ಜೂನ್ ತಿಂಗಳಿನಲ್ಲಿ ಕರ್ನಾಟಕ ದಾಖಲಿಸಿದ ಮಳೆ ಪ್ರಮಾಣವೆಷ್ಟು?
ಬೆಂಗಳೂರು, ಜುಲೈ 03; ಜೂನ್ 6ರಿಂದ ನೈಋತ್ಯ ಮುಂಗಾರು ರಾಜ್ಯ ಪ್ರವೇಶಿಸಿದ್ದು, ಈ ಬಾರಿ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಒಟ್ಟಾರೆ ಶೇ 12ರಷ್ಟು ಹೆಚ್ಚು ಮಳೆ ದಾಖಲಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಜೂನ್ 30ರವರೆಗೆ ದಾಖಲಾದ ಮಳೆ ವಿವರವನ್ನು ಹವಾಮಾನ ಇಲಾಖೆ ಹಂಚಿಕೊಂಡಿದ್ದು, ಇದರ ಪ್ರಕಾರ ಜೂನ್ 30ರವರೆಗೂ 223.3 ಮಿ.ಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ 199.3 ಎಂಎಂ ಮಳೆಯಾಗುವುದು ಸಾಮಾನ್ಯವಾಗಿದ್ದು, ಈ ಬಾರಿ 223.3 ಮಿ.ಮೀ ಮಳೆ ದಾಖಲಾಗಿದೆ. ಶೇ 12ರಷ್ಟು ಅಧಿಕ ಮಳೆ ದಾಖಲಾಗಿದೆ ಎಂದು ತಿಳಿಸಿದೆ. ಆದರೆ ಜಿಲ್ಲಾವಾರು ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ವ್ಯತ್ಯಾಸ ಕೃಷಿ ಚಟುವಟಿಕೆಗಳ ಮೇಲೆ ಹೊಡೆತ ನೀಡಿದೆ. ಕರಾವಳಿ ಭಾಗದಲ್ಲಿ ಈ ಬಾರಿ ಒಟ್ಟಾರೆ ಶೇ 11ರಷ್ಟು ಮಳೆ ಕೊರತೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ 1% ಮಳೆ ಹೆಚ್ಚು ದಾಖಲಾಗಿದೆ.
ರಾಜ್ಯದ ವಿವಿಧೆಡೆ ಹೇಗಿದೆ ಮಳೆ ಪ್ರಮಾಣ? ಮುಂದಿದೆ ವಿವರ...

ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ದಾಖಲು
ಕರಾವಳಿ ಭಾಗಕ್ಕೆ ತದ್ವಿರುದ್ಧ ಎಂಬಂತೆ ಉತ್ತರ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ ಶೇ 50ರಷ್ಟು ಹೆಚ್ಚು ಮಳೆಯಾಗಿದೆ (ಸಾಮಾನ್ಯವಾಗಿ 107.1 ಎಂಎಂ ಮಳೆಗಿಂತ ಈ ಬಾರಿ 161 ಎಂಎಂ ಮಳೆಯಾಗಿದೆ). ವಿಜಯಪುರದಲ್ಲಿ ಮಾತ್ರ ಶೇ 3ರಷ್ಟು ಕಡಿಮೆ ಮಳೆ ದಾಖಲಾಗಿದೆ. ಮತ್ತೊಂದೆಡೆ ಕೊಪ್ಪಳದಲ್ಲಿ ಸಾಮಾನ್ಯಕ್ಕಿಂತ ಶೇ 112ರಷ್ಟು ಅಧಿಕ ಮಳೆ ದಾಖಲಾಗಿದೆ. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ವ್ಯತ್ಯಾಸ ಕಂಡುಬಂದಿದ್ದು ಈ ಭಾಗದಲ್ಲಿ ಆಗಿದೆ.

