ಚೆಸ್ಕಾಂ ಎಂಡಿ ಸಿಎನ್ ಶ್ರೀಧರ್ ಅಮಾನತು- ರಾಜ್ಯ ಸರ್ಕಾರ ಆದೇಶ : ಕಾರಣವೇನು?
ಬೆಂಗಳೂರು, ಜನವರಿ.24: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ಸೃಷ್ಟಿಸಿದ ಸಿಇಎಸ್ಸಿ (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ) ಎಂಡಿ ಸಿ.ಎನ್.ಶ್ರೀಧರ್, ಕೆಎಎಸ್ (ಸೂಪರ್ ಸ್ಕೇಲ್ ಟೈಮ್) ಅವರನ್ನು ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.
ಹೌದು, ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಮ್ಮಿಕೊಂಡಿದ್ದರು. ಈ ವೇಳೆ ಬಟನ್ ಒತ್ತುವ ಮೂಲಕ ಸಿಎಂ ಯೋಜನೆಗೆ ಚಾಲನೆ ನೀಡಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿದ ವೇಳೆ ಬಟನ್ ಚಾಲನೆಯಾಗಿಲ್ಲ.

ಮುಜುಗರಕ್ಕೆ ಸಿಲುಕಿದ್ದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಟನ್ ಒತ್ತಿದ ವೇಳೆ ಅದು ಆನ್ ಆಗಿರಲಿಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಮುಜುಗರಕ್ಕೆ ಒಳಗುಳ್ಳುವಂತೆ ಮಾಡಿತ್ತು. ಸಿಎಂ ಕಾರ್ಯಕ್ರಮವಾಗಿದ್ದರೂ ವಿದ್ಯುತ್ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸದ ಚೆಸ್ಕಾಂ ಎಂಡಿ ಶ್ರೀಧರ್, ಅಂದಿನ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈ ಹಿನ್ನಲೆ ಕರ್ತವ್ಯಲೋಪ ಎಸಗಿದ ಹಿನ್ನಲೆ ಜೊತೆಗೆ ಸರ್ಕಾರ ಮುಜುಗರಕ್ಕೆ ಒಳಪಡುವ ಸನ್ನಿವೇಶ ಸೃಷ್ಟಿಸಿದ್ದಕ್ಕೆ ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಆದೇಶ ಹೊರಡಿಸಿದ್ದಾರೆ. ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸಲು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶ್ರೀಧರ್ (ಕೆ.ಎ.ಎಸ್ (ಸೂಪರ್ ಟೈಂ ಸ್ಕೆಲ್) ಅಧಿಕಾರಿ) ಅವರಿಗೆ ಸೂಚನೆ ನೀಡಲಾಗಿತ್ತು. ಹೀಗಿದ್ದರೂ, ಅವರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಆದಾಗ್ಯೂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಿಲ್ಲ.
ಅಮಾನತು ಆದೇಶ ಪ್ರತಿಯಲ್ಲಿ ಏನಿದೆ?
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗು ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿರವರು ಆಗಮಿಸಿ ಉದ್ಘಾಟನೆ ಕಾರ್ಯ ನೆರವೇರಿಸಿರುತ್ತಾರೆ. ಸಿಎಂ ಕಾರ್ಯಕ್ರಮಕ್ಕೆ 'ಬಟನ್' ಒತ್ತುವ ಮೂಲಕ ಚಾಲನೆ ನೀಡಿದ್ದು ಅದು ಚಾಲನೆಯಾಗಿರುವುದಿಲ್ಲ.
