ಕಾಂಗ್ರೆಸ್ ಒಳಬೇಗುದಿಗೆ ಕ್ಯಾರೇ ಅನ್ನುತ್ತಿಲ್ಲವೇ ಸಿದ್ದರಾಮಯ್ಯ?

ಬೆಂಗಳೂರು, ಜೂನ್ 9: ಸಮ್ಮಿಶ್ರ ಸರ್ಕಾರದ ಸಂಪುಟ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳ ಕಿತ್ತಾಟಗಳು ಹೇಗಾದರೂ ನಡೆಯಲಿ. ಅದರ ಉಸಾಬರಿಯೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದಂತಿದೆ.

ಸಮ್ಮಿಶ್ರ ಸರ್ಕಾರ ರಚನೆ ಮತ್ತು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಳಿದ ನಾಯಕರ ಜತೆ ಮುಂಚೂಣಿಯಲ್ಲಿದ್ದ ಸಿದ್ದರಾಮಯ್ಯ, ಈಗ ಒಡೆದ ಮನಸುಗಳನ್ನು ಬೆಸೆಯುವ ಹೊಣೆಗಾರಿಕೆಯಿಂದ ದೂರ ಸರಿದಿದ್ದಾರೆ.

ಸಮ್ಮಿಶ್ರ ಸರ್ಕಾರದ ರಚನೆ ಮತ್ತು ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಎರಡು ರೀತಿಯ ಮಾತುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ತಮ್ಮ ಆಪ್ತರನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಸಿದ್ದಾರೆ. ಹಾಗೆಯೇ ತಮಗೆ ಆಗದ ಶಾಸಕರಿಗೆ ಸಚಿವ ಸ್ಥಾನ ಸಿಗದಂತೆ ಮಾಡಿದ್ದಾರೆ ಎಂಬ ಆರೋಪವಿದೆ. ಹಾಗೆಯೇ, ಪಕ್ಷದ ಅನೇಕ ಹಿರಿಯ ನಾಯಕರು ಮತ್ತು ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಅದರ ಬೆನ್ನಲ್ಲೇ ಪಕ್ಷದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊತ್ತಿಕೊಂಡಿರುವ ಕಿಚ್ಚು, ಪಕ್ಷವನ್ನು ಸುಡುತ್ತಿದೆ. ಅತೃಪ್ತ ಶಾಸಕರು ಸಂಪುಟದಲ್ಲಿ ತಮಗೆ ಸೀಟು ಪಡೆದುಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.

ಈ ಎಲ್ಲ ಹೋಯ್ದಾಟಗಳನ್ನು ಸಿದ್ದರಾಮಯ್ಯ ದೂರದಲ್ಲಿದ್ದು ಗಮನಿಸುತ್ತಿದ್ದಾರೆ. ಚುನಾವಣೆಯ ಸೋಲಿನ ಆಘಾತ, ಜೆಡಿಎಸ್‌ ಜತೆ ಕೈಜೋಡಿಸಬೇಕಾದ ಅನಿವಾರ್ಯತೆ ಮತ್ತು ಸಂಪುಟ ರಚನೆಯ ಕಸರತ್ತುಗಳ ನಿರಂತರ ಚಟುವಟಿಕೆಗಳಿಂದ ಅವರ ಹೈರಾಣಾಗಿದ್ದಾರೆ. ಹೀಗಾಗಿ ಬಾದಾಮಿಯ ಜನರ ಜತೆ ಬೆರೆಯುವ ನೆಪದಲ್ಲಿ ಈ ಎಲ್ಲ ಗೊಂದಲಗಳಿಂದ ದೂರವಿದ್ದು, ವಿರಾಮ ಪಡೆದುಕೊಲ್ಳಲು ಬಯಸಿದ್ದಾರೆ ಎನ್ನಲಾಗಿದೆ.

ಕ್ಯಾರೇ ಅನ್ನಲಿಲ್ಲ ಸಿದ್ದರಾಮಯ್ಯ

ಕ್ಯಾರೇ ಅನ್ನಲಿಲ್ಲ ಸಿದ್ದರಾಮಯ್ಯ

ರಾಜ್ಯ ರಾಜಕೀಯದಲ್ಲಿ ತೀವ್ರ ಗೊಂದಲ, ಅಸಮಾಧಾನಗಳು ಹೊಗೆಯಾಡುತ್ತಿವೆ. ಅದರ ನಡುವೆಯೇ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಪ್ರವಾಸ ನಡೆಸುತ್ತಿದ್ದಾರೆ.

