ಶ್ರೀನಿವಾಸ ಗೌಡ ವಿರುದ್ಧ ಎಸ್.ಆರ್.ವಿಶ್ವನಾಥ್ರಿಂದ ಹಕ್ಕುಚ್ಯುತಿ ಮಂಡನೆ
ಬೆಂಗಳೂರು, ಜುಲೈ 19 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಚರ್ಚೆ ವೇಳೆ ಆಪರೇಷನ್ ಕಮಲದ ವಿಚಾರ ಪ್ರಸ್ತಾಪವಾಗಿದೆ. ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡಿರುವ ಜೆಡಿಎಸ್ನ ಶ್ರೀನಿವಾಸ ಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ತೀರ್ಮಾನಿಸಲಾಗಿದೆ.
ಯಲಹಂಕ ಕ್ಷೇತ್ರದ ಶಾಸಕ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಸ್ಪೀಕರ್ ರಮೇಶ್ ಕುಮಾರ್ಗೆ ವಿಧಾನಸಭೆಯ ಕಾರ್ಯ ವಿಧಾನ ಹಾಗೂ ನಿಯಮ 192ರ ಅಡಿಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿದ್ದಾರೆ.
ಶುಕ್ರವಾರ ವಿಧಾನಸಭೆಯ ಅಧಿವೇಶನದಲ್ಲಿ ಮಖ್ಯಮಂತ್ರಿಗಳು ಮಂಡಿಸಿದ್ದ ಪ್ರಸ್ತಾಪದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಎಸ್. ಆರ್. ವಿಶ್ವನಾಥ್ ಅವರು ಬಿಜೆಪಿ ಸೇರಿದರೆ 5 ಕೋಟಿ ಹಣವನ್ನು ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಆರೋಪಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕು ಎಂದು ಎಸ್. ಆರ್. ವಿಶ್ವನಾಥ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ವಿವರ ಇಲ್ಲಿದೆ.....

ಹಿಂದೆಯೂ ವಿಚಾರ ಪ್ರಸ್ತಾಪಿಸಿದ್ದರು
ತಮ್ಮ ಪತ್ರದಲ್ಲಿ ಶಾಸಕ ಎಸ್. ಆರ್. ವಿಶ್ವನಾಥ್, ಸದರಿ ಶಾಸಕರು ಇದೇ ವಿಚಾರವನ್ನು ಈ ಹಿಂದೆಯೂ ಪ್ರಸ್ತಾಪಸಿದ್ದರು. "ನನಗೆ 30 ಕೋಟಿ ರೂ. ಆಮಿಷವೊಡ್ಡಿದ್ದರು. ನಾನು ಬಾತ್ ರೂಂಗೆ ಹೋಗಿದ್ದಾಗ ಬಿಜೆಪಿ ಮುಖಂಡರು ನನ್ನ ಮನೆಯಲ್ಲಿ 5 ಕೋಟಿ ರೂ.ಗಳನ್ನು ಇಟ್ಟು ಹೋಗಿದ್ದರು" ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆಗ ಸರ್ಕಾರ ಈ ಬಗ್ಗೆ ಎಸಿಬಿ ತನಿಖೆಗೆ ಸೂಚನೆ ನೀಡಿತ್ತು.

ಎಸಿಬಿ ವಿಚಾರಣೆ ನಡೆದಿತ್ತು
ಎಸಿಬಿ ಅಧಿಕಾರಿಗಳು ಸದರಿ ಶಾಸಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಆ ಪ್ರಕಾರ ಹಲವು ಬಾರಿ ವಿಚಾರಣೆಗೆ ಹಾಜರಾದ ಶಾಸಕರು ಅಂತಿಮವಾಗಿ ದಿನಾಂಕ 18/3/2019ರಂದು ವಿಚಾರಣೆಗೆ ಹಾಜರಾಗಿ "ಮಾಧ್ಯಮಗಳ ಮುಂದೆ ನಾನು ಸುಳ್ಳು ಹೇಳಿಕೆ ನೀಡಿದ್ದೆ ಎಂದು ಎಸಿಬಿ ಅಧಿಕಾರಿಗಳ ಮುಂದೆ ಅಧಿಕೃತವಾಗಿ ಹೇಳಿಕೆ ದಾಖಲಿಸಿರುತ್ತಾರೆ" ಎಂದು ತಿಳಿದುಬಂದಿದೆ.

ಏಕಾಏಕಿ ಮತ್ತೆ ಆರೋಪ
ಎಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದ ಶಾಸಕರು ಇಂದು ಅಧಿವೇಶನದಲ್ಲಿ ಏಕಾಏಕಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ನನ್ನ ಘನತೆಗೆ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ.

ನನ್ನ ಹಕ್ಕಿಗೆ ಚ್ಯುತಿ ಬಂದಿದೆ
ಶಾಸಕರು ಅಧಿವೇಶನದಲ್ಲೇ ಈ ರೀತಿ ನನ್ನ ಘನತೆಗೆ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರುತ್ತಾರೆ. ಶಾಸಕರು ಅಧಿವೇಶನದಲ್ಲೇ ಈ ರೀತಿ ಯಾವುದೇ ಆಧಾರ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ಶಾಸಕನಾಗಿ ನನ್ನ ಹಕ್ಕಿಗೆ ಚ್ಯುತಿ ಬಂದಿದೆ. ಅಧಿವೇಶನದಲ್ಲಿ ನಾನು ಶಾಸಕನಾಗಿ ನನ್ನ ಕರ್ತವ್ಯಗಳನ್ನು ಪಾಲಿಸಲು ಇದರಿಂದ ನಿರ್ಬಂಧಿಸಿದಂತಾಗಿದೆ. ಆದ್ದರಿಂದ, ಸದರಿ ಕೋಲಾರ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕೆಂದು ಕೋರುತ್ತೇನೆ.












Click it and Unblock the Notifications