ತಮಿಳುನಾಡಿನಲ್ಲಿ ಕಣ್ಮರೆಯಾಗಿದ್ದ ಮುಜರಾಯಿ ಸಚಿವರ ಮಗಳ ಲವ್ ಕಹಾನಿ
ಬೆಂಗಳೂರು, ಮಾ. 07: ತಮಿಳುನಾಡು ಮುಜರಾಯಿ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿಯ ಕಿಡ್ನಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರಿಯಕರನ ಜತೆ ಓಡಿ ಬಂದಿರುವ ಜಯ ಕಲ್ಯಾಣಿ ಕರ್ನಾಟಕದಲ್ಲಿ ಮದುವೆಯಾಗಿ ಇದೀಗ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾಳೆ.
ತಮಿಳುನಾಡಿನ ಮುಜರಾಯಿ ಇಲಾಖೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ ಎಂಬಿಬಿಎಸ್ ಪದವೀಧರೆ. ಡಿಪ್ಲೋಮಾ ಮಾಡಿ ಚೆನ್ನೈನಲ್ಲಿ ಬ್ಯುಜಿನೆಸ್ ಮಾಡುತ್ತಿರುವ ಸತೀಶ್ ಬಾಬು ಎಂಬುವರ ಜತೆ ಓಡಿ ಬಂದು ಕರ್ನಾಟಕದ ಮಠವೊಂದರಲ್ಲಿ ಮದುವೆಯಾಗಿದ್ದಾರೆ. ಅಲ್ಲದೇ ತನಗೆ ರಕ್ಷಣೆ ಕೊಡಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಜಯಕಲ್ಯಾಣಿಮನವಿ ಮಾಡಿ ದೂರು ನೀಡಿದ್ದಾರೆ.
ಪ್ರಿಯಕರ ಸತೀಶ್ ಕುಮಾರ್ ಮತ್ತು ಜಯ ಕಲ್ಯಾಣಿ ಪರಸ್ಪರ ಪ್ರೀತಿಸುತ್ತಿದ್ದರು. ಜಯ ಕಲ್ಯಾಣಿ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನಿಂದ ಜಯ ಕಲ್ಯಾಣಿ ಓಡಿ ಬಂದಿದ್ದಾರೆ. ಈ ಕುರಿತು ಚೆನ್ನೈನಲ್ಲಿ ಅವರ ತಂದೆ ಶೇಖರ್ ಬಾಬು ಅಪಹರಣ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದ್ದರು.
ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಸತೀಶ್ ಕುಮಾರ್ ಮತ್ತು ಜಯ ಕಲ್ಯಾಣಿ ಪ್ರೇಮ ವಿವಾಹವಾಗಿದ್ದಾರೆ. ಜತೆಗೆ ನಮಗೆ ರಕ್ಷಣೆ ಕೊಡಿ ಎಂದು ಕನ್ನಡ ಪರ ಸಂಘಟನೆಗಳ ಮೊರೆ ಹೋಗಿದ್ದಾರೆ. ಅಂತಿಮವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ನಮಗೆ ಜೀವ ಭಯವಿದೆ. ನಮ್ಮ ಕುಟುಂಬ ನಮಗೆ ತೊಂದರೆ ಕೊಡುವ ಸಾಧ್ಯತೆಯಿದೆ ಎಂದು ಜಯ ಕಲ್ಯಾಣಿ ಸ್ವತಃ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇನ್ನು ತಾನು ಪ್ರೀತಿಸಿ ಮದುವೆಯಾಗುತ್ತಿದ್ದೇನೆ ಎಂಬುದರ ಬಗ್ಗೆ ಜಯ ಕಲ್ಯಾಣಿ ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದೆ. ನನ್ನ ಹೆಸರು ಜಯ ಕಲ್ಯಾಣಿ. ನಾನು ಎಂಬಿಬಿಎಸ್ ಪದವಿ ಮಾಡಿದ್ದೇನೆ. ನಾನು ಪ್ರೀತಿಸಿ ಮದುವೆಯಾಗಿರುವ ಹುಡುಗ ಸತೀಶ್ ಕುಮಾರ್ ಡಿಪ್ಲೋಮಾ ಮಾಡಿದ್ದಾರೆ. ಚೆನ್ನೈನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ನಾನು ಯಾರ ಬಲವಂತಕ್ಕೂ ಮಣಿದು ಬಂದಿಲ್ಲ. ನಮಗೆ ರಕ್ಷಣೆ ಬೇಕಿದೆ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಜಯ ಕಲ್ಯಾಣಿಯನ್ನು ಮದುವೆಯಾಗಿರುವ ಸತೀಶ್ ಕುಮಾರ್ ಅವರ ಕುಟುಂಬದವರನ್ನು ತಮಿಳುನಾಡಿನಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಬ್ಬರೂ ಅಪ್ರಾಪ್ತರಲ್ಲ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೂ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಕೂಡಲೇ ಈ ದಂಪತಿಗೆ ರಕ್ಷಣೆ ಕೊಡಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ತಮಿಳುನಾಡಿನ ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಚಿವರ ಮಗಳನ್ನು ಮದುವೆಯಾಗಿರುವ ವ್ಯಕ್ತಿಯನ್ನು ಪೊಲೀಸರು ರಕ್ಷಿಸಬೇಕಿದೆ. ಕರ್ನಾಟಕ ಪೊಲೀಸರನ್ನು ನಂಬಿ ಬಂದಿರುವ ಈ ಜೋಡಿಯನ್ನು ಪೊಲೀಸರು ರಕ್ಷಿಸಬೇಕು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಮಾಡಿದ್ದಾರೆ.
Recommended Video