ದಕ್ಷಿಣ ಒಳನಾಡಿನಲ್ಲಿ ಶೇ 15ರಷ್ಟು ಹೆಚ್ಚು ಮಳೆ ದಾಖಲು
ಕೊಡಗು, ಮೈಸೂರು ಹಾಗೂ ರಾಮನಗರದಲ್ಲಿ ಈ ಬಾರಿ ಕಡಿಮೆ ಮಳೆಯಾಗಿದ್ದರೂ, ದಕ್ಷಿಣ ಒಳನಾಡಿನಲ್ಲಿ ಶೇ 15ರಷ್ಟು ಹೆಚ್ಚಿನ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಮಳೆ ದಾಖಲಾಗುವ ಪ್ರದೇಶಗಳಾದ ತುಮಕೂರು ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಈ ಬಾರಿ ಕಡಿಮೆ ಮಳೆಯಾಗಿದ್ದು, ಇದರ ಪ್ರಮಾಣ ಶೇ 85 ಹಾಗೂ ಶೇ 83ರಷ್ಟಾಗಿದೆ.
ಈ ಬಾರಿ ಜೂನ್ ಮಧ್ಯ ಭಾಗದ ನಂತರ ಮುಂಗಾರು ಕ್ಷೀಣಿಸಿದ್ದು, ಜುಲೈ ಆರಂಭದ ಎರಡು ದಿನಗಳಲ್ಲಿ ಕರ್ನಾಟಕದ 45 ತಾಲ್ಲೂಕುಗಳು ಹಾಗೂ 204 ಹೋಬಳಿಗಳಲ್ಲಿ ಕಡಿಮೆ ಮಳೆ ದಾಖಲಾಗಿದೆ.

ಶೇ 7ರಷ್ಟು ಕಡಿಮೆ ಮಳೆ ದಾಖಲು
ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಜೂನ್ 26 ಮತ್ತು ಜುಲೈ 2ರ ನಡುವಿನ ಮಳೆ ಮಾದರಿಯು, ಅಂದರೆ ಒಂದು ವಾರದಲ್ಲಿ ಸಾಮಾನ್ಯಕ್ಕಿಂತ ಶೇ 58ರಷ್ಟು ಕಡಿಮೆ ಮಳೆ ದಾಖಲಾಗಿದೆ. ಈ ಒಂದು ವಾರದ ಅವಧಿಯಲ್ಲಿ ಮಲೆನಾಡು ಪ್ರದೇಶದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಶೇ 87ರಷ್ಟು ಹಾಗೂ ಕರಾವಳಿ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಶೇ 79ರಷ್ಟು ಕಡಿಮೆ ಮಳೆ ದಾಖಲಾಗಿದೆ ಎಂದು ತಿಳಿಸಿದೆ. ಒಟ್ಟಾರೆ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆ ಪ್ರಮಾಣಕ್ಕಿಂತ ಶೇ 7ರಷ್ಟು ಮಳೆ ಕಡಿಮೆಯಾಗಿದೆ. ಜೂನ್ 1ರಿಂದ ಜುಲೈ 2ರವರೆಗೆ 217 ಎಂಎಂ ಮಳೆ ಸಾಮಾನ್ಯವಾಗಿದ್ದು, ಈ ಬಾರಿ 202 ಎಂಎಂ ಮಳೆ ದಾಖಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಕೃಷಿ ಚಟುವಟಿಕೆ ಮೇಲೆ ಪರಿಣಾಮ; ಬಿತ್ತನೆ ಗುರಿ ತಲುಪಿಲ್ಲ
ಜೂನ್ 6ರಂದು ಮುಂಗಾರು ರಾಜ್ಯ ಪ್ರವೇಶಿಸಿದ್ದು, ನಂತರ ಇಡೀ ರಾಜ್ಯವನ್ನು ಮುಂಗಾರು ಆವರಿಸಿತ್ತು. ಜೂನ್ ತಿಂಗಳ ಮೊದಲ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ ಜೂನ್ ಮಧ್ಯಭಾಗದಲ್ಲಿ ಏಕಾಏಕಿ ಮಳೆ ಕಡಿಮೆಯಾಯಿತು. ಇದರಿಂದ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮುಂಗಾರು ಆರಂಭವಾದ ನಂತರವೂ ದೀರ್ಘಕಾಲ ಮಳೆಯಾಗದೇ ಇರುವುದು ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಿತ್ತನೆ ಗುರಿ ತಲುಪಲು ಸಾಧ್ಯವಾಗಿಲ್ಲ.
ಜುಲೈ ಎರಡನೇ ವಾರ ಕಳೆಯುತ್ತಿದ್ದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications