ಎಸ್ಐಟಿ ಬಂಧಿಸಿರುವ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಏನು?
ಬೆಂಗಳೂರು, ಜೂನ್ 12: ಗೌರಿ ಲಂಕೇಶ್ ಹತ್ಯೆ ಆದ ಒಂಬತ್ತು ತಿಂಗಳ ನಂತರ ಪ್ರಕರಣದ ಪ್ರಮುಖ ಆರೋಪಿಯನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿರುವ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಆದರೆ ಈ ಬಂಧನ ಕೆಲವು ಅನುಮಾನಗಳನ್ನೂ ಮೂಡಿಸಿದೆ.
ಪರಶುರಾಮ್ ವಾಗ್ಮೋರೆ ಎಂಬಾತನನ್ನು ಭಾನುವಾರವೇ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಆತನ ಜೊತೆಗೆ ಸುನಿಲ್ ಅಗಸರ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಪರಶುರಾಮನೇ ಗೌರಿ ಮೇಲೆ ಗುಂಡು ಹಾರಿಸಿದವ ಎಂದು ಎಸ್ಐಟಿ ಹೇಳುತ್ತಿದೆ.
ಆದರೆ ಎಸ್ಐಟಿ ಪೊಲೀಸರು ತಪ್ಪು ಮಾಹಿತಿ ಅಥವಾ ಬೇಕೆಂದೇ ಅಮಾಯಕರನ್ನು ಬಂಧಿಸಿದ್ದಾರೆ ಎನ್ನುತ್ತಿದ್ದಾರೆ ಬಂಧಿತರ ಹತ್ತಿರದವರು. ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ ಬಹಳ ವರ್ಷದಿಂದ ಸಿಂಧಗಿಯಲ್ಲೇ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದರೆ, ಸುನಿಲ್ ಅಗಸರ ಅವರು ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದಾರಂತೆ.

ಇಬ್ಬರೂ ಬಡ ಕುಟುಂಬದವರಾಗಿದ್ದು, ಧರ್ಮದ ಬಗ್ಗೆ ಪ್ರೇಮ ಇತ್ತು ಆದರೆ ಕೊಲೆಯ ಮಟ್ಟಕ್ಕೆ ಹೋಗುವವರಲ್ಲ ಎಂದಿದ್ದಾರೆ ಅವರ ಗೆಳೆಯ ರಾಕೇಶ್. ಪರಶುರಾಮ್ ಅವರು 2012ರಲ್ಲಿ ತಹಶೀಲ್ದಾರ್ ಕಚೇರಿ ಎದುರು ಪಾಕಿಸ್ತಾನ ಧ್ವಜಾರೋಹಣ ಮಾಡಿದ ಪ್ರಕರಣವೊಂದರಲ್ಲಿ ಆರನೇ ಆರೋಪಿ ಆಗಿದ್ದರು ಆದರೆ ಆ ನಂತರ ಅವರು ಬಹಿರಂಗವಾಗಿ ಕಾಣಿಸಿಕೊಂಡಿದ್ದೇ ಕಡಿಮೆಯಂತೆ.
ಇನ್ನು ಸುನಿಲ್ ಅಗಸರ ಅವರದ್ದು ಬಡ ಕುಟುಂಬವಾಗಿದ್ದು ಅವರು ಸಾಮಾಜಿಕ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಯಾವುದೇ ಪ್ರತಿಭಟನೆ ಮತ್ತಿತರೆ ಚಟುವಟಿಕೆಗಳಲ್ಲಿ ಭಾಗಿ ಸಹ ಆಗುತ್ತಿರಲಿಲ್ಲ, ಆತ ಬೆಂಗಳೂರು ನೋಡಿರುವುದೇ ಈಗ ಎನ್ನುತ್ತಾರೆ ಸ್ನೇಹಿತ ರಾಕೇಶ್.
ಪರಶುರಾಮ್, ಸುನಿಲ್, ರಾಕೇಶ್ ಸೇರಿದಂತೆ ಕೆಲವು ಜನ ಗೆಳೆಯರು ಶ್ರೀರಾಮಸೇನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರಾದರೂ ಅದನ್ನು ಭಾವನಾತ್ಮಕವಾಗಿ ಪರಿಗಣಿಸಿರಲಿಲ್ಲ ಎಂಬುದು ರಾಕೇಶ್ ಅಭಿಪ್ರಾಯ.
ಪರಶುರಾಮ್ ಅವರ ಬಂಧನದ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಿಂಧಗಿಯ ಶಾಂತಿನಗರದಲ್ಲಿನ ಪರುಶಾರಮ್ ಅವರ ಮನೆಗೆ ಬೀಗ ಜಡಿದುಕೊಂಡು ಅವರ ಕುಟುಂಬಸ್ಥರು ಅಜ್ಞಾತ ಸ್ಥಳಕ್ಕೆ ಹೋಗಿಬಿಟ್ಟಿದ್ದಾರೆ. ಅವರ ತಾಯಿ ಜಾನಕಿ ಭಾಯಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಆದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 9 ತಿಂಗಳೂ ತನಿಖೆ ನಡೆಸಿರುವ ಎಸ್ಐಟಿಯು ಹಾಗೆ ಯಾವುದೇ ಸಾಕ್ಷಿಗಳಿಲ್ಲದೆ ಅಥವಾ ಗಟ್ಟಿ ಅನುಮಾನಗಳಿಲ್ಲದೆ ಬಂಧಿಸುವುದಿಲ್ಲ ಎಂಬ ನಂಬಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 5 ಗೌರಿ ಹತ್ಯೆ ಆಗಿ ಒಂದು ವರ್ಷವಾಗುತ್ತದೆ ಆ ವೇಳೆಗೆ ಹತ್ಯೆಯ ನಿಜ ಆರೋಪಿಗಳನ್ನು ಕಟಕಟೆಯ ಮುಂದೆ ನಿಲ್ಲಿಸಲು ಎಸ್ಐಟಿ ಯಶಸ್ವಿಯಾಗುತ್ತದೆಯಾ ಕಾದು ನೋಡಬೇಕು.












Click it and Unblock the Notifications