ಶ್ರೀಲಂಕಾದಲ್ಲಿ ಜೆಡಿಎಸ್ ಮುಖಂಡರ ನಾಪತ್ತೆ, ಸಾವು: ಕುಮಾರಸ್ವಾಮಿ ಆಘಾತ
ಬೆಂಗಳೂರು, ಏಪ್ರಿಲ್ 22: ಚಿಕ್ಕಬಳ್ಳಾಪುರದ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ನಡೆಸಿ, ಮತದಾನ ಮುಗಿಸಿ ಶ್ರೀಲಂಕಾಕ್ಕೆ ತೆರಳಿದ್ದ ಏಳು ಮಂದಿ ಜೆಡಿಎಸ್ ಮುಖಂಡರು ನಾಪತ್ತೆಯಾಗಿರುವ ಘಟನೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದಾರೆ.
ನೆಲಮಂಗಲದ ಶಿವಣ್ಣ, ಮುನಿಯಪ್ಪ, ಲಕ್ಷ್ಮೀನಾರಾಯಣ, ಬೆಂಗಳೂರಿನ ಹನುಮಂತರಾಯಪ್ಪ, ತುಮಕೂರಿನ ರಮೇಶ್, ಬೆಂಗಳೂರು ಉತ್ತರ ತಾಲ್ಲೂಕಿನ ನಿವಾಸಿ ಮಾರೇಗೌಡ, ಪುಟ್ಟರಾಜು ಚುನಾವಣೆ ಮುಗಿದ ಬಳಿಕ ಪ್ರವಾಸಕ್ಕೆಂದು ಶ್ರೀಲಂಕಾಕ್ಕೆ ತೆರಳಿದ್ದರು. ಅವರು ಉಳಿದುಕೊಂಡಿದ್ದ ಶ್ಯಾಂಗ್ರಿಲಾ ಹೋಟೆಲ್ನಲ್ಲಿಯೇ ಆತ್ಮಾಹುತಿ ದಾಳಿ ನಡೆದಿದ್ದು, ಸ್ಫೋಟದ ಬಳಿಕ ಯಾರೂ ಸಂಪರ್ಕಕ್ಕೆ ಸಿಗದಿರುವುದು ಆತಂಕ ಮೂಡಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ನಡುವೆ ಗುಂಪಿನಲ್ಲಿ ತೆರಳಿದ್ದ ಕೆಲವು ಜೆಡಿಎಸ್ ಮುಖಂಡರು ಸ್ಫೋಟದಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಗೇವೇನಹಳ್ಳಿ ಶಿವಣ್ಣ, ಲಕ್ಷ್ಮೀನಾರಾಯಣ, ಹನುಮಂತರಾಯಪ್ಪ ಮತ್ತು ರಮೇಶ್ ಗೌಡ ಶ್ಯಾಂಗ್ರಿಲಾ ಹೋಟೆಲ್ನಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಟ್ಟು ಐವರು ಕನ್ನಡಿಗರು ದಾಳಿಯಲ್ಲಿ ಸತ್ತಿದ್ದಾರೆ.
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು
ಒಕ್ಕಲಿಗರ ಸಂಘದಿಂದ 30 ಜನರ ಶ್ರೀಲಂಕಾ ಪ್ರವಾಸ ಆಯೋಜನೆ ಮಾಡಲಾಗಿತ್ತು. ಅದಕ್ಕೆ ಪೂರ್ವ ಸಿದ್ಧತೆ ಮಾಡುವ ಸಲುವಾಗಿ ಏಳು ಮಂದಿ ಮೊದಲೇ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರ ಆಪ್ತ ನಾಗರಾಜ ರೆಡ್ಡಿ ಎಂಬುವವರು ಕೂಡ ಕೊಲಂಬೋದಲ್ಲಿ ನಾಪತ್ತೆಯಾಗಿದ್ದಾರೆ.
|
ಆಘಾತ ಹಾಗೂ ನೋವಾಗಿದೆ
'ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ JDS ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಏಳು ಮಂದಿ ಜೆಡಿಎಸ್ ಮುಖಂಡರು ಶ್ರೀಲಂಕಾದಲ್ಲಿ ನಾಪತ್ತೆ ?
