ಮತ್ತೆ ಮುಜರಾಯಿ ತೆಕ್ಕೆಗೆ ಗೋಕರ್ಣ ದೇವಾಲಯ? ಏನಿದು ವಿವಾದ
ಬೆಂಗಳೂರು, ಸೆ 27: ಇತಿಹಾಸ ಪ್ರಸಿದ್ದ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರಕಾರ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಇಂಗಿತ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ, ಸರಕಾರದ ವಿರುದ್ದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಈ ಸಂಬಂಧ ಸೋಮವಾರ (ಸೆ 26) ತುರ್ತು ಪತ್ರಿಕಾಗೋಷ್ಠಿ ಕರೆದು ರಾಮಚಂದ್ರಾಪುರ ಮಠ, ತಮ್ಮ ಸುಪರ್ದಿಗೆ ದೇವಾಲಯ ಬಂದ ನಂತರ ಆಗಿರುವ ಅಭಿವೃದ್ದಿ ಕಾರ್ಯ, ಅನ್ನ, ವಿದ್ಯಾದಾಸೋಹ ಮುಂತಾದ ಕಾರ್ಯಗಳಿಂದ ದೇವಾಲಯದ ಚಿತ್ರಣ ಯಾವ ರೀತಿ ಬದಲಾಯಿತು ಎನ್ನುವುದರ ಬಗ್ಗೆ ವಿವರಿಸಿದೆ. (ರಾಘವೇಶ್ವರ ಶ್ರೀಗಳ ಸಂದರ್ಶನ, ವಿಡಿಯೋ)
ಗೋಕರ್ಣ ದೇವಸ್ಥಾನ ಯಾವತ್ತಿಗೂ ಕೂಡ ರಾಮಚಂದ್ರಾಪುರ ಮಠದ್ದೇ ಆಗಿರುವ ಕಾರಣ ಸರಕಾರಕ್ಕೆ ಈ ದೇವಸ್ಥಾನದ ಮೇಲೆ ಎಂದಿಗೂ ಹಕ್ಕು ಇರಲಿಲ್ಲ. ಪ್ರಚಲಿತ ಕಾನೂನಿನಂತೆ ಗೋಕರ್ಣ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ.
ಈ ವಿಚಾರವನ್ನು ಸರಕಾರವೇ ತನ್ನ ಅದೇಶ ಪ್ರಕ್ರಿಯೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ನಿರ್ದಿಷ್ಟವಾಗಿ ಹೇಳಿರುತ್ತದೆ. ಇದೇ ನಿಲುವನ್ನು ಆಧರಿಸಿ ಸರಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ ಎಂದು ಮಠ ಸ್ಪಷ್ಟನೆ ನೀಡಿದೆ.
ಶ್ರೀಕ್ಷೇತ್ರ ಮಠದ ಆಡಳಿತಕ್ಕೆ ಬಂದಮೇಲೆ ದೇವಸ್ಥಾನದ ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ಪಾರದರ್ಶಕ ಮಾಡಲಾಗಿದೆ. ಇಲ್ಲಿ ಬರುವ ಪ್ರತಿ ಪೈಸೆಯೂ ಕೂಡ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲ್ಪಡುತ್ತದೆ ಎಂದು ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ರಾಘವೇಶ್ವರ ಶ್ರೀಗಳ ಸಂದರ್ಶನ)
ಏನಿದು ವಿವಾದ, ಟ್ವಿಟ್ಟರ್ ನಲ್ಲಿ #GoBackFromGokarna ಹ್ಯಾಷ್ ಟ್ಯಾಗಿನ ಮೂಲಕ ಭಕ್ತರ ಆಕ್ರೋಶ..ಕೆಲವೊಂದು ಟ್ವೀಟ್ .. ಮುಂದೆ ಓದಿ..

ಗೋಕರ್ಣ ದೇವಾಲಯ
ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 14.08.2008ರಲ್ಲಿ ಗೋಕರ್ಣ ದೇವಾಲಯವನ್ನು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮದಾಯಿ ಇಲಾಖೆಯ ವ್ಯಾಪ್ತಿಯಿಂದ ಹೊಸನಗರ ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

ಉತ್ತಮ ಸುಧಾರಣೆ ಕಂಡಿರುವ ದೇವಾಲಯ
ಮಠದ ವ್ಯಾಪ್ತಿಗೆ ದೇವಾಲಯ ಬಂದ ನಂತರ, ಸ್ಥಳೀಯರು, ಮಠದ ಆಡಳಿತ ಮಂಡಳಿ ಮತ್ತು ಅರ್ಚಕ ವೃಂದದ ನಡುವೆ ಸದಾ ಒಂದಾಲ್ಲಾ ಒಂದು ಮನಸ್ತಾಪ ನಡೆಯುತ್ತಲೇ ಇದ್ದರೂ, ದೇವಾಲಯ ಭಾರೀ ಅಭಿವೃದ್ದಿ ಕಂಡಿತ್ತು. ಮಠ ತೆಗೆದುಕೊಂಡ ಪಾರದರ್ಶಕ ಮತ್ತು ಭಕ್ತಸ್ನೇಹಿ ನಿರ್ಧಾರಗಳು ಗೋಕರ್ಣದ ಚಿತ್ರಣವನ್ನೇ ಬದಲಿಸಿತ್ತು.

