ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು
ಬೆಂಗಳೂರು, ಮೇ 13 : 'ಎರಡು ವರ್ಷಗಳಲ್ಲಿ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆ. ಮೂರು ಬಜೆಟ್ ಮೂಲಕ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳ ಪೈಕಿ, 100ಕ್ಕೂ ಹೆಚ್ಚನ್ನು ಈಡೇರಿಸಿದ್ದೇವೆ. 2 ವರ್ಷದ ಆಡಳಿತ ತೃಪ್ತಿ ತಂದಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಬುಧವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಸಿದ್ದರಾಮಯ್ಯ ಅವರು, '2013ರಲ್ಲಿ ಜನಾದೇಶ ಪಡೆದ ಸರ್ಕಾರ, ಅವರ ನಿರೀಕ್ಷೆಗೆ ಧಕ್ಕೆ ತರದಂತೆ' ಕೆಲಸ ಮಾಡಿದೆ ಎಂದು ಘೋಷಿಸಿದರು. [ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು]
'ಸರ್ಕಾರ ಮೂರು ಬಜೆಟ್ಅನ್ನು ಮಂಡನೆ ಮಾಡಿದ್ದು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಫೈಕಿ 100ನ್ನು ಈಡೇರಿಸಿದೆ. 1 ಕೋಟಿ ಬಿಪಿಎಲ್ ಕಾರ್ಡ್ ನೀಡಲಾಗಿದ್ದು, 4 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ತಲುಪುತ್ತಿದೆ' ಎಂದು ಹೇಳಿದರು.
'ಹಿಂದೆ ಆಡಳಿತ ನಡೆಸಿದ ಬಿಜೆಪಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಸಿತ್ತು. ಯಾವ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬ ತೀರ್ಮಾನವನ್ನು ಜನರು ತೆಗೆದುಕೊಳ್ಳಬೇಕು. ಅವರ ತೀರ್ಪಿಗೆ ಎಲ್ಲವನ್ನು ಬಿಟ್ಟಿದ್ದೇನೆ ಎಂದರು. ಎರಡು ವರ್ಷಗಳಲ್ಲಿ ಸರ್ಕಾರ ರಾಜ್ಯದ ಜನರಿಗೆ ನೀಡಿರುವ 10 ಪ್ರಮುಖ ಯೋಜನೆಗಳ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಿದ್ದರಾಮಯ್ಯ ಕನಸಿನ ಅನ್ನಭಾಗ್ಯ ಯೋಜನೆ
ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು. 2015ರ ಮೇ 1ರಿಂದ ಇದರಲ್ಲಿ ಬದಲಾವಣೆ ಮಾಡಿ ಪ್ರತಿ ಕುಟುಂಬ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ಜೊತೆ ರಿಯಾಯಿತಿ ದರದಲ್ಲಿ ಉಪ್ಪು ಮತ್ತು ತಾಳೆ ಎಣ್ಣೆಯನ್ನು ವಿತರಣೆ ಮಾಡಲಾಗುತ್ತಿದೆ.

ಮೊಬೈಲ್ ಆಡಳಿತಕ್ಕಾಗಿ ಮೊಬೈಲ್ ಒನ್
ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು 4 ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ 'ಮೊಬೈಲ್ ಒನ್' ಸೇವೆಯನ್ನು ದೇಶದಲ್ಲೇ ಮೊದಲ ಬಾರಿಗೆ ಆರಂಭಿಸಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಸೇವೆಯನ್ನು ಲೋಕಾರ್ಪಣೆ ಮಾಡಿದರು. ಮೊಬೈಲ್ ಆಡಳಿತದತ್ತ ಗಮನಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮಹತ್ವದ ಹೆಜ್ಜೆ ಇಟ್ಟಿತು.

ವಿವಾದಕ್ಕೆ ಕಾರಣವಾದ ಶಾದಿಭಾಗ್ಯ
ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ. ನೆರವು ನೀಡುವ 'ಶಾದಿಭಾಗ್ಯ' ಯೋಜನೆ ಬಗ್ಗೆ ಅಪಸ್ವರ ಕೇಳಿಬಂದಿತು. ಈ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಯಿತು. ಆರ್ಥಿಕ ಲಭ್ಯತೆ ನೋಡಿಕೊಂಡು ಎಲ್ಲ ವರ್ಗಗಳ ಬಡ ಮಹಿಳೆಯರಿಗೆ ಯೋಜನೆ ವಿಸ್ತರಣೆಗೆ ಮಾಡಲು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.

ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ
ಶಾಲಾ ಮಕ್ಕಳಿಗಾಗಿ ಸಿದ್ದರಾಮಯ್ಯ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದರು. ಯೋಜನೆಯಡಿ 64 ಸಾವಿರ ಅಂಗನವಾಡಿ, 51 ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1 ಕೋಟಿಗೂ ಹೆಚ್ಚು ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಣೆ ಮಾಡಲಾಗುತ್ತಿದೆ. ಇದನ್ನು ಐದು ದಿನಗಳಿಗೆ ವಿಸ್ತರಣೆ ಮಾಡುವ ಉದ್ದೇಶವೂ ಸರ್ಕಾರದ ಮುಂದಿದೆ.

ಮೈತ್ರಿ ಮತ್ತು ಮನಸ್ವಿನಿ ಯೋಜನೆಗಳು
ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಪ್ರತಿ ತಿಂಗಳು ರೂ 500 ಮಾಸಾಶನ ನೀಡುವ 'ಮನಸ್ವಿನಿ' ಯೋಜನೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ರೂ 500 ಮಾಸಾಶನ ನೀಡುವ 'ಮೈತ್ರಿ' ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು.

ಗ್ರಾಮೀಣ ಭಾಗಕ್ಕಾಗಿ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆ
ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2೦ ಕಿ.ಮೀ.ಯಂತೆ ಒಟ್ಟು 3,714 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಪ್ರಥಮ ಚಿಕಿತ್ಸೆ ನೀಡಲು ಬಂತು ಬೈಕ್ ಆಂಬ್ಯುಲೆನ್ಸ್
ಸಂಚಾರ ದಟ್ಟಣೆ ಹೆಚ್ಚಿರುವ ಬೆಂಗಳೂರಿನಂತಹ ನಗರದಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಸರ್ಕಾರ ಬೈಕ್ ಅಂಬ್ಯುಲೆನ್ಸ್ ಪರಿಚಯಿಸಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಸೋಲಾರ್ ಬಳಕೆ ಉತ್ತೇಜಿಸಲು ರೈತ ಸೂರ್ಯ ಯೋಜನೆ
ರೈತರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ಸರ್ಕಾರಕ್ಕೆ ಮಾರಾಟ ಮಾಡುವ 'ಸೂರ್ಯ ರೈತ' ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು. ರಾಜ್ಯದಲ್ಲಿ ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಇದನ್ನು ಜಾರಿಗೊಳಿಸಿತು. ರೈತರು ಉತ್ಪಾದನೆಯಾಗುವ ವಿದ್ಯುತ್ನಲ್ಲಿ ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟು ಬಳಕೆ ಮಾಡಿಕೊಂಡು ಹೆಚ್ಚುವರಿ ವಿದ್ಯುತ್ಅನ್ನು ಪ್ರತಿ ಯೂನಿಟ್ಗೆ 9.56 ರೂ. ದರದಲ್ಲಿ ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.

ರೈತರಿಗಾಗಿ ಬಂತು ಕೃಷಿ ಭಾಗ್ಯ ಯೋಜನೆ
ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶ. ಮೊದಲ ಹಂತದಲ್ಲಿ 23 ಜಿಲ್ಲೆಗಳ ವ್ಯಾಪ್ತಿಯ 5 ಮುಖ್ಯ ಒಣ ಭೂಮಿ ವಲಯಗಳ 45 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಯೋಜನೆ ಜಾರಿಗೆ ಬಂದಿದೆ.

ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆ
ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರೆಯದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವಾರ್ಷಿಕ ರೂ 15,000 ನೆರವು ನೀಡುವುದು 'ವಿದ್ಯಾಸಿರಿ' ಯೋಜನೆ. ಪ್ರತಿ ತಿಂಗಳಿಗೆ ರೂ 1,500 ದಂತೆ ಹತ್ತು ತಿಂಗಳಿಗೆ ರೂ 15,000 ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುತ್ತದೆ.












Click it and Unblock the Notifications