ಕುಮಾರಸ್ವಾಮಿ ಪದಗ್ರಹಣಕ್ಕೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಗೈರು
ಬೆಂಗಳೂರು, ಮೇ 22: ಚುನಾವಣೆಗೂ ಮೊದಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸದವರೆಗೆ ನಡೆದು ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಬುಧವಾರ ನಡೆಯಲಿರುವ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಲಿದ್ದಾರೆ.
ಇದಕ್ಕೆ ಬದಲಾಗಿ ಅವರು ಇಂದು ಸಂಜೆಯೇ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಶುಭಾಶಯ ಕೋರಲಿದ್ದಾರೆ.
ಬುಧವಾರ ನಿಗದಿಯಾದ ಪ್ರಮುಖ ಕೆಲಸಗಳು ಇರುವುದರಿಂದ ಅವರು ಇಂದು ಸಂಜೆಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಲಿದ್ದಾರೆ.

ಭೇಟಿ ನಂತರ ಇವತ್ತು ರಾತ್ರಿಯೇ ಅವರು ಹೈದರಾಬಾದ್ ಗೆ ವಾಪಾಸಾಗಲಿದ್ದಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇತರ ಮೈತ್ರಿಕೂಟ ರಚಿಸುವ ಸಂಬಂಧ ಕೆ.ಸಿ. ರಾವ್ ಮುಂಚೂಣಿಯಲ್ಲಿದ್ದರು. ಇದೇ ವೇಳೆಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಬಿಜೆಪಿ ಹೊರತು ಪಡಿಸಿ ಎಲ್ಲಾ ಪ್ರಾದೇಶಿಕ ಮುಖ್ಯಪಕ್ಷಗಳು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುತ್ತಿವೆ.
ಒಂದು ರೀತಿಯಲ್ಲಿ ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮವನ್ನು ಬಿಜೆಪಿಯೇತರ ಮೈತ್ರಿಕೂಟದ ಚಿಮ್ಮುಹಲಗೆ ಕಾರ್ಯಕ್ರಮ ಎಂದೇ ಬಿಂಬಿಸಲಾಗಿದೆ. ಆದರೆ ಅದರ ಮುಂದಾಳು ಕೆಸಿಆರ್ ಈ ಕಾರ್ಯಕ್ರಮಕ್ಕೇ ಗೈರಾಗಲಿದ್ದಾರೆ.












Click it and Unblock the Notifications