ಸದನಕ್ಕೆ ಅಪರಿಚಿತ ವ್ಯಕ್ತಿ ಪ್ರವೇಶ ಹಿನ್ನೆಲೆ; ವಿಧಾನಸೌಧದಲ್ಲಿ ಯು.ಟಿ ಖಾದರ್ ರೌಂಡ್ಸ್!
ಬೆಂಗಳೂರು, ಜುಲೈ 10: ವಿಧಾನಮಂಡಲ ಅಧಿವೇಶನದ ವೇಳೆ ಅನಾಮಿಕ ವ್ಯಕ್ತಿಯೋರ್ವ ವಿಧಾನಸಭೆಯ ಒಳಗೆ ಶಾಸಕರ ಕುರ್ಚಿಯಲ್ಲಿ ಕುಳಿತುಕೊಂಡ ಘಟನೆಯ ಹಿನ್ನಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಸೋಮವಾರ ಬೆಳಗ್ಗೆ ವಿಧಾನಸೌಧ ರೌಂಡ್ಸ್ ನಡೆಸುವ ಮೂಲಕ ಭದ್ರತೆಯನ್ನು ಪರಿಶೀಲನೆ ನಡೆಸಿದರು.
ಹೌದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ವೇಳೆ ವ್ಯಕ್ತಿಯೊಬ್ಬರು ತಾನು ಶಾಸಕ ಎಂದು ಪರಿಚಯಿಸಿಕೊಂಡು ವಿಧಾನಸಭೆಯ ಒಳಗಡೆ ಬಂದಿದ್ದರು. ಮೊನಕಾಲ್ಮೂರು ಶಾಸಕರ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಬಳಿಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೂ ಹಸ್ತಲಾಘವ ಮಾಡಿ ವಾಪಾಸ್ ಆಗಿದ್ದರು.

ಇನ್ನೂ ಸದನದ ಒಳಗೆ ಕುಳಿದ್ದಿದ್ದ ಶಾಸಕರೊಬ್ಬರಿಗೆ ಆ ವ್ಯಕ್ತಿ ಬಗ್ಗೆ ಅನುಮಾನ ಬಂದು ಭದ್ರತಾ ಸಿಬ್ಬಂದಿಗಳ ಗಮನಕ್ಕೆ ತಂದ ಬಳಿಕ ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆದ ಭದ್ರತಾ ಲೋಪದ ಬಗ್ಗೆ ಚರ್ಚೆ ಆಗಿತ್ತು. ಇನ್ನೂ ವಿಧಾನಸಭೆಯಲ್ಲಿ ಆದ ಭದ್ರತಾ ಲೋಪದ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ರು. ಹೀಗಾಗಿ ಇಂದು(ಶುಕ್ರವಾರ) ಸ್ವೀಕರ್ ಯು ಟಿ ಖಾದರ್ ಅವರು ಬೆಳಗ್ಗೆಯೇ ವಿಧಾನಸೌಧದ ಸುತ್ತಮುತ್ತ ರೌಂಡ್ಸ್ ನಡೆಸಿದ್ದಾರೆ.
ಇತ್ತ ಸ್ಪೀಕರ್ ಯು ಟಿ ಖಾದರ್ ಅವರು ವಿಧಾನಸೌಧ ರೌಂಡ್ಸ್ಗೂ ಮುನ್ನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ವಿಧಾನಸೌಧದ ಭದ್ರತೆಯನ್ನು ಪರಿಶೀಲನೆ ನಡೆಸಿದರು. ವಿಧಾನಸೌಧಕ್ಕೆ ಮುಂಚಿತವಾಗಿ ಆಗಮಿಸಿ ಭದ್ರತೆ ಪರಿಶೀಲಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಸಾಥ್ ನೀಡಿದರು. ಶುಕ್ರವಾರ ಘಟನೆಯ ಹಿನ್ನೆಲೆಯಲ್ಲಿ ವಿಧಾನಸೌಧದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಒಳಗಡೆ ಬರುವ ವ್ಯಕ್ತಿಗಳ ತಪಾಸಣೆ ಮಾಡಿ ಬಿಡಲಾಗುತ್ತಿದೆ.
ವಿಧಾನಸೌಧದ ಕೆಂಗಲ್ ಗೇಟ್ ಭದ್ರತೆಯ ಪರೀಶೀಲನೆ ನಡೆಸಿದ್ದು, ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರ ಐಡಿ ಕಾರ್ಡ್ ಪರಿಶೀಲಿಸಿ ಬಿಡುವಂತೆ ಸೂಚನೆ ನೀಡಿದರು. ಇನ್ನೂ ಭದ್ರತಾ ಲೋಪದ ಕುರಿತು ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಯು ಟಿ ಖಾದರ್ ಸಭೆ ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.












Click it and Unblock the Notifications