ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್ಡೌನ್ ವಿಸ್ತರಣೆ ಅಗತ್ಯ ಎಂದ ತಜ್ಞರು
ಬೆಂಗಳೂರು, ಮೇ 28: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಜೂನ್ 7ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗದೇ ಹೋದ ಪಕ್ಷದಲ್ಲಿ ಜೂನ್ 7ರ ನಂತರವೂ ಲಾಕ್ ಡೌನ್ ವಿಸ್ತರಣೆ ಮಾಡುವ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 25 ಲಕ್ಷ ಮೀರಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 24,214 ಪ್ರಕರಣಗಳು ದಾಖಲಾಗಿದ್ದು, 476 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸೋಂಕಿನ ಪಾಸಿಟಿವಿಟಿ ಪ್ರಮಾಣ 17.59% ಇದೆ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ. ಈ ಸಕ್ರಿಯ ಪ್ರಕರಣಗಳು ತಗ್ಗದಿದ್ದರೆ ಜೂನ್ 7ರ ನಂತರವೂ ಲಾಕ್ಡೌನ್ ಮಾಡುವುದು ಅವಶ್ಯಕ ಎಂದಿದ್ದಾರೆ. ಮುಂದೆ ಓದಿ...

"ಸಕ್ರಿಯ ಪ್ರಕರಣಗಳು ನಿರೀಕ್ಷೆಗೂ ಮೀರಿ ಹೆಚ್ಚಾಗಿವೆ"
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಕಂಪ್ಯುಟೇಷನಲ್ ಅಂಡ್ ಡೇಟಾ ಸೈನ್ಸಸ್ ವಿಭಾಗದ ಅಧ್ಯಕ್ಷ ಪ್ರೊ. ಶಶಿಕುಮಾರ್ ಗಣೇಶನ್ ವಿಶ್ಲೇಷಣೆ ನಡೆಸಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಅತಿ ಹೆಚ್ಚಿದ್ದು, ಲಾಕ್ಡೌನ್ ಇಲ್ಲದ ಸಮಯದಲ್ಲಿ ಇದ್ದುದಕ್ಕಿಂತ ಪರಿಸ್ಥಿತಿ ಕೆಟ್ಟದಾಗಿದೆ. ಇದು ಹೀಗೇ ಮುಂದುವರೆದರೆ ಲಾಕ್ಡೌನ್ ಮುಂದುವರೆಸುವ ಅವಶ್ಯಕತೆಯೂ ಇರುತ್ತದೆ ಎಂದು ಹೇಳಿದ್ದಾರೆ.

"ಮುಂದಿನ ನಾಲ್ಕೈದು ದಿನಗಳು ನಿರ್ಣಾಯಕ"
ಕೊರೊನಾ ಸೋಂಕು ಉಲ್ಬಣವಾಗುವುದನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ಲಾಕ್ಡೌನ್ ಅನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈಗಿರುವ ಸೋಂಕಿನ ಅಂಕಿ ಸಂಖ್ಯೆಯನ್ನು ಗಮನಿಸಿದರೆ, ಲಾಕ್ಡೌನ್ನಲ್ಲಿ ಏನೋ ಲೋಪವಿದೆ ಎಂಬುದನ್ನು ತೋರುತ್ತದೆ. ಪ್ರಸ್ತುತ ಸರ್ಕಾರ ಲಾಕ್ಡೌನ್ ಅಥವಾ ನಿರ್ಬಂಧಗಳನ್ನು ಸಡಿಲಿಸುವ ಆಲೋಚನೆ ಮಾಡಬಾರದು. ಈ ನಿಟ್ಟಿನಲ್ಲಿ ಮುಂದಿನ ನಾಲ್ಕೈದು ದಿನಗಳು ನಿರ್ಣಾಯಕವಾಗಿವೆ ಎಂದು ಅವರು ಡೆಕ್ಕನ್ ಹೆರಾಲ್ಡ್ಗೆ ಹೇಳಿಕೆ ನೀಡಿದ್ದಾರೆ.

"ಲಾಕ್ಡೌನ್ ನಿಯಮಗಳು ಕಠಿಣವಾಗಿರಬೇಕು"
ಇದೇ ಹೇಳಿಕೆಯನ್ನು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಡಾ. ಗಿರಿಧರ್ ಆರ್ ಬಾಬು ಅವರು ಪ್ರತಿಧ್ವನಿಸಿದ್ದಾರೆ. ಕ್ರಮಗಳು ಕಠಿಣವಾಗಿದ್ದರೆ ಮಾತ್ರ ಲಾಕ್ಡೌನ್ ಪರಿಣಾಮಕಾರಿಯಾಗಿರುತ್ತದೆ. ಇಲ್ಲವೆಂದರೆ ಲಾಕ್ಡೌನ್ ನಿಂದ ಏನೂ ಪ್ರಯೋಜನವಾಗದು ಎಂದಿದ್ದಾರೆ. ಲಾಕ್ಡೌನ್ನ ಮೊದಲ ಭಾಗದಲ್ಲಿ ಜನರಿಗೆ ಬೆಳಿಗ್ಗೆ ನಾಲ್ಕು ಗಂಟೆಗಳ ಅವಧಿ ರಿಲ್ಯಾಕ್ಸೇಷನ್ ನೀಡಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಇದರೊಂದಿಗೆ ಕೊರೊನಾ ಪರೀಕ್ಷೆಗಳೂ ನಿಧಾನವಾಗಿವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಅಂಕಿ ಸಂಖ್ಯೆ
ರಾಜ್ಯದಲ್ಲಿ ಗುರುವಾರ ಒಂದೇ ದಿನ ಕೊರೊನಾ ಸೋಂಕಿಗೆ 476 ಮಂದಿ ಜೀವ ಕಳೆದುಕೊಂಡಿದ್ದು, ಇದುವರೆಗೂ 27,405 ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 24214 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 31,459 ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 25,23,998 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 20,94,369 ಸೋಂಕಿತರು ಗುಣಮುಖರಾಗಿದ್ದು, 4,02,203 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.











Click it and Unblock the Notifications