Array |
ಸಾವಿನಿಂದ ತೀವ್ರ ಆಘಾತ
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಇಬ್ಬರು ಕನ್ನಡಿಗರಾದ ಕೆ.ಜಿ. ಹನುಮಂತರಾಯಪ್ಪ ಹಾಗೂ ಎಂ ರಂಗಪ್ಪ ಅವರು ಮೃತಪಟ್ಟಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಖಚಿತಪಡಿಸಿದ್ದಾರೆ. ನಾನು ವೈಯಕ್ತಿಕವಾಗಿ ಬಲ್ಲ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಾವಿನಿಂದ ತೀವ್ರ ಆಘಾತವಾಗಿದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರೊಂದಿಗೆ ನಾವಿದ್ದೇವೆ' ಎಂದು ಹೇಳಿದ್ದಾರೆ.
ಶ್ರೀಲಂಕಾ ಸ್ಫೋಟ: ಚರ್ಚ್ ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ
ಒಕ್ಕಲಿಗರ ಸಂಘದ ಪ್ರವಾಸ
ರಮೇಶ್ ಗೌಡ, ಲಕ್ಷ್ಮೀನಾರಾಯಣ, ಹನುಮಂತರಾಯಪ್ಪ, ಗೇವೇನಹಳ್ಳಿ ಶಿವಣ್ಣ, ರಂಗಪ್ಪ ಅವರು ಶ್ಯಾಂಗ್ರಿಲಾ ಹೋಟೆಲ್ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಒಕ್ಕಲಿಗರ ಸಂಘದಿಂದ ಶ್ರೀಲಂಕಾ ಪ್ರವಾಸ ಆಯೋಜನೆ ಮಾಡಲಾಗಿತ್ತು. ಅದಕ್ಕೆ ತಯಾರಿ ಮಾಡುವ ಸಲುವಾಗಿ ಏಳು ಮಂದಿ ಮೊದಲೇ ಅಲ್ಲಿಗೆ ತೆರಳಿದ್ದರು. ಉಳಿದ 30 ಮಂದಿ ಸೋಮವಾರ ಅಲ್ಲಿಗೆ ಪ್ರಯಾಣ ಬೆಳೆಸಬೇಕಿತ್ತು ಎನ್ನಲಾಗಿದೆ. ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಪ್ರವಾಸ ರದ್ದುಗೊಳಿಸಲಾಗಿದೆ.
ರಾಮಲಿಂಗಾರೆಡ್ಡಿ ಆಪ್ತ ನಾಪತ್ತೆ
ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರ ಆಪ್ತರಾದ ನಾಗರಾಜರೆಡ್ಡಿ ಕೊಲಂಬೋದಲ್ಲಿ ನಡೆದ ಸ್ಫೋಟದ ಬಳಿಕ ನಾಪತ್ತೆತಯಾಗಿದ್ದಾರೆ. ಅವರೊಂದಿಗೆ ತೆರಳಿದ್ದ ಪುರುಷೋತ್ತಮ್ ಅವರಿಗೆ ಗಾಯಗಳಾಗಿದ್ದು, ಕೊಲಂಬೋದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
|
ರಾಯಭಾರ ಕಚೇರಿ ಪ್ರತಿಕ್ರಿಯೆ
ಹಾರೋಕೇತನಹಳ್ಳಿಯ ಪುಟ್ಟರಾಜು, ಅಡಕಿಮಾರನಹಳ್ಳಿಯ ಮಾರೇಗೌಡ, ಲಕ್ಷ್ಮೀನಾರಾಯಣ ಮತ್ತು ರಮೇಶ್ ಅವರನ್ನು ಬಾಂಬ್ ಸ್ಫೋಟದ ಬಳಿಕ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಕಣ್ಮರೆಯಾದ ವ್ಯಕ್ತಿಗಳು ಶ್ಯಾಂಗ್ರಿಲಾ ಹೋಟೆಲ್ನಲ್ಲಿದ್ದರು ಎಂದು ಅರುಣ್ ಎಂಬುವವರು ಸಚಿವ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ಶ್ರೀಲಂಕಾದಲ್ಲಿರುವ ಭಾರತದ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಸಂದೇಶದಲ್ಲಿ ಹೇಳಿರುವಂತೆ ಕೊಲಂಬೋದ ಶ್ಯಾಂಗ್ರಿಲಾ ಹೋಟೆಲ್ನಲ್ಲಿ ಅವರು ಇದ್ದಿದ್ದರ ಬಗ್ಗೆ ನಮಗೆ ತಿಳಿದಿದೆ. ಅವರ ಬಗ್ಗೆ ಹೋಟೆಲ್ ಮತ್ತು ಆಸ್ಪತ್ರೆಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಸಹಾಯವಾಣಿಗೆ ದಯವಿಟ್ಟು ಕರೆಮಾಡಿ ಎಂದು ಟ್ವೀಟ್ ಮಾಡಿದೆ.