'ಪದ್ಮನಾಭನಗರದ ಸೂಚನೆ ಪಾಲಿಸಿದ್ರೆ ಅದೇ ಪಕ್ಷದಲ್ಲಿರುತ್ತಿದ್ದೆ'
ಬೆಂಗಳೂರು, ಮಾ. 30 : ಸೋಮವಾರದ ವಿಧಾನಸಭೆ ಕಲಾಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರು ಇಷ್ಟು ದಿನ ಮಾಡಿದ ಆರೋಪಗಳಿಗೆ ಖಡಕ್ಆಗಿಯೇ ತಿರುಗೇಟು ನೀಡಿದರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಎದ್ದುನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಹಿಂದೆಲ್ಲಾ ಬಜೆಟ್ ಮಂಡಿಸುವಾಗ ಸಿದ್ದರಾಮಯ್ಯ ಪದ್ಮನಾಭನಗರದ ಸೂಚನೆಗಳನ್ನು ಪಾಲಿಸುತಿದ್ದರು. ಅದಕ್ಕೆ ಆಗ ಬಜೆಟ್ ಚೆನ್ನಾಗಿತ್ತು' ಎಂದು ಹೇಳಿದ್ದ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದರು.

'ನಾನು ಪದ್ಮನಾಭನಗರದ ಸೂಚನೆಗಳನ್ನು ಪಾಲಿಸಿದ್ದರೆ, ಅದೇ ಪಕ್ಷದಲ್ಲಿರುತ್ತಿದ್ದೆ. ಧರ್ಮಸಿಂಗ್ ಅವಧಿಯಲ್ಲಿ ನಾನು ಡಿಸ್ಮಿಸ್ ಆಗುತ್ತಿರಲಿಲ್ಲ' ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. 'ನೋವು ತಿಂದವರು ಏನನ್ನೂ ಮರೆಯುವುದಿಲ್ಲ. ನನಗೆ 2 ಬಾರಿ ಸಿಎಂ ಆಗುವ ಅವಕಾಶ ತಪ್ಪಿತ್ತು' ಎಂದು ಹೇಳಿದರು. [ಗೌಡರೇ ಮತ್ತೊಮ್ಮೆ ಈ ರಾಜ್ಯದಲ್ಲಿ ಹುಟ್ಟಬೇಡಿ]
ಸಿಎಂ ಸ್ಥಾನ ಬೇಡ ಅಂದ್ರು : '2004-05ರಲ್ಲಿ ದೇವೇಗೌಡರು ಸಿಎಂ ಸ್ಥಾನ ಬೇಡ ಅಂದರು. ಶರದ್ ಪವಾರ್ ಅವರು ನೀವೇ ಸಿಎಂ ಸ್ಥಾನ ತೆಗೆದುಕೊಳ್ಳಿ ಎಂದು ಹೇಳಿದ್ದರು. ಆದರೆ, ನಾವೇ ಎಸ್ಎಂಕೆ ಸರ್ಕಾರದ ಮೇಲೆ ಚಾರ್ಜ್ಶೀಟ್ ಮಾಡಿದ್ದೇವೆ, ಹಾಗಾಗಿ ನಮಗೆ ಸಿಎಂ ಸ್ಥಾನ ಬೇಡ, ಡಿಸಿಎಂ ಬೇಕು ಎಂದು ದೇವೇಗೌಡರು ಸೂಚಿಸಿದ್ದರು' ಎಂದು ಸಿದ್ದರಾಮಯ್ಯ ತಿಳಿಸಿದರು.[ದೇವೇಗೌಡರೇ ಐಯಾಮ್ ಸಾರಿ ಅಂದ ಪರಮೇಶ್ವರ್]
'ಅಂದು ನಡೆದ ಘಟನೆಗೆ ಸಾಕ್ಷಿಯಾದ ಕೆಲವರು ಇನ್ನೂ ಬದುಕಿದ್ದಾರೆ, ಪಿಜಿಆರ್ ಸಿಂಧ್ಯಾ, ಸಿ.ಎಂ.ಇಬ್ರಾಹಿಂ, ಶರದ್ ಪವಾರ್ ಬಳಿ ಹೋಗಿ ಸತ್ಯ ಕೇಳೋಣವೇ?' ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು. ಈ ಮಾತಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು, 'ಹಾಗಾದ್ರೆ ಐದು ದಿನ ದೆಹಲಿಗೆ ಬಂದು ಕುಳಿತ್ತದ್ದು ಏಕೆ? ಶರದ್ಪವಾರ್ ಕಾಂಗ್ರೆಸ್ನವರಲ್ಲ. ಸೋನಿಯಾಗಾಂಧಿ ಅವರನ್ನೇ ಕೇಳೋಣ ಸತ್ಯ ಏನು ಎನ್ನುವುದು ಗೊತ್ತಾಗುತ್ತದೆ' ಎಂದರು.
ಟಾಕ್ ಫೈಟ್ ಅಂತ್ಯ : ' ಕುಮಾರಸ್ವಾಮಿ ಅವರ ಮಾತಿಗೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು, 'ನನಗಿಂತ ಚಿಕ್ಕವರು ನೀವು, ಆಗ ನೀವು ಇರಲಿಲ್ಲ, 1996ರಲ್ಲಿ ಸಿಎಂ ಸ್ಥಾನ ತಪ್ಪಿದಾಗ ರೇವಣ್ಣ ಅತ್ತಿದ್ದರು. ನೀವು ರಾಜಕೀಯ ಮಾತನಾಡಿದ್ದಕ್ಕೆ ನಾವು ರಾಜಕೀಯ ಮಾತನಾಡಿದೆ ಅಷ್ಟೇ' ಎಂದು ಹೇಳಿ ಟಾಕ್ ಫೈಟ್ಗೆ ಪೂರ್ಣವಿರಾಮವಿಟ್ಟರು.












Click it and Unblock the Notifications