ಸೌಜನ್ಯ ಪ್ರಕರಣ ಸಿಬಿಐಗೆ ಒಪ್ಪಿಸಿ: ಡಾ. ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ, ನ.4: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣದ ಸಿಐಡಿ ತನಿಖೆ ಮತ್ತು ತನಿಖಾ ವರದಿ ಕುರಿತು ಸ್ಥಳೀಯರ ಮನಸ್ಸಿನಲ್ಲಿ ಇನ್ನೂ ಗೊಂದಲವಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಆಗ್ರಿಹಿಸಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಪರಾಮರ್ಶೆ ಆಗಬೇಕಾಗಿದೆ ಎಂದು ನಾನೂ ಬಯಸಿದ್ದೇನೆ. ಈ ಹಿಂದೆಯೂ ಸಿಬಿಐ ತನಿಖೆ ಆಗಬೇಕೆಂದು ಕೋರಿದ್ದೆ ಎಂದು ಅವರು ನ.2 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಿಐಡಿ ವರದಿ: ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಗುರುವಾರ (ಅ.31) ಸಲ್ಲಿಸಿದ್ದರು 12 ಪುಟಗಳ ತನಿಖಾ ವರದಿಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ಯತ್ನ ಹಾಗೂ ಹತ್ಯೆ ಮಾಡಿರೋದು ಆರೋಪಿ ಸಂತೋಷ್ ರಾವ್ ಎಂದು ನಮೂದಿಸಿ ಸಿಐಡಿ ಅಧಿಕಾರಿಗಳು ವರದಿಯನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ನೀಡಿದ್ದರು.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 12 ಸಾಕ್ಷ್ಯಗಳ ವಿಚಾರಣೆ ಬಳಿಕ ಸಿಐಡಿ ಅಧಿಕಾರಿಗಳು ನಿಶ್ಚಲ್ ಜೈನ್, ಧೀರಜ್, ಉದಯ್ ಜೈನ್, ಮಲ್ಲಿಕ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಸಂತೋಷ್ ರಾವ್ ಆರೋಪಿ ಎಂದು ಹೆಸರಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಅವಶ್ಯವಿದ್ದರೆ ಸಿಬಿಐಗೆ ವಹಿಸಲು ಅಭ್ಯಂತರವಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದರು.
ಕೊಲೆ ಪ್ರಕರಣದಲ್ಲಿ ಆರೋಪ ಕೇಳಿ ಬಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ತಮ್ಮನ ಮಗ ನಿಶ್ಚಲ್ ಜೈನ್, ಕೊಲೆ ನಡೆದ ದಿನ ಭಾರತದಲ್ಲಿ ಇರಲೇ ಇಲ್ಲ. ನಿಶ್ಚಲ್ ಜೈನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ, ಸೌಜನ್ಯ ಅವರ ಸಂತೋಷ್ ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಜೈನ್ ತ್ರಯರನ್ನು ರಕ್ಷಿಸುವ ಹುನ್ನಾರ ನಾವು ಸಿಬಿಐಗೆ ತನಿಖೆಗೆ ಆಗ್ರಹಿಸುತ್ತೇವೆ. ಮೆಡಿಕಲ್ ರಿಪೋರ್ಟ್ ಬಗ್ಗೆ ನಮಗೆ ಗೊತ್ತಿಲ್ಲ. ಎಂದು ಸೌಜನ್ಯ ಅವರ ತಾಯಿ ಕುಸುಮಾವತಿ ಪ್ರತಿಕ್ರಿಯಿಸಿದ್ದಾರೆ. ಸೌಜನ್ಯ ತಂದೆ ಚಂದಪ್ಪ ಗೌಡ ಕೂಡಾ ಪ್ರಕರಣ ಮುಚ್ಚಿ ಹಾಕಲು ಎಲ್ಲರೂ ಒಂದಾಗಿದ್ದಾರೆ. ನಾವು ಸಿಬಿಐ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದಿದ್ದರು.












Click it and Unblock the Notifications