ಕಾಂಗ್ರೆಸ್ ನಾಯಕರಲ್ಲದೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸಹ ಎಂ.ಬಿ. ಪಾಟೀಲ್ ಅವರ ಮನವೊಲಿಸಲು ಮುಂದಾಗಿದ್ದರು. ಆದರೆ, ಸಿದ್ದರಾಮಯ್ಯ ಅವರು ಮಾತ್ರ ಇವೆಲ್ಲವುಗಳಿಂದ ದೂರ ಇದ್ದಾರೆ.

ಚುನಾವಣೆಯಲ್ಲಿ ಗೆದ್ದು ಸುಮಾರು 20 ದಿನ ಕಳೆದರೂ ತಮಗೆ ಗೆಲುವಿನ ಖುಷಿ ನೀಡಿದ ಬಾದಾಮಿ ಕ್ಷೇತ್ರದ ಜನತೆಗೆ ಕೃತಜ್ಞತೆ ಹೇಳುವ ಪೂರ್ವನಿಯೋಜಿತ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. ಸರ್ಕಾರ ಮತ್ತು ಪಕ್ಷ ಇಕ್ಕಟ್ಟಿನಲ್ಲಿ ಸಿಲುಕಿದ್ದರೂ ಸಿದ್ದರಾಮಯ್ಯ ಅಲ್ಲಿಂದ ಹೊರ ಬಂದಿಲ್ಲ.

ಹೈಕಮಾಂಡ್‌ನಿಂದ ಬಂದಿತ್ತು ಬುಲಾವ್

ಹೈಕಮಾಂಡ್‌ನಿಂದ ಬಂದಿತ್ತು ಬುಲಾವ್

ಇಷ್ಟೆಲ್ಲಾ ಸಂಕಷ್ಟಗಳು ಎದುರಾಗಿದ್ದರೂ, ರಾಜಧಾನಿಯಿಂದ ದೂರದ ಬಾದಾಮಿಯಲ್ಲಿ ತಮ್ಮ ಪಾಡಿಗೆ ಪ್ರವಾಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಹೊಂದಿದೆ ಎನ್ನಲಾಗಿದೆ.

ಪಕ್ಷ ತೊಂದರೆಯಲ್ಲಿದೆ. ಹಿರಿಯ ಶಾಸಕರು ಬಂಡಾಯ ಎದ್ದಿದ್ದಾರೆ. ಅವರ ಜತೆ ಮಾತುಕತೆ ನಡೆಸಿ ಸರಿಪಡಿಸಿ ಎಂಬ ಹೈಕಮಾಂಡ್ ಕರೆಗೆ ಸಿದ್ದರಾಮಯ್ಯ ಒಲ್ಲೆ ಎಂದಿದ್ದಾರೆ.

122 ಶಾಸಕರ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಹಿಂದೆ ಅಧಿಕಾರಕ್ಕೆ ಬಂದಾಗಲೂ ಸಚಿವಸ್ಥಾನ ಸಿಗದ ಅನೇಕರು ಅಸಮಾಧಾನಗೊಂಡಿದ್ದರು. ಹೀಗಿರುವಾಗ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಬರುವುದು ಸಹಜ. ಅದರಲ್ಲೇನೂ ವಿಶೇಷ ಇಲ್ಲ ಎಂದು ಹೈಕಮಾಂಡ್ ಕಳವಳಕ್ಕೆ ತಣ್ಣನೆಯ ಉತ್ತರ ರವಾನಿಸಿದ್ದಾರೆ.

ದೆಹಲಿಗೂ ಹೋಗೊಲ್ಲ ಎಲ್ಲಿಗೂ ಹೋಗೊಲ್ಲ

ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದೆ. ಪಕ್ಷದ ಆಂತರಿಕ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಈ ಗೊಂದಲಗಳಿಗೆ ಪರಿಹಾರ ನೀಡಬೇಕೆಂದರೆ ಸಿದ್ದರಾಮಯ್ಯ ಅವರು ಮುಂಚೂಣಿಗೆ ಬರಬೇಕು.

