರಸ್ಥತೆ, ನಿರುದ್ಯೋಗ ಮತ್ತು ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣದ ಕನಸು.… pic.twitter.com/Uaceb5MCw5
ಮೊದಲ ಅವಧಿಯಲ್ಲಿ ನೆಟ್ಟ ಯೋಜನೆಗಳ ಸಸಿಗಳು ಇಂದು ಬೇರು ಬಿಟ್ಟು ಮರಗಳಾಗಿ ಬೆಳೆದು ಆಸರೆ ನೀಡುತ್ತಿವೆ. ಈಗ ಹೊಸ ಕನಸುಗಳ ಸಸಿಗಳನ್ನು ನೆಡುವ ಕಾಲ. ಕರ್ನಾಟಕ ಇಂದು ಸಮೃದ್ದ, ಸ್ವಾವಲಂಬಿ, ಸ್ವಾಭಿಮಾನಿ ಮತ್ತು ಸೌಹಾರ್ದತೆಯ ನಾಡಾಗಿ ದೇಶದ ಗಮನಸೆಳೆಯುತ್ತಿದೆ. ರಾಜಕೀಯ ಬದಲಾವಣೆಗಳ ಕಾರಣದಿಂದ ಹಿನ್ನಡೆಗೆ ಸರಿದಿದ್ದ ಅಭಿವೃದ್ದಿಯ ಬಂಡಿಗೆ ಮುಖ್ಯಮಂತ್ರಿಗಳು ಮತ್ತೆ ಚಾಲನೆ ನೀಡಿದ್ದಾರೆ. ಜಾತಿ, ಧರ್ಮ, ಲಿಂಗಾಧಾರಿತ ವ್ಯತ್ಯಾಸಗಳನ್ನು ಮೀರಿ ರಾಜ್ಯದ ಮನೆ ಮನೆಗಳಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳಿರಬೇಕು. ಜನರ ಬೆವರಗಳಿಕೆಯ ತೆರಿಗೆ ಹಣ ಅವರ ಕಲ್ಯಾಣಕ್ಕಾಗಿ ವ್ಯಯವಾಗಬೇಕು. ಯೋಜನೆಗಳ ಫಲಶ್ರತಿಯ ಬಿಂಬ ಫಲಾನುಭವಿಗಳ ಮುಖಗಳಲ್ಲಿ ಪ್ರತಿಬಿಂಬಿಸಬೇಕು ಎನ್ನುವುದು ಅವರ ಕನಸು.
ಐದು ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿಯವರ ಕನಸುಗಳನ್ನು ನನಸು ಮಾಡುವ ಹೊಸ ಸಾಧನಗಳಾಗಿವೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಹಿಂದೆ ಸಿದ್ದರಾಮಯ್ಯನವರ ಬದುಕಿನ ಅನುಭವಗಳಿವೆ. ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿ ಎನ್ನುವುದು ಅವರ ಕನಸಿನ ಕರ್ನಾಟಕ ಅಭಿವೃದ್ದಿಯ ಮಾದರಿಯ ಮೂಲಮಂತ್ರ. ಈ ಅಭಿವೃದ್ದಿಯ ಕೇಂದ್ರದಲ್ಲಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ. ನಾಡು ಮತ್ತು ನುಡಿ ಬಗೆಗಿನ ಅವರ ಪ್ರೀತಿ, ಕಾಳಜಿ ಮತ್ತು ಬದ್ಧತೆ ಪ್ರಶ್ನಾತೀತ. ಸಿದ್ದರಾಮಯ್ಯನವರು ಕನಸುಗಾರರು ಮಾತ್ರವಲ್ಲ ಕನಸುಗಳನ್ನು ನನಸು ಮಾಡುವ ಸಾಮರ್ಥ್ಯ ಮತ್ತು ಬದ್ಧತೆ ಇರುವ ಕೆಲಸಗಾರರು ಹೌದು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications