'ಗುಜರಾತ್ಗೆ ನಾನ್ಯಾಕೆ ಹೋಗಲಿ? ಸ್ವೀಟ್ ತಿನ್ನೋಕೆ ಹೋಗ್ಲಾ?'
ಬೆಂಗಳೂರು, ನವೆಂಬರ್ 28 : 'ಕರ್ನಾಟಕ ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. ಗುಜರಾತ್ ಪ್ರಚಾರಕ್ಕೆ ನಾನ್ಯಾಕೆ ಹೋಗಲಿ?, ಸ್ವೀಟ್ ತಿನ್ನೋಕೆ ಹೋಗ್ಲಾ ಎಂದು?' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
Recommended Video

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ನಮ್ಮಲ್ಲಿ ಬೇಕಾದಷ್ಟು ರಾಷ್ಟ್ರೀಯ ನಾಯಕರಿದ್ದಾರೆ. ಅವರು ಗುಜರಾತ್ನಲ್ಲಿ ಪ್ರಚಾರ ನಡೆಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಬೇಕಾದರೆ ಗುಜರಾತ್ಗೆ ಹೋಗಬಹುದು' ಎಂದು ಸಿದ್ದರಾಮಯ್ಯ ಹೇಳಿದರು.
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, 'ನಿಮ್ಮ ಪಕ್ಷದಲ್ಲಿಯೇ ಇರುತ್ತೇನೆ ಎಂದು ಯೋಗೇಶ್ವರ ಹೇಳಿದ್ದರು. ಅವರು ವಿಧಾನಸಭೆಗೂ ಬರಲ್ಲ. ಕಲಾಪದಲ್ಲಿ ಚನ್ನಪಟ್ಟಣದ ಬಗ್ಗೆ ಏನಾದ್ರು ಮಾತಾಡಿದ್ದಾರಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
'ಡಿಸೆಂಬರ್ 13ರಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷ ಮತ್ತು ಸರ್ಕಾರದ ವತಿಯಿಂದ ಪ್ರತ್ಯೇಕವಾಗಿ ಪ್ರಚಾರ ನಡೆಯಲಿದೆ. ಸರ್ಕಾರದ ಕಾರ್ಯಕ್ರಮಕ್ಕೆ ಪಕ್ಷದ ಅಧ್ಯಕ್ಷರು ಬರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಗುಜರಾತ್ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆಯಲ್ಲಿ ಶಾಸಕರು ಕರ್ನಾಟಕಕ್ಕೆ ಬಂದಿದ್ದರು. ಆಗ ಅವರು ತಂಗಿದ್ದ ರೆಸಾರ್ಟ್, ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

ಪಕ್ಷದ ಕಾರ್ಯಕ್ರಮಕ್ಕೆ ಹೋಗುವೆ
'ಡಿ.13ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಮತ್ತು ಸರ್ಕಾರದ ವತಿಯಿಂದ ಪ್ರಚಾರ ನಡೆಯಲಿದೆ. ಸರ್ಕಾರದ ಪ್ರಚಾರ ನಡೆಯುವಾಗ ಪಕ್ಷದ ಅಧ್ಯಕ್ಷರು ಬರಲ್ಲ. ಪಕ್ಷದ ಕಾರ್ಯಕ್ರಮಕ್ಕೆ ಅವರು ಕರೆದಾಗ ನಾನು ಹೋಗುವೆ' ಎಂದು ಸಿದ್ದರಾಮಯ್ಯ ಹೇಳಿದರು.

ತಮಟೆ ಹೊಡೆದುಕೊಂಡು ಪ್ರಚಾರ ಮಾಡಲ್ಲ
'ಪಕ್ಷದ ಅಧ್ಯಕ್ಷರು ಮತ್ತು ನಾನು ಮಾರ್ಚ್ನಲ್ಲಿ ಒಟ್ಟಾಗಿ ಪ್ರಚಾರ ನಡೆಸುತ್ತೇವೆ. ಬಿಜೆಪಿಯವರಂತೆ ನಾನು ತಮಟೆ ಹೊಡೆದುಕೊಂಡು ಪ್ರಚಾರ ಮಾಡುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

ಮಸಿ ಬಳಿಯುವ ಪ್ರಯತ್ನ
'ಬಿಜೆಪಿಯವರು ಸಾಂಕೇತಿಕವಾಗಿ ಅಥವ ಸಾಂಕ್ರಾಮಿಕವಾಗಿ ಬೇಕಾದರೂ ಪ್ರತಿಭಟನೆ ಮಾಡಲಿ. ವಿನಯ ಕುಲರ್ಣಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯೋಗೇಶ್ ಗೌಡ ಹತ್ಯೆ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ' ಎಂದರು.

ಯಡಿಯೂರಪ್ಪ ಮೇಲೆ 20 ಕೇಸುಗಳಿವೆ
'ಯಡಿಯೂರಪ್ಪ ಮೇಲೆ 20 ಕೇಸುಗಳಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅನಂತ ಕುಮಾರ್ ಹೆಗಡೆ ಮೇಲೆ ಎಫ್ಐಆರ್ ಆಗಿದೆ ಅವರು ಮೊದಲು ರಾಜೀನಾಮೆ ನೀಡಲಿ' ಎಂದು ಹೇಳಿದರು.

'ಕ್ಷೇತ್ರಕ್ಕೆ ಅನುದಾನ ನೀಡಿದ್ದೆ'
'ಚನ್ನಪಟ್ಟಣ ಕ್ಷೇತ್ರದ ಕೆಲಸಗಳಿಗೆ ನಾನು ಅನುದಾನ ನೀಡಿದ್ದೆ. ಯೋಗೇಶ್ವರ ಅವರ ತಮ್ಮನನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿಯೂ ಮಾಡಿದ್ದೆವು. ಈಗ ಆಸಾಮಿ ಬಿಜೆಪಿಗೆ ಹೋಗಿದ್ದಾನೆ. ಅವರಿಗೆ ನೆಲೆ ಇಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications