ನಾನು, ಬಿಎಸ್ವೈ ಒಂದೇ ಆಸ್ಪತ್ರೆಯಲ್ಲಿ ಇದ್ದಾಗ ಏನೇನು ಮಾತಾಡಿದ್ದಾರೆ ಎಲ್ಲವೂ ಗೊತ್ತಿದೆ
ಬೆಂಗಳೂರು, ಸೆ 23: "ಕೋವಿಡ್ ಸೋಂಕಿಗೆ ಒಳಗಾಗಿ ನಾನು ಮತ್ತು ಯಡಿಯೂರಪ್ಪ ಒಂದೇ ಆಸ್ಪತ್ರೆಯಲ್ಲಿ ಇದ್ದಾಗ, ಏನೇನು ಮಾತನಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನನಗೂ ಯಡಿಯೂರಪ್ಪನವರಿಗೂ ವೈಯಕ್ತಿಕ ಸಂಬಂಧವಿದೆ. ಇಲ್ಲಾಂತ ಹೇಳಲ್ಲ. ರಾಜಕೀಯ ಬೇರೆ, ವೈಯಕ್ತಿಕ ವಿಚಾರಗಳು ಬೇರೆ ಬೇರೆ"ಎಂದು ಅಭಿಪ್ರಾಯ ಪಟ್ಟರು.
"ನಾನು ಮತ್ತು ಯಡಿಯೂರಪ್ಪ ಒಂದೇ ಆಸ್ಪತ್ರೆಯಲ್ಲಿ ಇದ್ದೆವು. ಆಗ ನಿಮ್ಮ ಪಕ್ಷದವರು ಏನೇನು ಮಾತಾನಾಡಿದರು. ನಮ್ಮವರು ಏನೇನು ಮಾತನಾಡಿದರು, ಅದಲ್ಲಾ ನನಗೆ ಗೊತ್ತಿದೆ. ಅದನ್ನು ಪ್ರಸ್ತಾವಿಸುವ ಸಮಯವಿದಲ್ಲ"ಎಂದು ಸಿದ್ದರಾಮಯ್ಯ ಹೇಳಿದರು.

ಭಾಷಣದ ಮಧ್ಯೆ ಮಾಸ್ಕ್ ಹಾಕಿಕೊಳ್ಳಿ ಸರ್ ಎಂದು ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸುತ್ತಾ, "ನೋಡಿ ಮಾಸ್ಕ್ ಹಾಕಿಕೊಂಡಿಲ್ಲ, ಬಿದ್ದೋಗಿ ಬಿಟ್ಟಿದೆ. ಈ ರೀತಿಯ ಅಚಾತುರ್ಯ ನಡೆಯುತ್ತದೆ"ಎಂದು ಹೇಳಿದರು.
"ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೋವಿಡ್ ಉಪಕರಣ ಖರೀದಿಯ ವಿಚಾರದಲ್ಲಿ ಸುದೀರ್ಘವಾಗಿ ಮಾತನಾಡಿದರು. ಭಾವನಾತ್ಮಕವಾಗಿಯೂ ಭಾಷಣ ಮಾಡಿದರು. ಎಲ್ಲರೂ ಒಟ್ಟಿಗೆ ಕೋವಿಡ್ ವಿರುದ್ದ ಹೋರಾಡುವ ಸಮಯವಿದು ಎಂದು ಹೇಳಿದ್ದಾರೆ. ಇದಕ್ಕೆ ನಮ್ಮ ತಕರಾರು ಏನೂ ಇಲ್ಲ"ಎಂದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿದರು.
"ಸರಕಾರಕ್ಕೆ ಬೆಂಬಲವನ್ನು ಫೆಬ್ರವರಿಯಿಂದ ಜುಲೈ ತಿಂಗಳವರೆಗೆ ನೀಡುತ್ತಲೇ ಬಂದೆವು, ಏನೂ ಚಕಾರವೆತ್ತಲಿಲ್ಲ. ಯಾವಾಗ ಭ್ರಷ್ಟಾಚಾರ ನಡೆದದ್ದು ಗೊತ್ತಾಯಿತೋ ಸುಮ್ಮನಿರಲು ಹೇಗೆ ಸಾಧ್ಯ"ಎಂದು ಬಿಎಸ್ವೈ ಸರಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.












Click it and Unblock the Notifications