ರಾಜ್ಯದ ನೀರು ಸಂಗ್ರಹಕ್ಕೆ ಆಂಧ್ರ, ತೆಲಂಗಾಣ ಕೊಕ್ಕೆ
ಬಳ್ಳಾರಿ, ನ, 28 : ತುಂಗಭದ್ರಾ ಜಲಾಶಯದ ಮೇಲ್ಘಾಗದಲ್ಲಿ ಇನ್ನೊಂದು ಡ್ಯಾಂ ನಿರ್ಮಿಸಿ 35 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಪ್ರಸ್ತಾವನೆ ಇಟ್ಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನು ಖಂಡಿಸಿರುವ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕಾರ್ಯದರ್ಶಿ ಕೆ. ರಾಮಕೃಷ್ಣ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ತುಂಗಭದ್ರಾ ನೀರು ಹಂಚಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ರಾಯಲ್ ಸೀಮಾ ಮತ್ತು ಮೆಹಬುಬ್ ನಗರದ ಅನೇಕ ಪ್ರದೇಶಗಳು ಡ್ಯಾಂ ನಿಂದ ನೀರು ಪಡೆದುಕೊಳ್ಳಬೇಕಾಗಿತ್ತು. ಆದರೆ ಸಮರ್ಪಕ ನೀರು ರೈತರಿಗೆ ದೊರೆಯದೆ ವಂಚನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.[ಕಾವೇರಿ ಡ್ಯಾಂ ಯೋಜನೆಗೆ ಅರಣ್ಯ ಇಲಾಖೆ ವಿರೋಧ]
ಒಂದು ವೇಳೆ ಇನ್ನೊಂದು ಡ್ಯಾಂ ನಿರ್ಮಿಸಿದರೆ ಆಂಧ್ರ ಪ್ರದೇಶಕ್ಕೆ ತುಂಗಭದ್ರಾ ನದಿ ನೀರು ಕನಸಾಗುತ್ತದೆ. ಇಂಥ ಯೋಜನೆಗಳ ಜಾರಿ ಅಥವಾ ಪ್ರಸ್ತಾವನೆ ಇಡುವ ಮುನ್ನ ಕೃಷ್ಣಾ ಮೇಲ್ದಂಡೆ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕಾದದ್ದು ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.
ತೆಲಂಗಾಣ ಸರ್ಕಾರ ಕರ್ನಾಟಕದ ಈ ಕ್ರಮದ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಲು ತೀರ್ಮಾನಿಸಿದೆ. ಮೇಲ್ದಂಡೆ ಪ್ರಾಧಿಕಾರದ ಜತೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪರಿಸ್ಥಿತಿ ವಿವರಿಸಿ ದೂರು ದಾಖಲಿಸಲಾಗುವುದು ಎಂದು ತೆಲಂಗಾಣ ನೀರಾವರಿ ಮಂತ್ರಿ ಹರೀಶ್ ರಾವ್ ತಿಳಿಸಿದ್ದಾರೆ.[ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ]
ಇದು ಸಣ್ಣ ವಿಷಯವಲ್ಲ. ನಾಲೆಗಳ ಮೂಲಕ ಕರ್ನಾಟಕ ಸಾಕಷ್ಟು ನೀರು ಪಡೆದುಕೊಳ್ಳುತ್ತಿದೆ. ಒಂದು ವೇಳೆ ಇನ್ನೊಂದು ಡ್ಯಾಂ ನಿರ್ಮಾಣಕ್ಕೆ ಮುಂದಾದರೆ ನೀರು ಹೊಸ ಡ್ಯಾಂ ತುಂಬಿದ ನಂತರ ತುಂಗಭದ್ರಾ ಡ್ಯಾಂ ಗೆ ಹರಿಯಬೇಕು. ತುಂಗಭದ್ರಾ ಡ್ಯಾಂ ಸಂಪೂರ್ಣ ತುಂಬಿದ ನಂತರ ಹೆಚ್ಚುವರಿ ನೀರನ್ನು ನಮಗೆ ಬಿಡದೆ ಮೇಲ್ಭಾಗದಲ್ಲಿ ಮತ್ತೊಂದು ಡ್ಯಾಂ ನಿರ್ಮಿಸಿ ಶೇಖರಣೆ ಮಾಡಿಕೊಳ್ಳುವುದು ಯಾವ ನ್ಯಾಯ? ಎಂದು ಆಂಧ್ರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.