ಮೇಲ್ಕಂಡ ಬೃಹತ್ ಕಾರ್ಯಕ್ರಮದ ಮತ್ತು ಸಾರ್ವಜನಿಕ ಕಾರ್ಯಕ್ರಮವನ್ನು ಲೋಕಾರ್ಪಣೆಗಾಗಿ ವಿದ್ಯುಕ್ತವಾಗಿ ಚಾಲನೆ ನೀಡುವ ಸಂದರ್ಭದಲ್ಲಿ ಅದು ಚಾಲನೆಯಾಗದೇ ಸಿಎಂ ತೀವು ಮುಜುಗರಕ್ಕೆ ಸಿಲುಕಿಸಿರುತ್ತಾರೆ. ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸಲು ಶ್ರೀ ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂಪರ್ ಟೈಂ ಸ್ನೇಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರಿಗೆ ಜಿಲ್ಲಾಧಿಕಾರಿಗಳು, ಮೈಸೂರು ಇವರ ಕಚೇರಿಯ ದಿನಾಂಕ: 23.01.2023ರ ಅಧಿಕೃತ ಜ್ಞಾಪನದ ಆದೇಶದಲ್ಲಿ ಸೂಚನೆ ನೀಡಲಾಗಿರುತ್ತದೆ.
ಹೀಗಿದ್ದರೂ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಆದಾಗ್ಯೂ ಸದರಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಿಲ್ಲ. ಮುಖ್ಯ ಮಂತ್ರಿಗಳು ಚಾಲನೆ ನೀಡಿದಾಕ್ಷಣ ಚಾಲನೆಗೊಳ್ಳದೇ ಸ್ಥಳದಲ್ಲಿ ಹಾಜರಿದ ಮಾಧ್ಯಮ, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುತ್ತದೆ.
ಸನ್ಮಾನ್ಯ ಮುಖ್ಯಮಂತ್ರಿರವರು ಭಾಗವಹಿಸುವ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿದ್ದು ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕಾರಿಯಾಗದೇ, ಅವರ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷತೆಯಿಂದಾಗಿ ಸರ್ಕಾರವನ್ನು ಮುಜುಗರಕ್ಕೆ ಒಳಪಡುವ ಸನ್ನಿವೇಶವನ್ನು ಸೃಷ್ಟಿಸಲು ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂಪರ್ ಟೈಂ ಸ್ನೇಲ್) ಅಧಿಕಾರಿ. ವ್ಯವಸ್ಥಾಪಕ ನಿರ್ದೇಶಕರು, ಮೈಸೂರು, ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ನೇರ ಕಾರಣಕರ್ತರಾಗಿರುತ್ತಾರೆ. ಇದರಿಂದ ಅವರ ಕಾರ್ಯವೈಖರಿ, ಕರ್ತವ್ಯ ನಿಷ್ಠೆ, ಶಿಷ್ಟಾಚಾರ ಮತ್ತು ಸಮಯಪ್ರಜ್ಞೆಗೆ ಕನ್ನಡಿ ಹಿಡಿದಂತಿದೆ.
ಹೀಗಾಗಿ ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂಪರ್ ಟೈಂ ಸ್ಕೋಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ಸ್ಥಳದಲ್ಲಿ ಹಾಜರಿಲ್ಲದೇ ಕರ್ತವ್ಯಲೋಪವೆಸಗಿರುವ ಸಂಬಂಧ ಮತ್ತು ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನಲೆಯಲ್ಲಿ ಸದರಿಯವರ ವಿರುದ್ಧ ತತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಲಾದ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು.
ಮುಖ್ಯ ಮಂತ್ರಿಗಳ ಕಾರ್ಯಕ್ರಮಕ್ಕೆ ಹಾಜರಾಗಿ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದೇ ತೀವು ಮುಜುಗರ ಉಂಟುಮಾಡುವ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಜಿಲ್ಲಾಧಿಕಾರಿಯವರ ವರದಿಯಂತೆ ಸ್ಪಷ್ಟವಾಗಿ ಕಂಡುಬರುತ್ತದೆ. ಸದರಿ ಅಧಿಕಾರಿಯವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತ್ತುಪಡಿಸಲು ತೀರ್ಮಾನಿಸಿ ಈ ಕೆಳಗಿನಂತೆ ಆದೇಶಿಸಿದೆ.












Click it and Unblock the Notifications