ಗದಗ ಬಳಿ ಭೀಕರ ರಸ್ತೆ ಅಪಘಾತ: ಹತ್ತು ಮಂದಿ ಸಾವು
ಗದಗ, ಏ 17: ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ಗದಗ್ ಬರುತ್ತಿದ್ದ ಮಾರುತಿ ವ್ಯಾನಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ 10 ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ತಾಲೂಕು ಹರ್ಲಾಪುರ ಬಳಿ ಭಾನುವಾರ (ಏ17) ರಾತ್ರಿ 7ಗಂಟೆ ಸುಮಾರಿಗೆ ನಡೆದಿದೆ.
ಮೃತಪಟ್ಟ ಹತ್ತು ಜನರಲ್ಲಿ ಒಂದು ಮಗು ಹಾಗೂ 6 ಜನ ಮಹಿಳೆಯರು ಸೇರಿದ್ದಾರೆ.
ಮೃತ ಪಟ್ಟವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಮಾರುತಿ ವ್ಯಾನ್ ನಲ್ಲಿ ವಾಪಸ್ ನಗರಕ್ಕೆ ಬರುವಾಗ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಅಭಿಷೇಕ, ಪ್ರಿಯಾ, ಆಕಾಶ್, ರತ್ನಾ , ಶೇಖವ್ವ ಬಸಮ್ಮ, ಶಾಂತವ್ವ, ಕರಣ್, ಶಂಕರಗೌಡ್, ಅಮಿತ್ ಎಂದು ಗುರುತಿಸಲಾಗಿದೆ.
ಪ್ರಕರಣವು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಗಾಯಗೊಂಡ ನಾಲ್ವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿಯನ್ನು ಹಿಂದಿಕ್ಕಲು ವೇಗವಾಗಿ ಬಸ್ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಬಸ್ ಚಾಲಕ ಮತ್ತು ನಿರ್ವಾಹಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.