ನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರ
ಬೆಂಗಳೂರು, ಅಕ್ಟೋಬರ್ 03: ನೆರೆ ಪರಿಹಾರ ವಿಳಂಬವು ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೂ ಅಸಮಾಧಾನ ಹೆಚ್ಚಿಸಿತ್ತುರಿವ ಕಾರಣ ಎಚ್ಚೆತ್ತಿರುವ ಯಡಿಯೂರಪ್ಪ ಸರ್ಕಾರ ನೆರೆ ಪರಿಹಾರಕ್ಕೆ ಪೂರಕ ಬಜೆಟ್ ಮಂಡಿಸುವ ನಿರ್ಣಯ ತೆಗೆದುಕೊಂಡಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿದ್ದ ಹೆಚ್ಚುವರಿ ಹಣವನ್ನು ನೆರೆಪೀಡಿತ ಪ್ರದೇಶಗಳ ಪರಿಹಾರ ಕಾಮಗಾರಿಗೆ ಒದಗಿಸಲಾಗಿದೆ ಎಂದ ಮಾಧುಸ್ವಾಮಿ, ನೆರೆಪರಿಹಾರ ಕಾಮಗಾರಿಗಾಗಿ ಕೇಂದ್ರದಿಂದ ಸೂಕ್ತ ನೆರವು ದೊರೆಯುವ ಆಶಾಭಾವನೆ ಇದೆ ಎಂದರು.

ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣದಲ್ಲಿ 1150 ಕೋಟಿ ರೂ ಹಣವನ್ನು ನೆರೆಪೀಡಿತ ಪ್ರದೇಶಗಳಲ್ಲಿರುವ ಅದೇ ಸಮುದಾಯದವರಿಗೇ ಖರ್ಚು ಮಾಡುವ ನಿರ್ಣಯ ಮಾಡಲಾಗಿದೆ.
ಸೇತುವೆ, ರಸ್ತೆಗಳ ನಿರ್ಮಾಣ ಕಾಮಗಾರಿಗೆ ಅನುಕೂಲವಾಗಲಿ ಎಂದು ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂಪಾಯಿ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 300 ಕೋಟಿ ರೂಪಾಯಿ ಹಾಗೂ ರಸ್ತೆಗಳಿಗಾಗಿ ಲೋಕೋಪಯೋಗಿ ಇಲಾಖೆಯ ಪ್ರತ್ಯೇಕ ಖಾತೆಯಿಂದ 1000 ಕೋಟಿ ನೀಡಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.
ಅಕ್ಟೋಬರ್ 10 ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಪರಿಹಾರ ಕಾರ್ಯಕ್ಕಾಗಿಯೇ ಪೂರಕ ಬಜೆಟ್ ಮಂಡಿಸಿ ಹೆಚ್ಚುವರಿ ಹಣ ಒದಗಿಸುವುದಾಗಿ ಮಾಧುಸ್ವಾಮಿ ಹೇಳಿದರು.












Click it and Unblock the Notifications