ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರ್ಎಸ್ಎಸ್ಗೆ ಭೂಮಿ: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 22: ''ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ರಾಜ್ಯ ಸರ್ಕಾರ ಆರ್ಎಸ್ಎಸ್ಗೆ 400 ಕೋಟಿ ರೂಪಾಯಿ ಬೆಲೆಬಾಳುವ ಭೂಮಿಯನ್ನು ಬಳುವಳಿಯಾಗಿ ನೀಡುತ್ತಿದೆ,'' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
''ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದೆ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ ಅಂಗೀಕಾರ ಮಾಡಲಾಗಿದೆ. ಕೆಳಮನೆಯಲ್ಲಿ ವಿಧೇಯಕ ಇಂದು ಮಂಡನೆಯಾಗುವ ಸಾಧ್ಯತೆ ಇದ್ದು, ಇದಕ್ಕೆ ನಾವು ಅವಕಾಶ ನೀಡದೆ ಪ್ರತಿಭಟಿಸುತ್ತೇವೆ,'' ಎಂದು ಅವರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
''ಚಾಣಕ್ಯ ವಿವಿಯನ್ನು ಸೆಸ್ (ಸೆಂಟರ್ ಫಾರ್ ಎಜುಕೇಷನ್ ಸೋಶಿಯಲ್ ಸ್ಟಡೀಸ್) ಎಂಬ ಸಂಸ್ಥೆ ನಡೆಸುತ್ತದೆ. ಇದರಲ್ಲಿ ಎನ್.ಕೆ. ಶ್ರೀಧರ್, ಗುರುಮೂರ್ತಿ, ಸುಪರ್ಣಾ ಸಂತೋಷ್, ರಾಜಾರಾಂ, ಲಕ್ಷ್ಮೀನಾರಾಯಣ ಶೆಟ್ಟಿ, ಶಶಿನಾಯರ್, ಸಾಯಿನಾಥ್, ಗೌರೀಶ್ ಎಂಬುವವರು ಇದ್ದಾರೆ. ಇವರೆಲ್ಲರೂ ಆರ್ಎಸ್ಎಸ್ ಮೂಲ ಇರುವಂತಹವರು. ಆದರೆ, ಇವರಿಗೆ ಶಿಕ್ಷಣ ಸಂಸ್ಥೆ ನಡೆಸಿದ ಅನುಭವ ಇಲ್ಲ, ಇವರದ್ದು ಯಾವುದೇ ವಿದ್ಯಾಸಂಸ್ಥೆಗಳೂ ಇಲ್ಲ. ಹೀಗಾಗಿ ಇದೊಂದು ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ. ಇಂತಹ ಕೆಲಸಕ್ಕೆ ಸರ್ಕಾರ ಬಳುವಳಿಯಾಗಿ ಭೂಮಿ ಕೊಡಲು ಹೊರಟಿದೆ. ಇದೊಂದು ದೊಡ್ಡ ಹಗರಣ'' ಎಂದು ಆರೋಪಿಸಿದರು.

ದೇವನಹಳ್ಳಿಯ ಹರಳೂರು ಗ್ರಾಮದ ಬಳಿ 116.16 ಎಕರೆ ಜಮೀನನ್ನು ನೀಡಲು ಕಳೆದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಭೂಮಿ ಮೂಲತಃ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ್ದು, ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲು ಇಡಲಾಗಿದೆ. ಸದ್ಯ ಇದರ ಮಾರುಕಟ್ಟೆ ಬೆಲೆ ಸರಿಸುಮಾರು 400 ಕೋಟಿ ರೂಪಾಯಿ ಇದೆ. ರೈತರಿಂದ ಸ್ವಾಧೀನಪಡಿಸಿಕೊಳ್ಳಲು 175 ಕೋಟಿ ರೂಪಾಯಿ ಖರ್ಚಾಗಿದೆ. ಇಷ್ಟು ಬೆಲೆಬಾಳುವ ಭೂಮಿಯನ್ನು ಚಾಣಕ್ಯ ವಿವಿ ಟ್ರಸ್ಟಿಗೆ ಕೇವಲ 50 ಕೋಟಿ ರೂಪಾಯಿಗೆ ನೀಡಲು ಸರ್ಕಾರ ಮುಂದಾಗಿರುವುದು ನೋಡಿದರೆ ಇದು ಲೂಟಿ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಕಾರಣದಿಂದಾಗಿ ಸರ್ಕಾರದಲ್ಲಿ ಯಾವುದೇ ಆಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇಂತಹದರ ಮಧ್ಯೆ ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಇರುವ ಜಾಗವನ್ನು ಈ ರೀತಿ ಅನ್ಯ ಉದ್ದೇಶಗಳಿಗೆ ನೀಡುತ್ತಿರುವುದು ಸರಿಯಲ್ಲ. ಇದಕ್ಕೆ ಕೆಐಎಡಿಬಿ ನಿಯಮಗಳ ಪ್ರಕಾರ ಅವಕಾಶವೂ ಇಲ್ಲ. ಇದು ಗೊತ್ತಿದ್ದರೂ ಸಹ ವಿಧಾನಸಭಾಧ್ಯಕ್ಷರೂ ಇದಕ್ಕೆ ಬೆಂಬಲ ನೀಡಿದ್ದಾರೆ. ಸರ್ಕಾರ ಈ ಕೂಡಲೇ ವಿಧೇಯಕವನ್ನು ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
Recommended Video
'ನಾನು ಚಾಣಕ್ಯನ ಬಗ್ಗೆ ಮಾತನಾಡುವುದಿಲ್ಲ. ಆದರೆ, ಆತನ ಹೆಸರಿನಲ್ಲಿ ಮನುವಾದಿಗಳು ವಿಶ್ವವಿದ್ಯಾಲಯ ಮಾಡಲು ಹೊರಟಿರುವುದಕ್ಕಷ್ಟೇ ವಿರೋಧ ವ್ಯಕ್ತಪಡಿಸುತ್ತಿದ್ದೇನೆ. ಆರ್ಎಸ್ಎಸ್ನವರು ಎಂತಹ ವಿಶ್ವವಿದ್ಯಾಲಯ ಪ್ರಾರಂಭಿಸಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಚಾತುವರ್ಣ ವ್ಯವಸ್ಥೆಯನ್ನು ಮತ್ತೆ ತರಲು ಹೊರಟಿದ್ದಾರೆ. ಇಂತಹ ಕೆಲಸಕ್ಕಾಗಿ ರೈತರ ಭೂಮಿಯನ್ನು ಕಿತ್ತುಕೊಂಡು ಇವರಿಗೆ ಒಪ್ಪಿಸಬಾರದು. ಇದರ ವಿರುದ್ಧ ನಾನು ಕಾನೂನು ಹೋರಾಟವನ್ನೂ ಕೈಗೆತ್ತಿಕೊಳ್ಳುತ್ತೇವೆ' ಎಂದು ಹೇಳಿದರು.












Click it and Unblock the Notifications