SM Krishna: ಚಾಮರಾಜಪೇಟೆಯಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದ ಎಸ್. ಎಂ. ಕೃಷ್ಣ
ಬೆಂಗಳೂರು, ಡಿಸೆಂಬರ್ 10: ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕಷ್ಣ (92) ಹೃದಯಾಘಾತದಿಂದ ನಿಧನ ಹೊಂದಿದರು. ಎಸ್. ಎಂ. ಕೃಷ್ಣ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಂಡ್ಯದಿಂದ ದೆಹಲಿ ತನಕ ರಾಜಕೀಯ ಮಾಡಿದ ಎಸ್. ಎಂ. ಕೃಷ್ಣ ಅವರು ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಈ ತೀರ್ಮಾನ ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು.
ಸದಾಶಿವ ನಗರದ ನಿವಾಸದಲ್ಲಿ ಮಂಗಳವಾರ ಮುಂಜಾನೆ ಎಸ್. ಎಂ. ಕೃಷ್ಣ ವಿಧಿವಶರಾದರು. ಸದ್ಯ ನಿವಾಸದಲ್ಲಿಯೇ ಪಾರ್ಥೀವ ಶರೀರವಿದೆ. ಅಂತ್ಯಕ್ರಿಯೆ ಯಾವಾಗ, ಎಲ್ಲಿ? ಎಂಬ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿದ ಬಳಿಕ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

ಎಸ್. ಎಂ. ಕೃಷ್ಣ ಮೂಲತಃ ಮಂಡ್ಯದವರು. ಮಂಡ್ಯದ ಮದ್ದೂರಿನಿಂದ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದರು. 1999ರ ವಿಧಾನಸಭೆ ಚುನಾವಣೆಯಲ್ಲಿ ಅವ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆ ಎದುರಿಸಿತು. ಪಕ್ಷ 132 ಸೀಟುಗಳಲ್ಲಿ ಜಯಗಳಿಸಿತ್ತು. ಎಸ್. ಎಂ. ಕೃಷ್ಣ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
ಎಸ್. ಎಂ. ಕೃಷ್ಣ ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಕಂಡವರು. 2004ರಲ್ಲಿ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯುವ ತೀರ್ಮಾನ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಹ ಇದಕ್ಕೆ ಸಹಮತ ಸೂಚಿಸಿದ್ದು, ಇಂದಿಗೂ ಸಹ ಅಚ್ಚರಿಗೆ ಕಾರಣವಾಗಿದೆ.
1999ರ ಚುನಾವಣೆಯಲ್ಲಿ ಎಸ್. ಎಂ. ಕೃಷ್ಣ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು 56,907 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಜೆಡಿಎಸ್ನ ಎಂ. ಮಹೇಶ್ ಚಂದ್ 27,448, ಕರ್ನಾಟಕ ರಾಜ್ಯ ರೈತ ಸಂಘದ ವಿ. ಅಶೋಕ 11,775 ಮತಗಳನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆದ್ದ ಎಸ್. ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಚಾಮರಾಜಪೇಟೆಯಲ್ಲಿ ಕಣಕ್ಕೆ: 2004ರಲ್ಲಿ ಎಸ್. ಎಂ. ಕೃಷ್ಣ ಚಾಮರಾಜಪೇಟೆ ಕ್ಷೇತ್ರದಿಂದ ವಿಧಾನಸಭೆ ಚುನಾವಣಾ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಇದು ರಾಜ್ಯದಲ್ಲಿ ಅವರು ಎದುರಿಸಿದ ಕೊನೆಯ ಚುನಾವಣೆಯಾಗಿದೆ.
2004ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ಸಮೀಪಿಸುತ್ತಿತ್ತು. ಆದರೆ ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಎಸ್. ಎಂ. ಕೃಷ್ಣ ಸಾತನೂರು ಅಥವ ಶ್ರೀನಿವಾಸಪುರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಅವರು ಚಾಮರಾಜಪೇಟೆಯನ್ನು ಆಯ್ಕೆ ಮಾಡಿಕೊಂಡರು.
ಈ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರು ಬಿಡಿ, ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜನಾರ್ದನ ಪೂಜಾರಿ ಅವರಿಗೆ ಸಹ ಸುಳಿವು ಇರಲಿಲ್ಲ. ಎಸ್. ಎಂ. ಕೃಷ್ಣ ತೀರ್ಮಾನಕ್ಕೆ ಹೈಕಮಾಂಡ್ ನಾಯಕರು ಹಸಿರು ನಿಶಾನೆ ತೋರಿಸಿದರು.
ಬುಧವಾರ 12.30 ರಿಂದ 1.30ರ ನಡುವಿನ ರಾಹುಕಾಲದಲ್ಲಿ ಚಾಮರಾಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್. ಎಂ. ಕೃಷ್ಣ ನಾಮಪತ್ರ ಸಲ್ಲಿಕೆ ಮಾಡಿದರು. ಅಲ್ಲಿಯ ತನಕ ಕ್ಷೇತ್ರಕ್ಕೆ ಆರ್. ವಿ. ದೇವರಾಜ್ ಕಾಂಗ್ರೆಸ್ ಅಭ್ಯರ್ಥಿ ಎಂದು ಅಂದಾಜಿಸಲಾಗಿತ್ತು.
ಎಸ್. ಎಂ. ಕೃಷ್ಣ ವಿರುದ್ಧ ಜೆಡಿಎಸ್ನಿಂದ ನಟ ಅನಂತ್ ನಾಗ್ ಕಣಕ್ಕಿಳಿದರು. ಬಿಜೆಪಿ ಪ್ರಮೀಳಾ ನೇಸರ್ಗಿ ಬದಲು ಎಂಎಲ್ಸಿಯಾಗಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನು ಅಭ್ಯರ್ಥಿಯಾಗಿ ಮಾಡಿತು. ಚುನಾವಣೆ ರಾಜ್ಯದ ಗಮನ ಸೆಳೆದಿತ್ತು.
ಚುನಾವಣೆಯಲ್ಲಿ ಎಸ್. ಎಂ. ಕೃಷ್ಣ 27,695 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಮುಖ್ಯಮಂತ್ರಿ ಚಂದ್ರು 14,010 ಮತಗ, ಜೆಡಿಎಸ್ನ ಅನಂತ್ ನಾಗ್ 5,052 ಮತಗಳನ್ನು ಪಡೆದು ಸೋಲು ಕಂಡರು. ಆದರೆ ಶಾಸಕ ಸ್ಥಾನದ ಅವಧಿಯನ್ನು ಎಸ್. ಎಂ. ಕೃಷ್ಣ ಪೂರ್ಣಗೊಳಿಸಲಿಲ್ಲ.
ಚಾಮರಾಜಪೇಟೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್. ಎಂ. ಕೃಷ್ಣ ರಾಷ್ಟ್ರ ರಾಜಕೀಯಕ್ಕೆ ಹೋದರು. ಅವರನ್ನು ಕೇಂದ್ರ ಸರ್ಕಾರ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕ ಮಾಡಿತ್ತು. 2004 ರಿಂದ 2008ರ ತನಕ ಎಸ್. ಎಂ. ಕೃಷ್ಣ ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.












Click it and Unblock the Notifications