ಜನಾರ್ದನ ರೆಡ್ಡಿಗೆ ಮೂರು ತಿಂಗಳು ಜಾಮೀನಿಲ್ಲ
ನವದೆಹಲಿ, ಜು. 22 : ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇನ್ನು ಮೂರು ತಿಂಗಳ ಕಾಲ ಜಾಮೀನಿಗಾಗಿ ಅರ್ಜಿ ಸಲ್ಲಿಸದಂತೆ ವಕೀಲರಿಗೆ ನಿರ್ದೇಶನ ನೀಡಿದೆ.
ಓಬಳಾಪುರಂ ಅಕ್ರಮಕ್ಕೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಾಮೀನು ನೀಡಬೇಕು ಎಂದು ಜನಾರ್ದನ ರೆಡ್ಡಿ ಪರ ವಕೀಲರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎಸ್.ದತ್ತು ಅವರು ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ತನಿಖೆ ನಡೆಯುತ್ತಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೇ ಮುಂದಿನ ಮೂರು ತಿಂಗಳ ಕಾಲ ಜಾಮೀನು ಅರ್ಜಿಯನ್ನು ಸಲ್ಲಿಸದಂತೆ ರೆಡ್ಡಿ ಪರ ವಕೀಲರಿಗೆ ನಿರ್ದೇಶನ ನೀಡಿದೆ. [ರೆಡ್ಡಿಗೆ ಸುಪ್ರೀಂಕೋರ್ಟಿನಲ್ಲೂ ಜಾಮೀನು ಸಿಗಲಿಲ್ಲ]
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಸಿಬಿಐ ಪರ ವಕೀಲರು ಈಗಾಗಲೇ ಮುಚ್ಚಿದ ಲಕೋಟೆಯಲ್ಲಿ ಜನಾರ್ದನ ರೆಡ್ಡಿ ವಿರುದ್ಧದ ತನಿಖೆಯ ಪ್ರಗತಿ ಬಗ್ಗೆ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. [ಜನಾರ್ದನ ರೆಡ್ಡಿ ಆರೋಪಿ ನಂ.1]
ಒಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ, ಕರ್ನಾಟಕದ ಅಸೋಸಿಯೇಟೆಡ್ ಮೈನಿಂಗ್ ಪ್ರಕರಣ, ಬೇಲ್ ಡೀಲ್ ಪ್ರಕರಣ ಸೇರಿದಂತೆ ಜನಾರ್ದನ ರೆಡ್ಡಿ ಅವರ ವಿರುದ್ಧ ಹಲವಾರು ತನಿಖೆ ನಡೆಯುತ್ತಿದೆ. ಸುಮಾರು ಮೂರು ವರ್ಷಗಳಿಂದ ರೆಡ್ಡಿ ಜೈಲಿನಲ್ಲಿದ್ದಾರೆ.












Click it and Unblock the Notifications