ಶಾಮನೂರು ಶಿವಶಂಕರಪ್ಪನವರಿಗೆ ಪಾಟೀಲರ ಖಡಕ್ ಉತ್ತರ
ಬೆಂಗಳೂರು, ಸೆಪ್ಟೆಂಬರ್ 9: "ಶಾಮನೂರು ಶಿವಶಂಕರಪ್ಪ ಅವರು ಸಾರ್ವಜನಿಕವಾಗಿ ನನ್ನ ಬಗ್ಗೆ ಲಘುವಾಗಿ ಮಾತನಾಡುವುದು, ಏಕವಚನದ ಪ್ರತಿಕ್ರಿಯೆ ನೀಡುವುದು ಶೋಭೆ ತರುವಂಥದ್ದಲ್ಲ" ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ತಿರುಗೇಟು ನೀಡಿದ್ದಾರೆ.
ಒಣಗಿದ್ದ ವಿಜಯಪುರ ಕೆರೆಗಳಿಗೀಗ ಜೀವ ಬಂದಿದ್ದು ಹೇಗೆ?
"ಎಂ.ಬಿ.ಪಾಟೀಲಗೆ ತಲೆ ತಿರುಗಿದೆ" ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದರು. ಅದಕ್ಕೆ ಪಾಟೀಲರು ತಿರುಗೇಟು ನೀಡಿದ್ದಾರೆ. "ಶಾಮನೂರು ಶಿವಶಂಕರಪ್ಪನವರು ನಮ್ಮ ಸಮಾಜದ ಹಿರಿಯರು, ವೈಯಕ್ತಿಕವಾಗಿ ನನಗೆ ತಂದೆ ಸಮಾನರು. ಅವರ ಪುತ್ರ ಮಲ್ಲಿಕಾರ್ಜುನನಷ್ಟೆ ಪ್ರೀತಿ, ಅಭಿಮಾನವನ್ನು ನಾನು ಅವರ ಮೇಲೆ ಇಟ್ಟಿದ್ದೇನೆ" ಎಂದಿದ್ದಾರೆ.
"ಆದರೆ, ವಯೋಸಹಜ ಗುಣಗಳಿಂದಾಗಿ ಅವರು ಪದೇ ಪದೇ ಸಾರ್ವಜನಿಕವಾಗಿ ಲಘುವಾಗಿ, ಏಕವಚನದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಶೋಭೆ ತರುವಂಥದ್ದಲ್ಲ. ಈ ಹಿಂದೆ ನನ್ನನ್ನು 'ಬಚ್ಚಾ' ಎಂದು ಹೇಳಿದ್ದ ಅವರು, ಇದೀಗ ಎಂ.ಬಿ.ಪಾಟೀಲಗೆ ತಲೆ ತಿರುಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನನಗೆ ಜೀವ ಬೆದರಿಕೆ ಇದ್ದರೆ ಕೇಸು ದಾಖಲಿಸಲಿ ಎಂದಿದ್ದಾರೆ".
ಲಿಂಗಾಯತರ ವಿಚಾರದಲ್ಲಿ ಪೇಜಾವರ ಶ್ರೀ ಹಸ್ತಕ್ಷೇಪ ಬೇಡ: ಎಂ.ಬಿ.ಪಾಟೀಲ್
"ಆದರೆ, ನನಗೆ ಜೀವ ಬೆದರಿಕೆ ಇದೆ, ಸೆಕ್ಯೂರಿಟಿ ಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಶಿವಶಂಕರಪ್ಪ ಅವರ ಪರವಾಗಿರುವ ಕೆಲವು ಸ್ವಾಮಿಜಿ ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಸರ್ವನಾಶ ಮಾಡುವುದಾಗಿ ಶಪಥ ಮಾಡಿರುವ ವಿಡಿಯೋ ದೃಶ್ಯಾವಳಿ ಇದೆ. ಆದರೆ ಅದನ್ನು ನಾವು ದೊಡ್ಡದು ಮಾಡಲು ಹೋಗಿಲ್ಲ. ಸರ್ವನಾಶ ಎಂದರೆ ಏನು ಎನ್ನುವುದನ್ನು ಶಾಮನೂರು ಶಂಕರಪ್ಪ ಅವರು ತಿಳಿಸಬೇಕು" ಎಂದಿದ್ದಾರೆ.
ಲಿಂಗಾಯತ-ವೀರಶೈವ, ಬಸವಾದಿ ಶರಣರ ಕುರಿತು ಅಪಾರ ಜ್ಞಾನ ಹೊಂದಿರುವ, ವಿದ್ವಾಂಸರಾದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯರ "ಸರ್ಕಾರ ಘೋಷಣೆ ಮಾಡಲಿ, ಬಿಡಲಿ ಆದರೆ ಎಂದಿಗೂ ಲಿಂಗಾಯತ ಸ್ವತಂತ್ರ ಧರ್ಮ" ಎಂಬ ಪ್ರತಿಪಾದನೆಗೆ ಶಿವಶಂಕರಪ್ಪನವರು ಲಘುವಾಗಿ ಪ್ರತಿಕ್ರಿಯಿಸಿದ್ದಾರೆ.
ಬಹುಶಃ ಲಿಂಗಾಯತ-ವೀರಶೈವ ಭಿನ್ನತೆ ಬಗ್ಗೆ ಎಂದೂ ಗೊತ್ತಿರದ ಶಾಮನೂರು ಅವರು ಮಹಾಸಭೆಯ ಅಧ್ಯಕ್ಷರಾದ ನಂತರವಾದರೂ ತಿಳಿದುಕೊಳ್ಳಬೇಕಿತ್ತು. ಆದರೆ ಅದೂ ಆಗಿಲ್ಲ. ದಯವಿಟ್ಟು ತಮ್ಮ ಗುರುಗಳಾದ ತರಳಬಾಳು ಶ್ರೀಗಳ ಹತ್ತಿರ ಕುಳಿತು ಈ ಕುರಿತು ಅಧ್ಯಯನ ಮಾಡಲಿ ಎಂದು ಹಿರಿಯರಾದ ಅವರನ್ನು ಅತ್ಯಂತ ವಿನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಂ.ಬಿ.ಪಾಟೀಲ ಹೇಳಿದ್ದಾರೆ.