ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಖಡಕ್ ವಾರ್ನಿಂಗ್
ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರಿಗೆ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿದೆ.
ನವದೆಹಲಿ, ಮೇ 3: ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ಅವರ ನಡುವಿನ ವ್ಯಕ್ತಿ ಸಂಘರ್ಷ ತಾರಕ್ಕೇರಿದ್ದು, ಇದರಿಂದಾಗಿ, ಹೆಚ್ಚಾಗಿ ಪಕ್ಷದ ಇಮೇಜ್ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರಿಗೆ ಕಟ್ಟುನಿಟ್ಟಾದ ಸೂಚನೆಯೊಂದರನ್ನು ರವಾನಿಸಿದೆ.
ಅದರಂತೆ, ಸದ್ಯದಲ್ಲೇ ನಡೆಯಲಿರುವ ತಮ್ಮ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯ ಸಮಾವೇಶಕ್ಕೆ ಹಾಜರಾಗದಿರಲು ಈಶ್ವರಪ್ಪ ಅವರಿಗೆ ನಿರ್ಬಂಧ ವಿಧಿಸಿದೆ.

ರಾಜ್ಯ ನಾಯಕರ ಈ ಒಳಜಗಳ ಈಗ ರಾಜ್ಯದ ಮೂಲೆಮೂಲೆಗಳಲ್ಲೂ ಮಾರ್ದನಿಸುತ್ತಿರುವ ನಡುವೆಯೇ ಇದೇ ತಿಂಗಳ 6ರಂದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ನಡೆಯಲಿದೆ. ಆದರೆ, ಅದಕ್ಕೆ ನಾಯಕರ ಒಳಜಗಳದ ಕಾವೂ ಆವರಿಸಿದೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರಿಗೆ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿದೆ.
ಈ ಬಗ್ಗೆ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ರಾಜ್ಯ ಬಿಜೆಪಿಯ ಹೊಣೆ ಹೊತ್ತಿರುವ ಮುರಳೀಧರ್ ರಾವ್ ಅವರಿಗೆ ಸಂದೇಶವೊಂದನ್ನು ರವಾನಿಸಿ, ಈಶ್ವರಪ್ಪ ಅವರ ಮೊಂಡಾಟವನ್ನು ಕೈಬಿಡಲು ಸೂಚಿಸುವಂತೆ ಹೇಳಿದ್ದಾರೆ.
ಏಕೆಂದರೆ, ಇತ್ತೀಚೆಗೆ ಈಶ್ವರಪ್ಪ ಅವರು, ತಮ್ಮ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಮುಂದುವರಿಸಲು ಖುದ್ದು ಅಮಿತ್ ಶಾ ಅವರೇ ತಮಗೆ ಅನುಮತಿ ನೀಡಿದ್ದಾರೆಂದು ಹೇಳಿದ್ದರು. ಆದರೆ, ಇದನ್ನು ದೆಹಲಿ ಬಿಜೆಪಿ ಮೂಲಗಳು ತಳ್ಳಿಹಾಕಿವೆ.












Click it and Unblock the Notifications