ಸಂಜಯಗಾಂಧಿ ಆಸ್ಪತ್ರೆ ವೈದ್ಯ ಲೋಕಾಯುಕ್ತ ಬಲೆಗೆ
ಬೆಂಗಳೂರು, ಡಿ. 18: ಜಯನಗರ ನಾಲ್ಕನೆ 'ಟಿ' ಬ್ಲಾಕ್ನ ಸಂಜಯಗಾಂಧಿ ಆಸ್ಪತ್ರೆಯ ವೈದ್ಯರೊಬ್ಬರು ರೋಗಿಯೊಬ್ಬರಿಂದ ಶಸ್ತ್ರಚಿಕಿತ್ಸೆ ನಡೆಸಲು ಏಳು ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬುಧವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಸಂಜಯಗಾಂಧಿ ಆಸ್ಪತ್ರೆ ವೈದ್ಯ ಡಾ.ವಿಶ್ವನಾಥ್ ಅವರು ಶಿವಕುಮಾರ್ ಎಂಬ ರೋಗಿ ಅವರ ಕಡೆಯವರಿಂದ ಶಸ್ತ್ರಚಿಕಿತ್ಸೆಗಾಗಿ ಹೆಚ್ಚಿನ ಹಣ ಪಡೆಯಲು ಮುಂದಾಗಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಸಂಜಯಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ್ ಅವರಿಗೆ ವೈದ್ಯ ವಿಶ್ವನಾಥ್ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದು, ಈ ಸಂಬಂಧ ಏಳೆಂಟು ಸಾವಿರ ರೂ.ಖರ್ಚಾಗುತ್ತದೆ ಎಂದು ತಿಳಿಸಿದರು.
ಆದರೆ, ಲಂಚದ ಹಣ ನೀಡದ ಕಾರಣ ವೈದ್ಯ ಡಾ.ವಿಶ್ವನಾಥ್ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಬಳಿಕ ಶಿವಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದು, ನಂತರ ವೈದ್ಯರಿಗೆ ಹಣ ನೀಡುವ ನೆಪದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ಏಳು ಸಾವಿರ ರೂ.ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದಿದ್ದಾರೆ.
ವೈದ್ಯ ಡಾ.ವಿಶ್ವನಾಥ್ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು, ಕೊಪ್ಪಳ, ಶಿವಮೊಗ್ಗ, ಕೋಲಾರ, ಉಡುಪಿ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಕೊಪ್ಪಳ
ಕೊಪ್ಪಳ ನಗರ ಸಮೀಪದ ಕಾಟಾಪುರ ಗ್ರಾಮದ ನಿವಾಸಿ, ಶಿಕ್ಷಕಿ ಶಿವಕುಮಾರಿ ಯಮನಪ್ಪ ಪಚ್ಚೇರ್(28) ಬುಧವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಲಬುರ್ಗಾ ತಾಲೂಕಿನಲ್ಲಿ ಸ.ಹಿ.ಪ್ರಾ. ಶಾಲೆಯೊಂದಲ್ಲಿ ಶಿವಕುಮಾರಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ದಿನಗಳಿಂದ ಹೊಟ್ಟೆ ನೋವು ತಾಳದೇ ಜೀವನದಲ್ಲಿ ಜುಗುಪ್ಸೆಗೊಂಡು ಯಲಬುರ್ಗಾದಿಂದ ಕನಕಗಿರಿಗೆ ಬರುತ್ತಿದ್ದಾಗ ಬಸ್ನಲ್ಲೇ ವಿಷ ಕುಡಿದಿದ್ದಾರೆ

