ಅನರ್ಹ ಶಾಸಕರ ತೀರ್ಪು; ಯಡಿಯೂರಪ್ಪಗೆ ಟೆನ್ಷನ್
ಬೆಂಗಳೂರು, ನವೆಂಬರ್ 13 : 17 ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತೀರ್ಪಿಗಾಗಿ ಕಾದು ಕುಳಿತಿದ್ದು, ಏನಾಗಲಿದೆ? ಎಂದು ಎದುರು ನೋಡುತ್ತಿದ್ದಾರೆ.
ಬುಧವಾರ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಪ್ರಕಟವಾಗಲಿದೆ. ಯಡಿಯೂರಪ್ಪ ತೀರ್ಪಿನ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಮಧ್ಯಾಹ್ನ 3 ಗಂಟೆ ತನಕ ಯಾವುದೇ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡಿಲ್ಲ.
ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಡಿಸೆಂಬರ್ 5ರಂದು ನಡೆಯುವ 15 ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆಯನ್ನು ನಡೆಸಲಾಗುತ್ತಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನರ್ಹ ಶಾಸಕರೇ ಕಾರಣ. ಆದ್ದರಿಂದ, ಮುಖ್ಯಮಂತ್ರಿಗಳು ತೀರ್ಪು ಏನಾಗಲಿದೆ? ಎಂದು ತಿಳಿಯಲು ಕಾದು ಕುಳಿತಿದ್ದಾರೆ.
ಅನರ್ಹ ಶಾಸಕರು ಉಪ ಚುನಾವಣಾ ಕಣಕ್ಕಿಳಿಯಬಹುದೇ?, ಉಪ ಚುನಾವಣೆ ನಡೆಯಲಿದೆಯೇ? ಎಂಬುದು ಸೇರಿದಂತೆ ರಾಜ್ಯ ರಾಜಕೀಯದ ಬೆಳವಣಿಗೆ ಇಂದಿನ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ರಾಜ್ಯದ ಜನರ ಗಮನ ದೆಹಲಿಯತ್ತ ನೆಟ್ಟಿದೆ.
ಜುಲೈ 1ರಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು 13 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದರು.
ವಿಶ್ವಾಸಮತ ಸಾಬೀತು ಮಾಡಲಾಗದೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು.
ಅನರ್ಹ ಶಾಸಕರು ಬಿಜೆಪಿ ಸೇರುವುದಕ್ಕೆ, ಉಪ ಚುನಾವಣೆ ಟಿಕೆಟ್ ಅವರಿಗೆ ನೀಡುವುದಕ್ಕೆ ಪಕ್ಷದಲ್ಲಿಯೇ ವಿರೋಧವಿದೆ. ಆದ್ದರಿಂದ, ಯಡಿಯೂರಪ್ಪಗೆ ಇಂದಿನ ತೀರ್ಪಿನ ಬಗ್ಗೆ ಟೆಂಕ್ಷನ್ ಹೆಚ್ಚಾಗಿದೆ. ಶಾಸಕರ ಪರವಾಗಿ ತೀರ್ಪು ಬಂದರೆ ಮುಂದಿನ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications