ರಾಜ್ಯದ 13 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ದರ ಹೆಚ್ಚಳ: ಎಲ್ಲೆಲ್ಲಿ ಬೆಲೆ ಏರಿಕೆ?
ಬೆಂಗಳೂರು, ಅಕ್ಟೋಬರ್ 21: ಹಬ್ಬದ ಅವಧಿಯಲ್ಲಿ ರೈಲ್ವೆ ಪ್ರಯಾಣಿಕರಲ್ಲಿ ಭಾರಿ ಮಟ್ಟದ ಏರಿಕೆಯನ್ನು ನಿರೀಕ್ಷಿಸಿರುವ ನೈಋತ್ಯ ರೈಲ್ವೆ ಕರ್ನಾಟಕದ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.
ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆ ಏರಿಕೆಯು ಪ್ಲಾಟ್ಫಾರ್ಮ್ಗಳಲ್ಲಿ ಜನರ ಅನಗತ್ಯ ಹಾಗೂ ಮಿತಿಮೀರಿದ ಗುಂಪುಗೂಡುವಿಕೆಯನ್ನು ತಡೆಯುವ ಉದ್ದೇಶದಿಂದ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆ ಏರಿಕೆಯು ತಾತ್ಕಾಲಿಕವಾಗಿದೆ. ಹಬ್ಬದ ಅವಧಿಯಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆ 10 ರಿಂದ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಈ ಸಂಬಂಧ ನೈಋತ್ಯ ರೈಲ್ವೆಯು ಹೇಳಿಕೆ ಬಿಡುಗಡೆ ಮಾಡಿದ್ದು, 'ಕೋವಿಡ್-19 ಸೋಂಕಿನ ಕಾರಣದಿಂದ ಸಂಕಷ್ಟದ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲದವರು ಪ್ರವೇಶ ನೀಡುವುದನ್ನು ನಿರ್ಬಂಧಿಸುವ ಉದ್ದೇಶದಿಂದ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆಯನ್ನು ಏರಿಸಲಾಗಿದೆ' ಎಂದು ತಿಳಿಸಿದೆ. ದರ ಹೆಚ್ಚಳದಿಂದ ಜನರು ಅನಗತ್ಯವಾಗಿ ಪ್ಲಾಟ್ಫಾರ್ಮ್ ಪ್ರವೇಶಿಸುವುದು ಕಡಿಮೆಯಾಗಲಿದೆ. ಆಗ ಪ್ಲಾಟ್ಫಾರ್ಮ್ಗಳಲ್ಲಿ ಜನಸಾಂದ್ರತೆ ಕಡಿಮೆಯಾಗಲಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಸೋಂಕು ಹರಡುವ ಅಪಾಯ ತಗ್ಗಲಿದೆ ಎಂದು ಇಲಾಖೆ ಆಶಯ ವ್ಯಕ್ತಪಡಿಸಿದೆ. ಮುಂದೆ ಓದಿ.

ಎಲ್ಲೆಲ್ಲಿ ದರ ಹೆಚ್ಚಳ?
ಕೃಷ್ಣರಾಜಪುರ, ಬಂಗಾರಪೇಟೆ, ತುಮಕೂರು, ಹೊಸೂರು, ಧರ್ಮಾಪುರಿ, ಕೆಂಗೇರಿ, ಮಂಡ್ಯ, ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕರ್ಮೆಲರಂ ಮತ್ತು ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಗಳಲ್ಲಿ ಅಕ್ಟೋಬರ್ 21 ರಿಂದ ನವೆಂಬರ್ 11ರವರೆಗೂ ಪ್ಲಾಟ್ಫಾರ್ಮ್ ಟಿಕೆಟ್ ದರ 10 ರಿಂದ 50ರೂ.ಗೆ ಏರಿಕೆಯಾಗಲಿದೆ.

ಮೂರು ನಿಲ್ದಾಣಗಳಲ್ಲಿ ಹೆಚ್ಚಳ
ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಈ ಹಿಂದೆಯೂ ಬೆಂಗಳೂರಿನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಏರಿಕೆ ಮಾಡಲಾಗಿತ್ತು. ಈಗ ಅದನ್ನು ಮತ್ತಷ್ಟು ನಿಲ್ದಾಣಗಳಿಗೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ ಕೆಎಸ್ಆರ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಐದು ಪಟ್ಟು ಹೆಚ್ಚಿಸಲಾಗಿತ್ತು.

ಇಂದಿನಿಂದ ಬೆಂಗಳೂರು-ಚೆನ್ನೈ ರೈಲು
ರೈಲ್ವೆ ಇಲಾಖೆಯು ಇಂದಿನಿಂದ ಬೆಂಗಳೂರು-ಚೆನ್ನೈ ನಡುವೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ರೈಲು ನಂಬರ್ 06075 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 7.25ಕ್ಕೆ ಹೊರಡಲಿದೆ. ಬೆಂಗಳೂರು ನಗರಕ್ಕೆ 1.10ಕ್ಕೆ ತಲುಪಲಿದೆ. ರೈಲು ನಂಬರ್ 06076 ಬೆಂಗಳೂರು ನಗರದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಚೆನ್ನೈ ತಲುಪಲಿದೆ. ಈ ರೈಲು 8 ಎಸಿ ಕೋಚ್ಗಳನ್ನು ಹೊಂದಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
Recommended Video

ಡಬಲ್ ಡೆಕ್ಕರ್ ರೈಲು
ಈ ರೈಲು ಕುಪ್ಪಂ, ಬಂಗಾರಪೇಟೆ, ಕೆ. ಆರ್. ಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಡಬಲ್ ಡೆಕ್ಕರ್ ಸಂಪೂರ್ಣ ಕಾಯ್ದಿರಿಸಿದ ಸೀಟುಗಳನ್ನು ಹೊಂದಿರುವ ವಿಶೇಷ ರೈಲು ಇದಾಗಿದೆ.












Click it and Unblock the Notifications