ಮದುವೆಯಾದ ತಿಂಗಳಲ್ಲೇ ಪತ್ನಿ ಕೊಂದ ಶೋಕಿಲಾಲ
ಬೆಂಗಳೂರು, ಏ.28: ಕೃಷ್ಣರಾಜಪೇಟೆ ತಾಲೂಕಿನ ವಸಂತಪುರ ಗ್ರಾಮದಲ್ಲಿ ಆತ ಶೋಕಿಲಾಲ ಎಂದೇ ಫೇಮಸ್ ಆಗಿದ್ದ. ಮದುವೆಯಾಗಿ ಒಂದೂವರೆ ತಿಂಗಳಿಗೆ ವರದಕ್ಷಿಣೆ ದುಡ್ಡು ಸಾಲುತ್ತಿಲ್ಲ ಎಂಬ ನೆಪವೊಡ್ಡಿ ಪತ್ನಿಯನ್ನು ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿಬಿಟ್ಟಿದ್ದಾನೆ.
ವರದಕ್ಷಿಣೆ ಹಣವನ್ನು ತರದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ನಾಪತ್ತೆಯಾಗಿರುವ ಇತ್ತೀಚೆಗೆ ಘಟನೆ ನಡೆದಿದೆ. ಹೆಮ್ಮನಹಳ್ಳಿ ಗ್ರಾಮದ ಲೇ.ರಾಮೇಗೌಡ ಮತ್ತು ಭಾಗ್ಯಮ್ಮ ದಂಪತಿಯ ಪುತ್ರಿಯಾದ ರಾಣಿ (22) ಕೊಲೆಯಾದ ದುರ್ದೈವಿ. ಈಕೆಯನ್ನು ಕೊಲೆಗೈದ ಪತಿ ಶೀಳನೆರೆ ಹೋಬಳಿಯ ವಸಂತಪುರ ಗ್ರಾಮದ ಬಸವರಾಜು (30) ಪರಾರಿಯಾಗಿದ್ದಾನೆ.
ಒಂದೂವರೆ ತಿಂಗಳ ಹಿಂದೆಯಷ್ಟೇ ಬಸವರಾಜುಗೆ ಮದುವೆ ಸಂದರ್ಭದಲ್ಲಿ 100 ಗ್ರಾಂ ಚಿನ್ನದ ಆಭರಣಗಳು, 2 ಲಕ್ಷ ರೂ. ನಗದು ಸೇರಿದಂತೆ ಇತರೆ ಉಡುಗೊರೆಗಳನ್ನು ನೀಡಲಾಗಿತ್ತು. ಆದರೆ, ದುಡಿಯದೇ ಶೋಕಿ ಮಾಡಿಕೊಂಡು ಕಾಲ ಕಳೆಯುತ್ತಿದ್ದ ಬಸವರಾಜು, ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿ ರಾಣಿಗೆ ಪೀಡಿಸುತ್ತಿದ್ದ, ಅದಕ್ಕಾಗಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ ಎಂದು ರಾಣಿ ಪೋಷಕರು ದೂರು ನೀಡಿದ್ದಾರೆ.
ಕೊಲೆಗೈದ ಮೇಲೆ ತನ್ನ ಪತ್ನಿ ಕಪಿಲೆ ಬಾವಿಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಗ್ರಾಮದಲ್ಲಿ ವದಂತಿ ಹಬ್ಬಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರಾಣಿಯ ಶವವನ್ನು ತಂದು ಮಲಗಿಸಿ ಬಸವರಾಜು ನಾಪತ್ತೆಯಾಗಿದ್ದಾನೆ. ಹೆಮ್ಮನಹಳ್ಳಿ ಗ್ರಾಮಸ್ಥರಿಂದ ಮಾಹಿತಿ ಪಡೆದ ಕೆ.ಆರ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಉಳಿದಂತೆ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳತ್ತ ಒಮ್ಮೆ ಕಣ್ಣು ಹಾಯಿಸಿ...