ಕೋಲಾರ
ನಿಧಿ ಶೋಧನೆಯಲ್ಲಿ ತೊಡಗಿದ್ದ ಗುಪೊಂದರ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಠಾಣೆಯ ಪೊಲೀಸರು 8 ಮಂದಿಯನ್ನು ಬಂಧಿಸಿರವ ಘಟನೆ ವರದಿಯಾಗಿದೆ. ಬಂಧಿತರನ್ನು ತಾಲೂಕಿನ ಮಡೇರಹಳ್ಳಿ ಗ್ರಾಮದ ನಿವಾಸಿಗಳಾದ ಮಂಜುನಾಥ್, ಕಿಟ್ಟಪ್ಪ, ಶ್ರೀನಿವಾಸ್, ಬೆಂಗಳೂರು ಕೆ.ಜಿ. ಹಳ್ಳಿಯ ಅಲ್ತಾಫ್ ಪಾಷಾ, ಮುಹಮ್ಮದ್ ಮೆಹರಾಜ್, ರಾಜೇನ ಹಳ್ಳಿಯ ಶೇಕ್ ಆಸೀಫ್ ಅಹ್ಮದ್, ಹೊಸಕೋಟೆ ತಾಲೂಕಿನ ಆವಲಹಳ್ಳಿಯ ವೆಂಕಟೇಶ್ ಹಾಗೂ ಭೀಮಾಪುರದ ಮಂಜು ನಾಥ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಂದು ಟಾಟಾಏಸ್ ವಾಹನ, 7,500ರೂ. ನಗದು ಹಾಗೂ ಭೂಮಿ ಅಗೆಯಲು ಉಪಯೋಗಿಸಿದ್ದ್ದ ಗಡಾರಿ, ಚನಿಕೆ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ
ಪಿರ್ಯಾದಿ ಶ್ರೀಮತಿ ಪ್ರೇಮ (30) ವಾಸ ಬಿ.ಆರ್ ಪ್ರೊಜೆಕ್ಟ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಇವರ ಗಂಡ ರಂಗ ಸ್ವಾಮಿ (43) ಶಿಕ್ಷಕರಾಗಿದ್ದು, ಇತ್ತಿಚೆಗೆ ಅಮಾನತ್ತುಗೊಂಡ ಅವರು ಅದೇ ಚಿಂತೆಯಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದರು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ರಾಯಲ್ ಇಂಟರ್ನ್ಯಾಷನಲ್ ಲಾಡ್ಜ್ನ ರೂಂ ನಂಬ್ರ 315 ರಲ್ಲಿ ವಾಸ್ತವ್ಯವಿದ್ದು, ಡಿ.18ರಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 62/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಶಿವಮೊಗ್ಗ
ವಿನೋಬನಗರ ; ಕಳ್ಳತನ ಪ್ರಕರಣ;
ಪಿರ್ಯಾದಿ ಮಹೇಶ ವಾಸ; ವಿನೋಬನಗರ ಇವರ ತಮ್ಮನ ಹೆಂಡತಿ ಮನೆಯಲ್ಲಿ ಕಿಟಕಿ ಪಕ್ಕದಲ್ಲಿ ಮಲಗಿದ್ದಾಗ ಯಾರೋ ಕಳ್ಳರು 40 ಗ್ರಾಂ ಬಂಗಾರದ ತಾಳಿ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂದಾಜು ಬೆಲೆ 1,00,000 ಆಗಿರುತ್ತದೆ.

ಬೆಂಗಳೂರು
ಮೋಜಿನ ಜೀವನ ನಡೆಸುವುದಕ್ಕಾಗಿ ಬೈಕ್ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದವನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಗಿರಿ ಜಿಲ್ಲೆ, ಡಂಕಣಿಕೋಟೆ ತಾಲೂಕಿನ ದೇವರಬೆಟ್ಟ ಗ್ರಾಮದ ಅಂಬರೀಷ್ ಅಲಿಯಾಸ್ ಅಂಬಿ (22) ಬಂಧಿತ ಆರೋಪಿ. ಈತನಿಂದ 6 ಲಕ್ಷ ರೂ. ಮೌಲ್ಯದ 12 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.











Click it and Unblock the Notifications