ಶ್ರಮಿಕ್ ರೈಲುಗಳ ಸಂಚಾರ; ಕರ್ನಾಟಕದಿಂದ ವಾಪಸ್ ಆದ ಕಾರ್ಮಿಕರು ಎಷ್ಟು?
ಬೆಂಗಳೂರು, ಜುಲೈ 01 : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು 'ಶ್ರಮಿಕ್ ರೈಲು'ಗಳನ್ನು ಭಾರತೀಯ ರೈಲ್ವೆ ಓಡಿಸಿತು.
ಮೇ 4ರಿಂದ ಜೂನ್ 27ರ ತನಕ ನೈಋತ್ಯ ರೈಲ್ವೆ 256 ಶ್ರಮಿಕ್ ರೈಲುಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಓಡಿಸಿದೆ. 3.76 ಲಕ್ಷ ಕಾರ್ಮಿಕರು ಈ ರೈಲುಗಳಲ್ಲಿ ತವರು ರಾಜ್ಯವನ್ನು ತಲುಪಿದ್ದಾರೆ. ರಾಜ್ಯಗಳ ಬೇಡಿಕೆ ಆಧರಿಸಿ ರೈಲುಗಳ ಸಂಚಾರವನ್ನು ಈಗಲೂ ನಡೆಸಲಾಗುತ್ತಿದೆ.
ಕರ್ನಾಟಕದಿಂದ ಶ್ರಮಿಕ್ ರೈಲು ಸಂಚಾರ ಆರಂಭವಾದ ಮೊದಲ 13 ದಿನದಲ್ಲಿ 1 ಲಕ್ಷ ಕಾರ್ಮಿಕರು ಸಂಚಾರ ನಡೆಸಿದರು. ಬಳಿಕ ಕೇವಲ 6 ದಿನದಲ್ಲಿ 2 ಲಕ್ಷ ಪ್ರಯಾಣಿಕರು ಸಂಚರಿಸಿದರು.
ನೈಋತ್ಯ ರೈಲ್ವೆ ಕರ್ನಾಟಕದಿಂದ 248 ರೈಲುಗಳನ್ನು ಓಡಿಸಿದೆ. ಉಳಿದ ರೈಲುಗಳು ತಮಿಳುನಾಡಿನ ಹೊಸೂರು ರೈಲು ನಿಲ್ದಾಣದಿಂದ ಸಂಚಾರ ನಡೆಸಿದವು. 12,718 ಜನರು ಅಲ್ಲಿಂದ ಬೇರೆ-ಬೇರೆ ರಾಜ್ಯಕ್ಕೆ ವಾಪಸ್ ಆದರು.

ಯಾವ ರಾಜ್ಯಕ್ಕೆ ಎಷ್ಟು ಕಾರ್ಮಿಕರು?
ನೈಋತ್ಯ ರೈಲ್ವೆ ಬಿಹಾರಕ್ಕೆ 79 ರೈಲು ಓಡಿಸಿದ್ದು 1,16,313 ಕಾರ್ಮಿಕರು ವಾಪಸ್ ಆಗಿದ್ದಾರೆ. ಉತ್ತರ ಪ್ರದೇಶಕ್ಕೆ 56 ರೈಲು ಹೋಗಿದ್ದು 81,067, ಪಶ್ಚಿಮ ಬಂಗಾಳಕ್ಕೆ 27 ರೈಲು ಹೋಗಿದ್ದು 40,395 ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ.

ಯಾವ ವಿಭಾಗದಿಂದ ಎಷ್ಟು?
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ 223 ರೈಲು, ಹುಬ್ಬಳ್ಳಿ ವಿಭಾಗದಿಂದ 21, ಮೈಸೂರು ವಿಭಾಗದಿಂದ 12 ಶ್ರಮಿಕ್ ವಿಶೇಷ ರೈಲುಗಳು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಚಾರ ನಡೆಸಿವೆ.

ರಾಜ್ಯದ ಬೇಡಿಕೆಯಂತೆ ರೈಲು
ಕರ್ನಾಟಕದ ಸರ್ಕಾರದ ಬೇಡಿಕೆಯಂತೆ ನೈಋತ್ಯ ರೈಲ್ವೆ ರೈಲುಗಳನ್ನು ಓಡಿಸಿದೆ. ಮೊದಲು ಹೊರಟ ರೈಲುಗಳು ನೇರವಾಗಿ ತಲುಪಬೇಕಾದ ನಿಲ್ದಾಣಕ್ಕೆ ಸಂಚಾರ ನಡೆಸುತ್ತಿತ್ತು. ಯಾವುದೇ ನಿಲುಗಡೆ ಇರಲಿಲ್ಲ. ಬಳಿಕ ಕೆಲವು ನಿಲುಗಡೆಗಳನ್ನು ನೀಡಲಾಯಿತು. ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಆರೋಗ್ಯ ಪರೀಕ್ಷೆ ನಡೆಸಿಯೇ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.

ಕಾರ್ಮಿಕರಿಗೆ ಊಟ, ನೀರು
ಶ್ರಮಿಕ್ ರೈಲುಗಳಲ್ಲಿ ಸಂಚಾರ ನಡೆಸುವ ವಲಸೆ ಕಾರ್ಮಿಕರಿಗೆ ವಿವಿಧ ಎನ್ಜಿಓಗಳ ಸಹಾಯದಿಂದ ಊಟವನ್ನು ವಿತರಣೆ ಮಾಡಲಾಯಿತು. ಬೆಂಗಳೂರು ವಿಭಾಗದಿಂದ ಹೊರಟ ರೈಲುಗಳಲ್ಲಿ ಇದ್ದ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡಿ ಸುರಕ್ಷಿತ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.












Click it and Unblock the Notifications