ಹಾಸನ: ಇಬ್ಬರ ಬಲಿ ಪಡೆದ ಹೆಮ್ಮರ
ಹಾಸನ ಜಿಲ್ಲೆ ಅರಸೀಕೆರೆ ಬಳಿ ಬಿರುಗಾಳಿ ವೇಳೆ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಮಂಡ್ಯ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ರವಿವಾರ ಸಂಭವಿಸಿದೆ.
ಮೃತರನ್ನು ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಯೋಗೇಶ್(40) ಹಾಗೂ ಮದ್ದೂರು ಪಟ್ಟಣದ ಹೊಳೇಬೀದಿ ನಿವಾಸಿ ಕಾರು ಚಾಲಕ ಮಂಜು(26) ಎಂದು ಗುರುತಿಸಲಾಗಿದೆ.
ಯೋಗೇಶ್ ತಮ್ಮ ಪುತ್ರನಿಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಅಕ್ಷರಭ್ಯಾಸಕ್ಕೆಂದು ತಂದೆ ತಾಯಿ, ಪತ್ನಿಯೊಂದಿಗೆ ತೆರಳಿದ್ದಾರೆ. ವಾಪಾಸಾಗುವ ವೇಳೆ ಕಾರಿನ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಚಾಲಕ ಮಂಜು ಮತ್ತು ಮುಂದಿನ ಸೀಟಿನಲ್ಲಿದ್ದ ಯೋಗೇಶ್ ಮೃತಪಟ್ಟಿದ್ದಾರೆ.
ಯೋಗೇಶ್ ಅವರ ಪತ್ನಿ ಭಾಗ್ಯಮ್ಮ, ತಂದೆ ನಾರಾಯಣಪ್ಪ ಹಾಗೂ ತಾಯಿ ಪ್ರತಿಮಾ ಅವರಿಗೆ ತೀವ್ರತರನಾದ ಗಾಯಗಳಾಗಿದ್ದು, ಮಗು ಆಶ್ವರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಳಕಾಲ್ಮೂರು: ಆಟೋ ಪಲ್ಟಿ, ಒಬ್ಬರ ಸಾವು
ಮೊಳಕಾಲ್ಮೂರು ತಾಲ್ಲೂಕಿನ ತಮ್ಮೇನಹಳ್ಳಿ ಗೇಟ್ ಸಮೀಪದ ಎಸ್.ಹೆಚ್-19 ರಸ್ತೆಯಲ್ಲಿ ನಂ.ಕೆಎ-34/ಎ-3103ನೇ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ರಾಂಪುರ ಗ್ರಾಮದ ಕಡೆ ಬರುವಾಗ ಆಟೋವನ್ನು ಎಡಭಾಗಕ್ಕೆ ಪಲ್ಟಿ ಹೊಡೆಸಿದ ಪರಿಣಾಮ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐಟಿಐ ವಿದ್ಯಾರ್ಥಿ ತಾಲ್ಲೂಕಿನ ಬೊಮ್ಮದೇವರಹಳ್ಳಿ ಗ್ರಾಮದ ವಾಸಿ ಮಲ್ಲಿಕಾರ್ಜುನ(19) ಎಂಬುವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ರಕ್ತಗಾಯಗಳಾಗಿತ್ತು.
ಗಾಯಾಳುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಲ್ಲಿಕಾರ್ಜುನರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಮಲ್ಲಿಕಾರ್ಜುನರವರು ಕಂಪ್ಯೂಟರ್ ತರಬೇತಿಗಾಗಿ ತಮ್ಮ ಗ್ರಾಮದಿಂದ ರಾಂಪುರಕ್ಕೆ ಹೋಗುವಾಗ ಈ ಅಪಘಾತ ಸಂಭವಿಸಿರುತ್ತದೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ತುಮಕೂರು : ಕುಡುಕ ಪತಿಯಿಂದ ಪತ್ನಿ ಹತ್ಯೆ
ನಾಗರಾಜ ಬಿನ್ ಶಿವಾಜಿರಾವ್ ಲೆಕ್ಕಪರಿಶೋದಕ ಆರೋಗ್ಯ ಹಾಲಿನಡೈರಿ ಯಕ್ಕನಹಳ್ಳಿ ಮಲೇಬೆನ್ನೂರು ಹಾಲಿ ವಾಸ, ವಿಜಯನಗರ ಬಡಾವಣೆ, ಹರಿಹರ ದೂರು:
ಪಿರ್ಯಾದಿಯ ಚಿಕ್ಕಮ್ಮನ ಮಗಳಾದ ಗೀತಾಳನ್ನು ಈ ಹಿಂದೆ ರಾಣೇಬೆನ್ನೂರು ತಾಲ್ಲೂಕ್ ನದಿಹಳಹಳ್ಳಿ ವಾಸಿ ಪರಸಪ್ಪ ಎಂಬುವರೊಂದಿಗೆ ಮದುವೆ ಮಾಡಿದ್ದು, ಸಂಸಾರದಲ್ಲಿ ಜಗಳ ಬಂದು ಅವರಿಂದ ವಿಚ್ಚೇದನವಾದ ನಂತರ ನಾರಾಯಣಪ್ಪ ನೊಂದಿಗೆ ಮದುವೆಯಾಗಿದ್ದು, ಶಿವು ಮತ್ತು ಲಕ್ಷ್ಮಿ ಎಂಬುವ ಮಕ್ಕಳಿರುತ್ತಾರೆ.
ಗೀತಾ ಮತ್ತು ನಾರಾಯಣಪ್ಪ 2 ನೇ ಕ್ರಾಸ್ ಆಂಜನೇಯ ದೇವಸ್ಥಾನದ ಹತ್ತಿರ ಹಳೇ ಹರ್ಲಾಪುರದ ಸರೋಜಮ್ಮ ಗಂಡ ಲೇ ಬೀರಪ್ಪ ಇವರ ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು. ಗೀತಾಳ ಗಂಡ ನಾರಾಯಣಪ್ಪನಿಗೆ ಅತೀಯಾದ ಮದ್ಯಪಾನದ ಚಟವಿದ್ದು, ಗೀತಾಳ ಮೇಲೆ ಅನುಮಾನಿಸಿ ಪ್ರತಿದಿನ ಕುಡಿದು ಬಂದು ಅವಳಿಗೆ ಹೊಡಿ ಬಡಿ ಮಾಡಿ ಜಗಳ ಮಾಡುತ್ತಿದ್ದು, ಈ ಬಗ್ಗೆ ಅವರ ಸಂಬಂಧಿಕರು ಮತ್ತು ಹಿರಿಯರು ಬುದ್ದಿವಾದ ಹೇಳಿದರೂ ಕೇಳುತ್ತಿರಲಿಲ್ಲ.
ನಾರಾಯಣಪ್ಪ ಗೀತಾಳೊಂದಿಗೆ ಜಗಳ ಮಾಡಿ ಹೊಟ್ಟೆಗೆ, ಬಾಯಿಗೆ, ಎದೆಯ ಹತ್ತಿರ, ಎಡಗಾಲ ಹತ್ತಿರ ಕೊಚ್ಚಿ ಕೊಲೆ ಮಾಡಿ, ಆತನು ಸಹ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತೀರ್ಥಹಳ್ಳಿ ಠಾಣೆ ಮನೆ ಕಳುವು ಪ್ರಕರಣಃ
ಎಸ್.ಟಿ.ಮೋಹನ ಬಿನ್ ತಿಮ್ಮಯ್ಯ, ಅನುರಾಧ ನರ್ಸಿಂಗ್ ಹೋಂ ಹಿಂಭಾಗ, ಸೊಪ್ಪುಗುಡ್ಡೆ ತೀರ್ಥಹಳ್ಳಿ ಇವರು ತನ್ನ ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತ ಬೆಂಗಳೂರಿಗೆ ಹೋಗಿದ್ದು, ಕಳೆದ ವಾರ ಬಂದು ನೋಡಿದರೆ ಯಾರೋ ಕಳ್ಳರು ಮನೆಯ ಬೀಗ ಒಡೆದು ಹಾಕಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಸುಮಾರು ರೂ. 1,14,000/- ಬೆಲೆ ಬಾಳುವ ಬಂಗಾರದ ಒಡುವೆಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications