ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!
Recommended Video

ಬೆಂಗಳೂರು, ಸೆಪ್ಟೆಂಬರ್ 24 : ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಬಗೆಹರಿದಿಲ್ಲ. ಖಾಲಿ ಇರುವ 6 ಸ್ಥಾನಗಳಿಗೆ 20ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳು. ಆದ್ದರಿಂದ, ಪಕ್ಷ ಸಂಪುಟ ವಿಸ್ತರಣೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಂಪುಟ ವಿಸ್ತರಣೆ ಕಗ್ಗಂಟು ಬಿಡಿಸುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.
ಭಾನುವಾರ ಕೆ.ಸಿ.ವೇಣುಗೋಪಾಲ್ ಜೊತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು ಸೂತ್ರವೊಂದನ್ನು ಮುಂದಿಟ್ಟಿದ್ದಾರೆ. 4 ಪ್ರಮುಖ ಅಂಶಗಳನ್ನು ಈ ಸೂತ್ರ ಒಳಗೊಂಡಿದೆ. ಸೋಮವಾರ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದು, ಹೈಕಮಾಂಡ್ ನಾಯಕರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಕ್ಟೋಬರ್ 3ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಅದು ಪೂರ್ಣಗೊಂಡ ಬಳಿಕ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಕಾಂಗ್ರೆಸ್, 1 ಜೆಡಿಎಸ್ ಪಕ್ಷಕ್ಕೆ ಸಿಗಲಿದೆ......

ಸೂತ್ರ - 1
ಸಿದ್ದರಾಮಯ್ಯ ಅವರ ಮೊದಲ ಸೂತ್ರದ ಪ್ರಕಾರ ಕೆಲವು ಸಚಿವರಿಗೆ ಕೋಕ್ ನೀಡಬೇಕು. ಅಂದರೆ, 2013ರ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬಂದಾಗ 5 ವರ್ಷ ಪೂರ್ತಿ ಸಚಿವರಾಗಿ ಅಧಿಕಾರ ಅನುಭವಿಸಿದವರನ್ನು ಸಂಪುಟದಿಂದ ಕೈ ಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವುದು. ಆದರೆ, ಅಧಿಕಾರ ಅನುಭವಿಸಿದವರನ್ನು ಅಷ್ಟು ಸುಲಭವಾಗಿ ಸಂಪುಟದಿಂದ ಕೈ ಬಿಡಬಹುದೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಲೋಕಸಭೆ ಚುನಾವಣೆ
ಸಂಪುಟಕ್ಕೆ ಸೇರಿಸಿಕೊಳ್ಳುವಾಗ ಹಿರಿತನ, ಜಾತಿ, ಪ್ರಾದೇಶಿಕ ಸಮಾನತೆ ಬಗ್ಗೆ ಗಮನಹರಿಸುವುದು. 2019ರ ಲೋಕಸಭೆ ಚುನಾವಣೆಯಲ್ಲಿ ಸಹಾಯಕವಾಗುವ ನಾಯಕರಿಗೆ ಸಚಿವ ಸ್ಥಾನ ನೀಡಿ, ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ತಂತ್ರ ರೂಪಿಸಲಾಗಿದೆ.

ಸೂತ್ರ - 3
ಸಿದ್ದರಾಮಯ್ಯ ಅವರು ಸದ್ಯ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿರುವ ನಾಲ್ವರನ್ನು ಕೈಬಿಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಆದರೆ, ಯಾರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ? ಎಂಬುದು ನಿಗೂಢವಾಗಿದೆ. ಸಚಿವರ ಇದುವರೆಗಿನ ರಿಪೋರ್ಟ್ ಕಾರ್ಡ್ ಅನ್ವಯ 4 ಜನರನ್ನು ಕೈ ಬಿಡುವುದು ಸಿದ್ದರಾಮಯ್ಯ ಅವರ ವಾದ. ಆದರೆ, ಇದಕ್ಕೆ ಹೈಕಮಾಂಡ್ ಒಪ್ಪಲಿದೆಯೇ? ಕಾದು ನೋಡಬೇಕು.

ಸೂತ್ರ - 4
ಸಂಪುಟದಲ್ಲಿ 6 ಸ್ಥಾನಗಳು ಖಾಲಿ ಇವೆ. ನಾಲ್ವರನ್ನು ಕೈ ಬಿಟ್ಟರೆ 10 ಸ್ಥಾನಗಳು ಖಾಲಿ ಆಗುತ್ತವೆ. ಈ ಹತ್ತು ಸ್ಥಾನಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದು. ಆದರೆ, ಈ ಸೂತ್ರಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕು.












Click it and Unblock the Notifications