ಕೋಟ್ಯಾಂತರ ರೂಪಾಯಿ ಅವ್ಯವಹಾರ
ಇವೆಲ್ಲದರ ನಡುವೆ, ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿದ್ದ ಅಂದಿನ ಸರಕಾರದ ಕ್ರಮವನ್ನು ಪ್ರಶ್ನಿಸಿ, ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್ ಎನ್ನುವವರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ದೇವಾಲಯದಿಂದ ಬರುವ ಆದಾಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ. ಆ ಹಣವೆಲ್ಲಾ ಮಠದ ಪಾಲಾಗುತ್ತಿದೆ. ಹೀಗಾಗಿ, ದೇವಾಲಯವನ್ನು ಮರಳಿ ಸರಕಾರದ ವಶಕ್ಕೆ ಪಡೆಯಲು ಆದೇಶಿಸಬೇಕೆಂದು ದೀಕ್ಷಿತ್ ಕೋರಿದ್ದರು. (ಸಾಂದರ್ಭಿಕ ಚಿತ್ರ)

ರಾಜ್ಯ ಉಚ್ಚ ನ್ಯಾಯಾಲಯ
ನ್ಯಾ. ಎಸ್ ಕೆ ಮುಖರ್ಜಿ ಹಾಗೂ ನ್ಯಾ. ಆರ್ ಬಿ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಸರಕಾರದ ಪ್ರತಿನಿಧಿ, ಮಠದ ವಿರುದ್ಧ ದೂರುಗಳು ಬಂದಿವೆ. ಸರಕಾರ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ದೇವಾಲಯವನ್ನು ಮಠದಿಂದ ಮರಳಿ ಸರಕಾರದ ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನಮಗೆ ಎಂಟು ವಾರಗಳ ಕಾಲಾವಕಾಶ ನೀಡಬೇಕು ಎಂದು ಗುರುವಾರ (ಸೆ 22) ಕೋರಿದ್ದರು.

ಹೈಕೋರ್ಟ್ ಪ್ರಶ್ನೆ
ಸರಕಾರದ ಉತ್ತರದಿಂದ ಸಿಟ್ಟಾದ ನ್ಯಾಯಪೀಠ, ಎಂಟು ವಾರ ಅವಕಾಶ ನೀಡಲು ಸಾಧ್ಯವಿಲ್ಲ, ಆರು ವಾರದಲ್ಲಿ ಸರಕಾರದ ನಿರ್ಧಾರವನ್ನು ತಿಳಿಸಬೇಕು. ಮುಜರಾಯಿ ವ್ಯಾಪ್ತಿಗೆ ತರುತ್ತೀರೋ ಅಥವಾ ಮಠದ ವ್ಯಾಪ್ತಿಗೆ ಮುಂದುವರಿಸುತ್ತೀರೋ ಎನ್ನುವುದರ ಬಗ್ಗೆ ವಿವರಣೆ ನೀಡಿ ಎಂದು ನ.11ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಸರಕಾರದ ಮೇಲೆ ವಿಶ್ವಾಸ
ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿ ಶ್ರೀಮಹಾಬಲೇಶ್ವರ ಮತ್ತು ಆತನ ಭಕ್ತರಿಗೆ ಅಸಮಾಧಾನ ಉಂಟುಮಾಡುವ ಪ್ರಕ್ರಿಯೆಯಾದ ಮತ್ತು ಕಾನೂನು ಹಾಗೂ ನೈತಿಕತೆಯ ವಿರೋಧಿಯಾದ ಶ್ರೀಕ್ಷೇತ್ರ ಗೋಕರ್ಣವನ್ನು ನೋಟಿಫೈ ಮಾಡುವ ಯೋಚನೆಯನ್ನು ಸರಕಾರ ಕೈಬಿಡುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆಂದು ರಾಮಚಂದ್ರಾಪುರ ಮಠ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
|
ಸ್ವಚ್ಚ ಗೋಕರ್ಣ
ಹೇಗಿದ್ದ ಗೋಕರ್ಣ ಹೇಗಾಯಿತು, ಚಿತ್ರ ಬದಲಾದ ಚಿತ್ರಣವನ್ನು ತೋರಿಸುತ್ತದೆ
|
ರಾಜ್ಯದ ಸಮಸ್ಯೆಗಳು
ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಬಿಟ್ಟು ಸರಕಾರಕ್ಕೆ ಇದ್ಯಾಕೆ ಬೇಕು
|
ಗೋಕರ್ಣ ದೇವಾಲಯ
ಈ ಸರಕಾರಕ್ಕೆ ಯಾವುದೂ ಸರಿಯಾಗಿ ಇಷ್ಟವಿಲ್ಲ ಎನಿಸುತ್ತದೆ
|
ಗೋಕರ್ಣ ಸ್ವಚ್ಚವಾಗಿದೆ
ಗೋಕರ್ಣ ದೇವಾಲಯ ಮತ್ತು ಆಡಳಿತ ಎರಡೂ ಸ್ವಚ್ಚವಾಗಿದೆ












Click it and Unblock the Notifications