ಲೋಕಸಭೆ ಚುನಾವಣೆಗೆ ಎಸ್.ಎಂ.ಕೃಷ್ಣ ಸ್ಪರ್ಧೆ?

ಗುರುವಾರ ನಡೆದ ಬೆಂಗಳೂರು ಲೋಕಸಭಾ ಕ್ಷೇತ್ರಗಳ ವೀಕ್ಷಕರ ಮತ್ತು ಮುಖಂಡರ ಸಭೆಯಲ್ಲಿ, ಎಸ್.ಎಂ.ಕೃಷ್ಣ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಒಗ್ಗಟ್ಟಾಗಿ ಕೃಷ್ಣ ಅವರ ಹೆಸರಿಗೆ ಬೆಂಬಲ ಸೂಚಿಸಿದ್ದು, ಕೃಷ್ಣ ಅವರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅಕ್ಕಪಕ್ಕದ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಎರಡು ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ವೀಕ್ಷಕರು ನಾಯಕರ ಒತ್ತಡಕ್ಕೆ ಮಣಿದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯರ ಪಟ್ಟಿಯಲ್ಲಿ ಎಸ್.ಎಂ. ಕೃಷ್ಣ ಅವರ ಹೆಸರು ಸೇರಿಸಿದ್ದಾರೆ. ಉಳಿದಂತೆ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ, ಡಾ. ಅಪ್ಪಾಜಿಗೌಡ ಹಾಗೂ ಯು.ಬಿ. ವೆಂಕಟೇಶ್ ಅವರ ಹೆಸರುಗಳಿವೆ.
ಪ್ರತಿ ಲೋಕಸಭಾ ಕ್ಷೇತ್ರಕ್ಕೂ ನಾಲ್ವರು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ವೀಕ್ಷಕರು ಅಂತಿಮಗೊಳಿಸಿ. ಕೆಪಿಸಿಸಿಗೆ ನೀಡಲಿದೆ, ಹಿರಿಯ ಮುಖಂಡರ ಸಭೆ ಬಳಿಕ ಕೆಪಿಸಿಸಿ ಅಂತಿಮ ಪಟ್ಟಿ ತಯಾರಿಸಿ, ಹೈ ಕಮಾಂಡ್ ನಾಯಕರಿಗೆ ನೀಡಲಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿ.ಎಲ್. ಶಂಕರ್, ಕೆ.ಪಿ. ನಂಜುಂಡಿ, ಜಾಫರ್ ಷರೀಫ್, ಅನಿವಾಸಿ ಭಾರತೀಯರಾದ ರಮೇಶ್ ಬಿ. ಗೌಡ ಹೆಸರನ್ನು ವೀಕ್ಷಕರು ಪಟ್ಟಿಮಾಡಿಕೊಂಡಿದ್ದಾರೆ. ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಜಾಫರ್ ಷರೀಫ್, ಎಚ್.ಟಿ. ಸಾಂಗ್ಲಿಯಾನ ಮತ್ತು ಹರಿಪ್ರಸಾದ್ ಅವರ ಹೆಸರು ಪರಿಗಣಿಸಲಾಗಿದೆ.
ಹೊಸಬರಿಗೆ ಟಿಕೆಟ್ ಬೇಡ : ಲೋಕಸಭಾ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡುವುದು ಬೇಡ. ಕನಿಷ್ಠ ಪಕ್ಷದಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತು.
ಒಟ್ಟಾರೆ, ಎಸ್.ಎಂ.ಕೃಷ್ಣ ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ತರಲು ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ. ಸದ್ಯ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಕೃಷ್ಣ, ಲೋಕಸಭೆ ಚುನಾವಣೆ ವೇಳೆ ಮತ್ತೆ ರಾಜಕಾರಣಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಾರೋ? ಕಾದು ನೋಡಬೇಕು.












Click it and Unblock the Notifications