ಸಿದ್ದರಾಮಯ್ಯ ಹೈಕಮಾಂಡ್ ಬಳಿ ಏಕಾಂಗಿಯಾಗಿ ಹೋಗಿರೋದೇಕೆ?
ಬೆಂಗಳೂರು/ನವದೆಹಲಿ, ಸೆಪ್ಟೆಂಬರ್ 16: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ತಯಾರಿ ಜೋರಾಗಿಯೇ ನಡೆಯುತ್ತಿದೆ. ಆದರೆ, ಸೆ. 16ರಂದು ಸಿಎಂ ಸಿದ್ದರಾಮಯ್ಯ ಅವರು ದಿಢೀರ್ ಎಂದು ದೆಹಲಿಗೆ ಹೊರಟಿದ್ದರ ಹಿಂದೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ ರಾವ್ ಅವರು ಶನಿವಾರ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಹಲವಾರು ನಾಯಕರ ಜತೆಗೆ ಮಾತುಕತೆಯಲ್ಲಿ ನಿರತರಾಗಿದ್ದರು. ಈ ಸಭೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಲೇಬೇಕಿದ್ದ ಸಿಎಂ ಸಿದ್ದರಾಮಯ್ಯ ಮಾತ್ರ ದೆಹಲಿ ಕಡೆಗೆ ಮುಖ ಮಾಡಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 4:30ರ ಸುಮಾರಿಗೆ ಇಳಿದ ಸಿದ್ದರಾಮಯ್ಯ, ರಾಜ್ಯದ ಹಲವಾರು ಯೋಜನೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವು ಕೋರಲು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ, ಇದನ್ನೂ ಮೀರಿದ ಮತ್ತೊಂದು ವಿಚಾರಕ್ಕಾಗಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ.
ದೆಹಲಿಗೆ ಹೀಗೆ ದಿಢೀರೆಂದು ಹೋಗಿರುವ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಹೈಕಮಾಂಡ್ ನನ್ನು ಭೇಟಿಯಾಗದೇ ಬರುವುದಿಲ್ಲ ಎಂಬುದಂತೂ ನಿಶ್ಚಿತ. ಆದರೆ, ಹೀಗೆ, ಏಕಾಏಕಿಯಾಗಿ ದೆಹಲಿಗ ಹೋಗಿ ಹೈಕಮಾಂಡ್ ಬಳಿ ಅದೇನನ್ನು ಚರ್ಚಿಸಲಿದ್ದಾರೆ ಸಿಎಂ? ಇದೇ ಈಗ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕೆಲವಾರು ರಾಜಕೀಯ ವಿಶ್ಲೇಷಕರ ಪ್ರಕಾರ, ಸಿದ್ದರಾಮಯ್ಯ ಅವರ ಈ ಬಾರಿಯ ದಿಢೀರ್ ದೆಹಲಿ ಭೇಟಿ ಹಿಂದೆ ಪ್ರಮುಖವಾಗಿ ಮೂರು ಕಾರಣಗಳಿವೆ. ಆ ಮೂರು ಕಾರಣಗಳು ಹೀಗಿವೆ.
ಸಂಪುಟ-ಸಂಕಟ ನಡೆಗಳು
ಸಂಪುಟ ಪುನಾರಚನೆಯ ನಂತರ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಇದನ್ನು, ಈ ಇಬ್ಬರೂ ನಾಯಕರು ನಯವಾಗಿ ತಿರಸ್ಕರಿಸಿದರೂ, ಇಬ್ಬರ ನಡುವೆ ಸಂಪುಟ ಸಂಕಟ ಇರುವುದನ್ನು ಅವರ ನಡೆಗಳೇ ಸೂಚಿಸುತ್ತಿವೆ.
