Tomato Price: ಟೊಮ್ಯಾಟೋ ಬೆಳೆದು ಕೋಟಿ ದುಡಿದ ಕರ್ನಾಟಕದ ಹಲವು ರೈತರು
ಕೆಂಪು ಸುಂದರಿ ಟೊಮ್ಯಾಟೋ ಕೃಷಿ ಎನ್ನುವುದು ರೈತರಿಗೆ ಲಾಟರಿ ಇದ್ದಂತೆ. ಲಾಭ ಬಂದರೆ ಲಕ್ಷ ದುಡಿಯುವುದು ಎಷ್ಟು ನಿಜವೋ ಬೆಲೆ ಸಿಗದಿದ್ದರೆ ಲಕ್ಷ ಲಕ್ಷ ನಷ್ಟವಾಗುವುದು ಕೂಡ ಅಷ್ಟೇ ನಿಜ.
ಈ ಬಾರಿ ಟೊಮ್ಯಾಟೋ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದ್ದು, ಹಲವು ರೈತರಿಗೆ ಅದೃಷ್ಟ ಲಕ್ಷ್ಮಿ ಒಲಿದು ಬಂದಿದೆ. ಹಲವು ರೈತರು ಲಕ್ಷ, ಕೋಟಿ ರೂಪಾಯಿ ಹಣ ಸಂಪಾದನೆ ಮಾಡಿದ್ದಾರೆ. ಹಲವು ವರ್ಷಗಳಿಂದ ಬೆಳೆ ನಷ್ಟ, ಕಡಿಮೆ ಬೆಲೆಯಿಂದ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಕೋಟ್ಯಧಿಪತಿಗಳಾಗಿದ್ದಾರೆ.

ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ವರ್ತಕರು ಮತ್ತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕನಿಷ್ಠ 15 ರೈತರು ಈ ಋತುವಿನಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
4 ಕೋಟಿ ರುಪಾಯಿ ದುಡಿದ ಮಂಡ್ಯದ ರೈತ
ಸುಮಾರು 10 ಎಕರೆ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದ ಮಂಡ್ಯದ ರೈತರೊಬ್ಬರು ಕಳೆದ ಎರಡು ತಿಂಗಳಲ್ಲಿ ಸುಮಾರು 4 ಕೋಟಿ ಆದಾಯ ಗಳಿಸಿದ್ದಾರೆ ಎಂದು ಕೋಲಾರ ಎಪಿಎಂಸಿಯ ವರ್ತಕ ಸಿಎಂಆರ್ ಶ್ರೀನಾಥ್ ತಿಳಿಸಿದ್ದಾರೆ.
ಕೋಲಾರ ಎಪಿಎಂಸಿಗೆ ಪ್ರತಿ ದಿನ ಸರಾಸರಿ 1,000 ಬಾಕ್ಸ್ಗಳನ್ನು 20 ದಿನಗಳವರೆಗೆ ಅವರು ಸರಬರಾಜು ಮಾಡಿದ್ದಾರೆ ಎಂದು ಶ್ರೀನಾಥ್ ಹೇಳಿದರು. ಉತ್ತಮ ಗುಣಮಟ್ಟದ ಟೊಮ್ಯಾಟೊ ಇದ್ದ ಕಾರಣ ಪ್ರತಿ ಬಾಕ್ಸ್ಗೆ 1,800 ರೂಪಾಯಿ ಬೆಲೆ ಪಡೆದಿದ್ದಾರೆ ಎಂದು ಹೇಳಿದರು.
"ನಾನು ಟೊಮ್ಯಾಟೋ ಬೆಳೆಯಲು ವೈಜ್ಞಾನಿಕ ವಿಧಾನಗಳನ್ನು ಬಳಸಿದ್ದೇನೆ. ನನ್ನ ಗಿಡಗಳಿಗೆ ವೈರಸ್ ಮತ್ತು ಬಿಳಿ ನೊಣಗಳ ಬಾಧೆ ಇದ್ದರೂ ನನ್ನ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡಿತು ಎಂದು 4 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ ರೈತ ಹೇಳಿದ್ದು" ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ.
ಹಲವು ರಾಜ್ಯಗಳಿಗೆ ಟೊಮ್ಯಾಟೋ ಪೂರೈಕೆ
ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ಮತ್ತು ಇತರ ಉತ್ತರ ಭಾರತದ ರಾಜ್ಯಗಳು ಖರೀದಿಸುತ್ತಿರುವ ಉತ್ತಮ ಗುಣಮಟ್ಟದ ಟೊಮ್ಯಾಟೊವನ್ನು ಬಾಕ್ಸ್ಗೆ 1,800 ರಿಂದ 2,200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಸರಬರಾಜಾಗುತ್ತಿರುವ ಎರಡನೇ ದರ್ಜೆಯ ಟೊಮ್ಯಾಟೊ ಒಂದು ಬಾಕ್ಸ್ಗೆ 1,200 ರಿಂದ 1,500 ರೂ.ಗೆ ಸಗಟು ಬೆಲೆ ಇದೆ ಎಂದು ಶ್ರೀನಾಥ್ ಹೇಳಿದರು.
ನಷ್ಟ ತುಂಬಿಕೊಂಡ ರೈತರು
ಯಾವ ರೈತರು ಒಂದೇ ವರ್ಷದಲ್ಲಿ ಟೊಮ್ಯಾಟೋ ಬೆಳೆದು ಲಕ್ಷ, ಕೋಟಿ ಗಳಿಸಿಲ್ಲ. ಹಲವರು ಹಲವು ವರ್ಷಗಳಿಂದ ಲಕ್ಷಾಂತರ ನಷ್ಟ ಅನುಭವಿಸಿದ್ದು ಈ ಬಾರಿ ಅದನ್ನು ಮರಳಿ ಪಡೆದುಕೊಂಡಿದ್ದಾರೆ ಎಂದು ಎಪಿಎಂಸಿ ವರ್ತಕರು ಹೇಳಿದ್ದಾರೆ.
2021-22 ಮತ್ತು 2022-23ನೇ ಸಾಲಿನಲ್ಲಿ ವ್ಯಾಪಾರಿಗಳು 300 ರಿಂದ 400 ರೂ.ಗೆ ಒಂದು ಬಾಕ್ಸ್ ಟೊಮ್ಯಾಟೊ ಬೆಲೆ ಇದ್ದಾಗ ಅಪಾರ ನಷ್ಟವಾಗಿದೆ. ಈ ವರ್ಷವೂ ಬಿಳಿ ನೊಣಗಳು ಮತ್ತು ಇತರ ರೋಗಗಳಿಂದ ಇಳುವರಿ ಭಾರಿ ಕಡಿಮೆಯಾಗಿದೆ.
ಶೇಕಡಾ 35 ರಿಂದ 40 ರಷ್ಟು ಮಾತ್ರ ಇಳುವರಿ ಬಂದಿದೆ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿಯ ರೈತ ಪ್ರಕಾಶ್ ಎಂ.ಪಿ. ಹೇಳಿದ್ದಾರೆ. ಅವರು 6 ಎಕರೆ ಟೊಮ್ಯಾಟೋ ಬೆಳೆದು 90 ಲಕ್ಷ ರೂಪಾಯಿ ಗಳಿಸಿದ್ದಾರೆ. ಗ್ರೀನ್ ಹೌಸ್ನಲ್ಲಿ ಟೊಮ್ಯಾಟೋ ಬೆಳೆದರು ಬೆಳೆಗಳಿಗೆ ರೋಗ ತಗುಲಿದೆ. ಶೇಕಡಾ 40-50 ರಷ್ಟು ಬೆಳೆ ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
12 ಎಕರೆ ಜಮೀನಿನಲ್ಲಿ ಟೊಮೇಟೊ ಬೆಳೆದು 70 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿರುವ ಮಾಲೂರು ತಾಲೂಕಿನ ತಾರನಹಳ್ಳಿಯ ರೈತ ರವಿ ಟಿ.ಎನ್, ಬೆಳೆಗಳಿಗೆ ರೋಗ ಬಾರದಿದ್ದರೆ ಹೆಚ್ಚು ಆದಾಯ ಬರುತ್ತಿತ್ತು ಎಂದು ಹೇಳಿದ್ದಾರೆ.
"ಬೆಂಗಳೂರಿನಿಂದ ಕೋಲಾರ ಜಿಲ್ಲೆಯ ಭಾಗಗಳಿಗೆ ಸಂಸ್ಕರಿಸಿದ ಒಳಚರಂಡಿ ನೀರನ್ನು ಪೂರೈಸುವ ಕೆಸಿ ವ್ಯಾಲಿ ಯೋಜನೆಯ ನೀರನ್ನು ಬಳಸಿಕೊಂಡು ನಾನು ಟೊಮ್ಯಾಟೊ ಕೃಷಿ ಮಾಡಿದ್ದೇನೆ. ಇದೇ ಈ ವರ್ಷ ಇಳುವರಿ ಕಡಿಮೆಯಾಗಲು ಮೂಲ ಕಾರಣ" ಎಂದು ದೂರಿದ್ದಾರೆ.
ಕೋಲಾರ ಜಿಲ್ಲೆಯ ಸಂಪತ್ ಕುಮಾರ್ ಅವರು ತಮ್ಮ 20 ಎಕರೆ ಜಮೀನಿನಲ್ಲಿ ನಾಲ್ಕು ಎಕರೆಯಲ್ಲಿ ಮಾತ್ರ ಟೊಮ್ಯಾಟೊ ಬೆಳೆದು ಎಕರೆಗೆ 8 ಲಕ್ಷ ರೂಪಾಯಿ ಗಳಿಸಿದ್ದಾರೆ. ಕಳೆದ ವರ್ಷ ಆಗಿದ್ದ ನಷ್ಟ ಸರಿದೂಗಿಸಿದೆ ಎಂದು ಹೇಳಿದರು.












Click it and Unblock the Notifications