ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್ಐಟಿ ವಶಕ್ಕೆ
ಬೆಂಗಳೂರು, ಸೆಪ್ಟೆಂಬರ್ 09: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿಯು 12 ಜನರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದೆ.
ಇತ್ತೀಚೆಗಷ್ಟೆ ಮಹರಾಷ್ಟ್ರಾ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಸೇರಿದಂತೆ ಇನ್ನೂ ಹಲವು ಪ್ರಕರಣಗಳಿಗೆ ಸಂಬಂಧ ಬಂಧಿಸಿರುವ ಸುಧನ್ವ ಗೊಂದೇಲಕರ್ ಎಂಬುವನನ್ನು ಎಸ್ಐಟಿ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಗೌರಿ ಲಂಕೇಶ್ ಹತ್ಯೆಯಾದ ದಿನ ಸುಧನ್ವ ಗೊಂದೇಲ್ಕರ್ ತನ್ನ ಸಹಚರ ಶರದ್ ಜೊತೆ ಗೌರಿ ಲಂಕೇಶ್ ಮನೆಯ ಆಸುಪಾಸು ಓಡಾಡಿದ್ದನೆಂಬುದು ಸಿಸಿಟಿವಿ ಯಿಂದ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೆ ಗೌರಿ ಹತ್ಯೆ ಸಂದರ್ಭದಲ್ಲಿ ಸುಧನ್ವ ಗೊಂದೇಲ್ಕರ್ ನಗರದಲ್ಲಿಯೇ ಇದ್ದ ಎಂಬುದನ್ನೂ ಎಸ್ಐಟಿ ಪತ್ತೆ ಮಾಡಿದೆ.

ಸುಧನ್ವನೇ ಬಂದೂಕು ನೀಡಿರುವ ಅನುಮಾನ
ಇದೇ ವ್ಯಕ್ತಿಯೇ ಗೌರಿ ಹತ್ಯೆಗೆ ಬಂದೂಕು ಪೂರೈಸಿದ್ದು ಎಂಬ ದಟ್ಟ ಅನುಮಾನವನ್ನು ಎಸ್ಐಟಿ ವಶಪಡಿಸಿದ್ದು, ಈ ವ್ಯಕ್ತಿ ಇನ್ನೂ ಹಲವು ಇಂತಹುದೇ ವಿಚಾರವಾದಿಗಳ ಕೊಲ್ಲುವ ಪ್ರಕರಣಗಳಿಗೆ ಶಸ್ತ್ರಾಸ್ತ್ರ ಒದಗಿಸಿದ್ದಾನೆ ಎನ್ನಲಾಗಿದೆ. ಕೊಲೆ ಆದ ನಂತರ ಈತನೇ ಕೊಲೆಗೆ ಬಳಸಿದ್ದ ಬಂದೂಕನ್ನು ವಾಪಸ್ ತೆಗೆದುಕೊಂಡು ಹೋಗಿದ್ದ ಎಂಬ ಅನುಮಾನವಿದೆ.

ಸುಧನ್ವ ಬಳಿ ಇತ್ತು 20 ಬಂದೂಕುಗಳು
ಕರ್ನಾಟಕ ಎಸ್ಐಟಿಯು ವಿಚಾರಣೆ ನಡೆಸುತ್ತಿರುವ ಸುಧನ್ವ ಗೊಂದೇಲಕರ್ ಅವರ ಮನೆಯ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿದಾಗ ಅಲ್ಲಿ 20 ಕಂಟ್ರಿ ಪಿಸ್ತೂಲುಗಳು ಜೊತೆಗೆ ಹಲವು ನಾಡಬಾಂಬ್ಗಳು ಪತ್ತೆ ಆಗಿದ್ದವು.

ಅಮೋಲ್ ಕಾಳೆ ಡೈರಿಯಲ್ಲಿ ಸುಧನ್ವ ಹೆಸರು
ಸುಧನ್ವ ಗೊಂದೇಲಕರ್ಗೂ ಗೌರಿ ಹತ್ಯೆ ಆರೋಪಿಗಳಲ್ಲಿ ಪ್ರಮುಖನಾದ ಅಮೋಲ್ ಪಾಲೇಕರ್ಗೂ ನಿಕಟ ಸಂಪರ್ಕ ಇದೆ ಎನ್ನುವುದು ಎಸ್ಐಟಿ ಅನುಮಾನವಾಗಿದೆ. ಅಮೋಲ್ ಕಾಳೆ ಡೈರಿಯಲ್ಲಿ ಸುಧನ್ವ ಗೊಂದೇಲ್ಕರ್ ಹೆಸರು ಇದೆ, ಮತ್ತೊಬ್ಬ ಆರೋಪಿ ಶ್ರೀಕಾಂತ್ ಎಂಬುವನ ಹೆಸರೂ ಇದೆ. ಈತನಿಗಾಗಿಯೂ ಎಸ್ಐಟಿ ಪೊಲೀಸರು ಹುಡುಕುತ್ತಿದ್ದಾರೆ.

ಸುಧನ್ವನ ಮೇಲೂ ಎಫ್ಐಆರ್ ಸಾಧ್ಯತೆ
ಸುಧನ್ವ ಗೊಂದೇಲ್ಕರ್ ಅನ್ನು ವಶಕ್ಕೆ ಪಡೆದಿರುವ ಎಸ್ಐಟಿಯು ವಿಚಾರಣೆ ನಂತರ ಆತನ ಮೇಲೂ ಎಫ್ಐಆರ್ ದಾಖಲಿಸಿ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರ ಅನುಮತಿ ಕೇಳಲಿದೆ.












Click it and Unblock the Notifications