ಪರಂ ಮನವೊಲಿಸಲು ಹೈಕಮಾಂಡ್ ಮೊರೆ
ಸಂಪುಟ ವಿಸ್ತರಣೆ ನಂತರ, ಪರಮೇಶ್ವರ್ ಅವರು ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದೇ ಗೈರಾಗುತ್ತಿರುವುದು ಇವರ ನಡುವಿನ ಮುನಿಸಿಗೆ ಕಾರಣ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಇದು ಚುನಾವಣಾ ಸಮಯವಾಗಿರುವುದರಿಂದ ಪರಮೇಶ್ವರ್ ಅವರ ಮನವೊಲಿಸಲು ಸಿದ್ದರಾಮಯ್ಯ ಅವರು, ಹೈಕಮಾಂಡ್ ನೆರವು ಪಡೆಯಲು ದೆಹಲಿಗೆ ತೆರಳಿದ್ದಾರೆಂದು ಹೇಳಲಾಗಿದೆ.
ದೂರುವವರ ವಿರುದ್ಧ ದೂರು ಸಂಭವ
ರಾಜ್ಯದಲ್ಲಿ ಕಾಂಗ್ರೆಸ್ ನ ಕೆಲವಾರು ಹಿರಿಯ ನಾಯಕರೇ ಸರ್ಕಾರದ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡುತ್ತಿರುವುದನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದು, ಇದನ್ನು ಈ ಬಾರಿಯ ತಮ್ಮ ದಿಲ್ಲಿ ಭೇಟಿಯಲ್ಲಿ ಅವರು ಹೈಕಮಾಂಡ್ ಗಮನಕ್ಕೆ ತರಲಿದ್ದಾರೆಂದು ಹೇಳಲಾಗಿದೆ. ಅದರಲ್ಲೂ ಬಹು ಮುಖ್ಯವಾಗಿ, ದಕ್ಷಿಣ ಕನ್ನಡದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದರ ಪೂಜಾರಿ ಅವರು ತಮ್ಮ ಆಡಳಿತವನ್ನು ಪದೇ ಪದೇ ಟೀಕಿಸುತ್ತಿರುವುದನ್ನು ಸಿದ್ದರಾಮಯ್ಯ ಅವರು ಸೋನಿಯಾ ಜೀ ಗಮನಕ್ಕೆ ತರಲಿದ್ದಾರೆಂದು ಹೇಳಲಾಗಿದೆ.
ಬೆಂಬಲಿಗರನ್ನು ಕೈಬಿಟ್ಟಿದ್ದಕ್ಕೆ ಬೇಸರ?
ಇನ್ನು, ಸಿದ್ದು ಜೀ ಅವರ ದೆಹಲಿ ಭೇಟಿಯ ಹಿಂದಿನ ಮತ್ತೊಂದು ಮಹತ್ವದ ಕಾರಣವೆಂದರೆ, ಕೆಪಿಸಿಸಿ ಪದಾಧಿಕಾರಿಗಳ ವಿಚಾರದಲ್ಲಿ ತಮ್ಮ ಬೆಂಬಲಿಗರಿಗೆ ಆಗಿರುವ ಅನ್ಯಾಯ. ಪಕ್ಷದ ಹಿತಕ್ಕಾಗಿ ದುಡಿದ ಅನೇಕ ಕಿರಿಯ ನಾಯಕರು, ಕಾರ್ಯಕರ್ತರನ್ನು ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಹೈಕಮಾಂಡ್ ಗಮನಕ್ಕೆ ತರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆಂದು ಹೇಳಲಾಗಿದೆ.
ಹೈಕಮಾಂಡ್ ಗೆ ಹೊಸ ಬೇಡಿಕೆ ಸಲ್ಲಿಕೆ
ಹಾಗಾಗಿಯೇ, ಕೆಪಿಸಿಸಿಗೆ ಹೆಚ್ಚುವರಿಯಾಗಿ ಮತ್ತಷ್ಟು ಪದಾಧಿಕಾರಿಗಳ ಪಟ್ಟಿಯನ್ನು ತಯಾರಿಸಲು ಅನುಮತಿ ಕೋರಿ, ಆ ಪಟ್ಟಿಯಲ್ಲಿ ತಮ್ಮ ಬೆಂಬಲಿಗರ ಸೇರ್ಪಡೆಗೆ ಸಿದ್ದರಾಮಯ್ಯ ಪ್ರಯತ್ನಿಸಬಹುದು ಎಂದು ಅಂದಾಜಿಸಲಾಗಿದೆ.