Public Grievance: ಜನರ ಸಮಸ್ಯೆಗಳನ್ನ ಆಲಿಸಲು ಟ್ವಿಟರ್ ಬಳಕೆ ಶುರು ಮಾಡಿದ ಮುಖ್ಯಮಂತ್ರಿ ಕಚೇರಿ; ಬಳಸುವುದು ಹೇಗೆ ಗೊತ್ತಾ?
ಬೆಂಗಳೂರು ಜು 11: ರಾಜ್ಯದ ಜನರ ಸಮಸ್ಯೆ ಹಾಗೂ ಕುಂದು ಕೊರತೆಗಳನ್ನು ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಟ್ವಿಟ್ಟರ್ ಖಾತೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸುಗಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನ ಇಟ್ಟಿದ್ದಾರೆ.
ಹೌದು, ತಂತ್ರಜ್ಞಾನವನ್ನು ಕೇವಲ ವೈಯಕ್ತಿಕ ಬಳಕೆ ಮಾತ್ರವಲ್ಲ, ಸಾರ್ವಜನಿಕ ಸೇವೆಗಳಲ್ಲೂ ಬಳಸಬಹುದು ಎನ್ನುವುದು ಹೊಸ ವಿಷಯವೇನಲ್ಲ. ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ರಾಜ್ಯದದಲ್ಲೂ ಸಹ ಈ ಟ್ವಿಟ್ಟರ್ ಖಾತೆಯನ್ನ ಸಾರ್ವಜನಿಕರ ಸೇವೆಗಾಗಿ ಆರಂಭಿಸಿದ್ದಾರೆ. ಇದೀಗ ಕರ್ನಾಟಕದದಲ್ಲೂ ಸಹ ಜನರ ಕುಂದು ಕೊರತೆಯನ್ನ ಆಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ರೈಲ್ವೆಯಲ್ಲಿ ಇಂತಹ ಸೇವೆಗಳಿಗೆ ಪ್ರಮುಖವಾಗಿ ಉತ್ತಮ ಸ್ಪಂದನೆ ಸಿಗುತ್ತಿರುವುದನ್ನು ನಾವು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋದ ವಸ್ತುಗಳು, ಊಟ, ಹೀಗೆ ಸಾಕಷ್ಟು ವಿಚಾರಗಳನ್ನ ಗಮನಿಸಿದ್ದೇವೆ.
ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಕುಂದು ಕೊರತೆಗಳನ್ನು ನೇರವಾಗಿ ತಮ್ಮ ಕಚೇರಿಯ ಗಮನಕ್ಕೆ ತರಲು ಟ್ವಿಟ್ಟರ್ ಬಳಕೆಗೆ ಮುಂದಾಗಿದ್ದಾರೆ. ಸಾರ್ವಜನಿಕರು ತಾವು ಇರುವಲ್ಲಿಂದಲೇ ತಮ್ಮ ಕುಂದು ಕೊರತೆಗಳನ್ನು ಸಿಎಂ ಕಚೇರಿಯ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ.
https://twitter.com/osd_cmkarnataka ಹೆಸರಿನ ಟ್ವಿಟರ್ ಖಾತೆಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ತಮ್ಮ ಸಾರ್ವಜನಿಕ ಕುಂದು ಕೊರತೆಗಳ ಕುರಿತಾದ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಎಲ್ಲವನ್ನೂ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಸಿಬ್ಬಂದಿಯ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ.
ಸಾರ್ವಜನಿಕ ಕುಂದುಕೊರತೆಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಚೇರಿಯ ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದ್ದು ವೈಯುಕ್ತಿಕ ಸಮಸ್ಯೆಗಳನ್ನು ಈ ಖಾತೆಗೆ ಟ್ಯಾಗ್ ಮಾಡದೆ ಅವುಗಳನ್ನು ನೇರವಾಗಿ ಸಂಬಂಧಪಟ್ಟವರ ಗಮನಕ್ಕೆ ತರಬಹುದಾಗಿದೆ.
ರಾಜ್ಯದ ಜನತೆ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಸಾರ್ವಜನಿಕ ಸಮಸ್ಯೆಗಳೆಂದರೆ ನೀರು, ಚರಂಡಿ, ಬೀದಿ ದೀಪ, ಸಾರ್ವಜನಿಕರಿಗೆ ಉಂಟಾಗುವ ತೊಂದರೆ, ರಸ್ತೆ, ಬಸ್ ಸಮಸ್ಯೆ, ಶಾಲೆ ಕಾಲೇಜು, ಆಂಬುಲೆನ್ಸ್, ಆಸ್ಪತ್ರೆ ವೈದ್ಯರ ಕೊರತೆಯಂತಹ ಸಾರ್ವಜನಿಕರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಮಾತ್ರ ಈ ಟ್ವಿಟ್ಟರ್ ಖಾತೆಯನ್ನು ಬಳಸಿಕೊಳ್ಳಿ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಇನ್ನೂ ನಿಮ್ಮ ಕಣ್ಣಿಗೆ ಬೀಳುವ ಯಾವುದೇ ಸಾರ್ವಜನಿಕ ಸಮಸ್ಯೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತನ್ನಿ, ಆ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿ ನಿಮ್ಮ ಪಾಲು ಇರಲಿ.












Click it and Unblock the Notifications