ಖಾತೆ ಬದಲಾವಣೆ: ಹೈಕಮಾಂಡ್ಗೆ ಶ್ರೀರಾಮುಲು ಮಹತ್ವದ ಪತ್ರ?
ಬೆಂಗಳೂರು, ಅ. 12: ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಹೈಕಮಾಂಡ್ಗೆ ಪತ್ರ ಬರೆಯಲು ಶ್ರೀರಾಮುಲು ಅವರು ನಿರ್ಧಾರ ಮಾಡಿದ್ದಾರೆ. ಪತ್ರದಲ್ಲಿ ಮಹತ್ವದ ಬೇಡಿಕೆಯನ್ನು ಹೈಕಮಾಂಡ್ ಎದುರು ಇಡಲಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ ಎಂಬ ಕಾರಣದಿಂದ ಶ್ರೀರಾಮುಲು ಅವರಿಂದ ಆರೋಗ್ಯ ಇಲಾಖೆಯನ್ನು ಹಿಂದಕ್ಕೆ ಪಡೆದು ಡಾ. ಸುಧಾಕರ್ ಅವರಿಗೆ ವಹಿಸಲಾಗಿದೆ. ಇದು ಶ್ರೀರಾಮುಲು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನ ನಡೆಸಿದ್ದ ಶ್ರೀರಾಮುಲು ಅವರಿಂದ ಆರೋಗ್ಯ ಇಲಾಖೆ ಕಿತ್ತುಕೊಂಡಿರುವುದು ಅವರಿಗೆ ಆಗಿರುವ ಹಿನ್ನಡೆಯಾಗಿದೆ. ಹೀಗಾಗಿ ಹೈಕಮಾಂಡ್ಗೆ ಪತ್ರ ಬರೆಯಲು ಶ್ರೀರಾಮುಲು ಸಿದ್ಧತೆ ನಡೆಸಿದ್ದಾರೆ.

ಹೈಕಮಾಂಡ್ ಎದುರು ಮಹತ್ವದ ಬೇಡಿಕೆ
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಹೊಂದಾಣಿಕೆ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ಇದನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀರಾಮುಲು ಅವರಿಗೆ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯನ್ನು ಒಪ್ಪಿಕೊಂಡಿರುವ ಶ್ರೀರಾಮುಲು ಅವರು ಹೈಕಮಾಂಡ್ ಎದುರು ಮಹತ್ವದ ಬೇಡಿಕೆ ಇಡಲು ಪತ್ರ ಬರೆಯುತ್ತಿದ್ದಾರೆ.

ಪಕ್ಷ ಸಂಘಟನೆಗೆ ಅವಕಾಶ ಕೊಡಿ
ಸಂಫುಟದಿಂದ ಬಿಡುಗಡೆಗೊಳಿಸಿ ಸಂಪೂರ್ಣವಾಗಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುವಂತೆ ಶ್ರೀರಾಮುಲು ಹೈಕಮಾಂಡ್ ಎದುರು ಬೇಡಿಕೆ ಇಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಲು ಅನುಕೂಲ ಕಲ್ಪಿಸಬೇಕೆಂದು ಪತ್ರದಲ್ಲಿ ಅವರು ಉಲ್ಲೇಖಿಸಲಿದ್ದಾರೆ.

ಆರೋಗ್ಯ ಇಲಾಖೆ ಕ್ರಮಗಳ ಉಲ್ಲೇಖ
ಕಳೆದ ಆರು ತಿಂಗಳುಗಳಲ್ಲಿ ಆರೋಗ್ಯ ಸಚಿವನಾಗಿ ಮಾಡಿರುವ ಕೆಲಸಗಳ ಬಗ್ಗೆಯೂ ಶ್ರೀರಾಮುಲು ಹೈಕಮಾಂಡ್ಗೆ ಲಿಖಿತವಾಗಿ ತಿಳಿಸಲಿದ್ದಾರೆ. ಕೊರೊನಾ ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿರುವುದು ಸೇರಿದಂತೆ ಸೋಂಕು ನಿಯಂತ್ರಿಸಲು ಮಾಡಿದ ಪ್ರಯತ್ನಗಳನ್ನು ಪತ್ರದಲ್ಲಿ ಉಲ್ಲೇಖಿಸಲಿದ್ದಾರೆ. ಹೀಗಾಗಿ ಅಧಿಕಾರಿಗಳಿಂದ ಎಲ್ಲ ವಿವರಗಳನ್ನು ಪಡೆಯುತ್ತಿದ್ದಾರೆ.
Recommended Video

ಏಕಾಏಕಿ ಬದಲಾವಣೆ ಯಾಕೆ?
ಸಂಪುಟ ಪುನಾರಚನೆ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಬಿಡುಗಡೆ ಗೊಳಿಸಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಏಕಾಏಕಿ ಈಗ ಇಲಾಖೆಯಿಂದ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಕೊರೊನಾ ನಿಯಂತ್ರಣ ಮಾಡುವಲ್ಲಿ ಬರಿ ಆರೋಗ್ಯ ಇಲಾಖೆಯ ಪಾತ್ರವಿಲ್ಲ. ಎಲ್ಲ ಇಲಾಖೆಗಳ ಸಹಕಾರ ಮುಖ್ಯ. ಹೀಗಾಗಿ ಯಾವ ಇಲಾಖೆಗಳಿಂದ ಹೇಗೆ ಸಹಕಾರ ಸಿಕ್ಕಿತ್ತು ಎಂಬುದನ್ನು ಪತ್ರದಲ್ಲಿ ವಿವರಿಸಲಿದ್ದಾರೆ.
ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಸಾಕಷ್ಟು ವೈಫಲ್ಯವಾಗಿತ್ತು. ಆಗ ಮಂತ್ರಿಗಳ ಬದಲಾವಣೆಗೆ ಮುಂದಾಗದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಈಗ ಏಕಾಏಕಿ ಆರೋಗ್ಯ ಇಲಾಖೆಯಿಂದ ಬಿಡುಗಡೆಗೊಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಹೈಕಮಾಂಡ್ಗೆ ಬರೆಯುವ ಪತ್ರದಲ್ಲಿ ಉಲ್ಲೇಖಿಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications