ಕಾಲು ಕಳೆದುಕೊಂಡರೂ ಆಂಬುಲೆನ್ಸ್ ಗೆ ಕರೆ ಮಾಡಿದ!
ಬೆಂಗಳೂರು, ಆ, 21 : ರೈಲಿನಡಿ ಸಿಕ್ಕು ತನ್ನ ಕಾಲು ಕಳೆದುಕೊಂಡು ತೀವ್ರ ರಕ್ತ ಸ್ರಾವದಿಂದ ನರಳುತ್ತಿದ್ದ ಟೆಕ್ಕಿ ಸ್ವತಃ 108ಕ್ಕೆ ಕರೆ ಮಾಡಿದಲ್ಲದೇ ಆಂಬುಲೆನ್ಸ್ ಚಾಲಕನಿಗೆ ಮಾರ್ಗದರ್ಶನವನ್ನು ನೀಡಿ ಇದೀಗ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
24 ವರ್ಷದ ಸಾಪ್ಟ್ವೇರ್ ಇಂಜಿನಿಯರ್ ನಾಸೀರ್ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಒಂದು ಕಾಲು ಕಳೆದುಕೊಂಡೂ ನೋವು ಅನುಭವಿಸುತ್ತಲೇ 108ಕ್ಕೆ ಕರೆ ಮಾಡಿದವರು. ಸ್ನೇಹಿತನ ಭೇಟಿಗೆಂದು ಮೈಸೂರಿಗೆ ತೆರಳುತ್ತಿದ್ದ ನಾಸೀರ್ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಏರಿದ್ದಾರೆ. ಗಾಳಿ ಸೇವನೆ ಮಾಡಲೆಂದು ಬಾಗಿಲ ಅಂಚಿಗೆ ಬಂದು ನಿಂತಿದ್ದಾರೆ. ಆದರೆ ರೈಲು ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ಸಾಗಿದ ತಕ್ಷಣ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ.
ನಾಸೀರ್ ಎದ್ದೇಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಎರಡೂ ಕಾಲುಗಳು ಶಕ್ತಿ ಕಳೆದುಕೊಂಡು ತೀವ್ರ ರಕ್ತಸ್ರಾವ ಆಗುತ್ತಿರುವುದು ಅರಿವಿಗೆ ಬಂದಿದೆ. ಸಹಾಯಕ್ಕೆ ಸುತ್ತಲೂ ನೋಡಿದರೆ ಯಾರು ಕಂಡಿಲ್ಲ.
ಈ ವೇಳೆ ವಿಶ್ವಾಸ ಕಳೆದುಕೊಳ್ಳದ ನಾಸೀರ್ ತಮ್ಮ ಮೊಬೈಲ್ನಿಂದ 108ಕ್ಕೆ ಕರೆ ಮಾಡಿದ್ದಾರೆ. ಅಲ್ಲದೇ ಕರೆ ಮಾಡಿ ತನ್ನ ಸ್ನೇಹಿತನಿಗೂ ವಿಷಯ ತಿಳಿಸಿದ್ದಾರೆ. ಆದರೆ 108ರ ಚಾಲಕನಿಗೆ ಯಾವ ಜಾಗ ತಲುಪಬೇಕೆಂದು ಗೊತ್ತಾಗಿಲ್ಲ. ರಕ್ತ ಸ್ರಾವದ ನೋವಿನ ನಡುವೆಯೇ ನಾಸೀರ್ ಆಂಬುಲೆನ್ಸ್ ಚಾಲಕನಿಗೆ ತಾವಿರುವ ಜಾಗದ ಮಾಹಿತಿ ನೀಡುತ್ತಾರೆ.
'ನಾನು ಸ್ನೇಹಿತನ್ನು ನೋಡಲು ಮೈಸೂರಿಗೆ ತೆರಳುತ್ತಿದ್ದೆ. ಬೈಯಪ್ಪನಹಳ್ಳಿ ನಿಲ್ದಾಣ ತಲುಪಿದ ತಕ್ಷಣ ಟಿಕೆಟ್ ಪಡೆದುಕೊಂಡು ರೈಲಿದ್ದ ಕಡೆ ಧಾವಿಸಿದೆ. ರೈಲು ಕೆಲ ಮೀಟರ್ ದೂರ ಚಲಿಸಿದ ನಂತರ ಗಾಳಿ ಸೇವಿಸಲು ಬಾಗಿಲ ಬಳಿ ಬಂದೆ, ಆದರೆ ಜಾರಿ ಕೆಳಕ್ಕೆ ಬಿದ್ದು ಕಾಲು ಕಳೆದುಕೊಂಡೆ' ಎಂದು ಘಟನಾವಳಿಗಳನ್ನು ನಾಸೀರ್ ಬಿಚ್ಚಿಟ್ಟರು.
ನಾಸೀರ್ ರೈಲಿಂದ ಬಿದ್ದಿರುವುದು ಮುಖ್ಯ ನಿಲ್ದಾಣವೇನಾಗಿರಲಿಲ್ಲ. ಅಲ್ಲಿಗೆ ತಲುಪಲು ಆಂಬುಲೆನ್ಸ್ ಚಾಲಕನಿಗೆ ಮಾರ್ಗವೂ ಗೊತ್ತಿರಲಿಲ್ಲ. ಆದರೆ ನಾಸೀರ್ ಸರಿಯಾದ ರೀತಿಯಲ್ಲಿ ದಾರಿ ತಿಳಿಸುತ್ತಿದ್ದರು. ಅಂತೂ ಕೊನೆಗೆ ಆಂಬುಲೆನ್ಸ್ ಮತ್ತು ಸಾಸೀರ್ ಸ್ನೇಹಿತ ಅವಘಡದ ಜಾಗ ತಲುಪಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ರೈಲಿಂದ ಬಿದ್ದ ನಾಸೀರ್ ಅವರನ್ನು ಮಧ್ಯಾಹ್ಹ 2.45 ರಷ್ಟೊತ್ತಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ನಾಸೀರ್ ಇಂದಿರಾನಗರದ ಐಟಿ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದಾರೆ. ವೈದ್ಯರು ಹೇಳುವಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ರಕ್ತಸ್ರಾವವಾದರೆ ಯಾವ ವ್ಯಕ್ತಿಯೂ ಅರ್ಧಗಂಟೆ ಮೇಲೆ ಪ್ರಜ್ಞೆಯಿಂದಿರಲಾರ. ಇದೊಂದು ಆಶ್ಚರ್ಯಕರ ಸಂಗತಿಯೇ ಸರಿ. ನಾಸೀರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಇನ್ನೊಂದು ವಾರದಲ್ಲಿ ಅವರಿಗೆ ಕೃತಕ ಕಾಲು ಅಳವಡಿಸಲಾಗುವುದು ಎಂದು ತಿಳಿಸಿದರು.