ಹೀಗಾಗಿ ಹೈಕಮಾಂಡ್ ಜತೆ ಮಾತನಾಡಲು ದೆಹಲಿಗೆ ತೆರಳುವ ಯೋಚನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ದೆಹಲಿಗೂ ಹೋಗುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ. ಭಾನುವಾರ ಮತ್ತು ಸೋಮವಾರ ಬಾದಾಮಿಯಲ್ಲಿಯೇ ಇರುತ್ತೇನೆ. ಅಲ್ಲಿ ಮಾತನಾಡಲು ಯಾವ ಹೊಸ ವಿಷಯವೂ ಇಲ್ಲ. ಎಲ್ಲವೂ ಹಳೆಯದೇ ಇರುವುದು ಎಂದು ಕಾಂಗ್ರೆಸ್ ಶಾಸಕರ ಅತೃಪ್ತಿ ಬಗ್ಗೆ ನಿರಾಸಕ್ತಿ ಪ್ರದರ್ಶಿಸಿದ್ದಾರೆ.

ಆಡಿಸುತ್ತಾರಾ, ಉರುಳಿಸುತ್ತಾರಾ?

ಆಡಿಸುತ್ತಾರಾ, ಉರುಳಿಸುತ್ತಾರಾ?

ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದು ಬಸವಕಲ್ಯಾಣ ಶಾಸಕ ಬಿ. ನಾರಾಯಣ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.

ಸರ್ಕಾರವನ್ನು ರಚಿಸುವುದರಲ್ಲಿ ಸಿದ್ದರಾಮಯ್ಯ ಪಾತ್ರ ವಹಿಸಿದ್ದರೂ. ಅದರ ಆಡಳಿತದಲ್ಲಿ ಅವರು ಯಾವ ಪಾತ್ರ ವಹಿಸಲಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರದ ಸುಗಮ ಆಡಳಿತಕ್ಕೆ ನೆರವಾಗಲು ಮತ್ತು ಉಭಯ ಪಕ್ಷಗಳ ನಡುವೆ ಹೊಂದಾಣಿಕೆಯ ಬಾಂಧವ್ಯ ಕಾಪಾಡಿಕೊಳ್ಳಲು ರಚಿಸಿರುವ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪಕ್ಷಗಳ ನಡುವೆ ಉಂಟಾಗಬಹುದಾದ ಗೊಂದಲ ಶಮನ ಮಾಡುವ ಹೊಣೆ ಅವರ ಮೇಲಿದೆ. ಆದರೆ, ಪಕ್ಷದೊಳಗಿನ ಬಣಗಳ ನಡುವೆ ಸಮನ್ವಯ ಸಾಧಿಸುವ ಹೊಣೆಯನ್ನು ಅವರು ವಹಿಸಿಕೊಂಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಡಿಸುತ್ತಾರೆಯೇ, ಉಳಿಸುತ್ತಾರೆಯೇ ಅಥವಾ ಉರುಳಿಸುತ್ತಾರೆಯೇ ಎಂಬುದು ಗೊತ್ತಾಗಬೇಕಿದೆ.

ಮೈಸೂರಿನಿಂದ ರಾಜಧಾನಿಗೆ ಬರುತ್ತಾರೆಯೇ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಮುಖಭಂಗ ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಜೂನ್ 12ರಂದು ಅವರು ವರುಣಾ ಕ್ಷೇತ್ರಕ್ಕೆ ತೆರಳಿ, ಅಲ್ಲಿ ತಮ್ಮ ಮಗ ಯತೀಂದ್ರ ಅವರನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಲಿದ್ದಾರೆ.

ಸದ್ಯಕ್ಕೆ ದೂರದ ಬಾಗಲಕೋಟೆ ಜಿಲ್ಲೆಯಲ್ಲಿ ಇರುವ ಅವರು, ಮೈಸೂರಿಗೆ ಬಂದ ಬಳಿಕ ಬೆಂಗಳೂರಿಗೆ ಬರುತ್ತಾರೆಯೇ ಅಥವಾ ಅಲ್ಲಿಂದ ಮತ್ತೆ ಬಾದಾಮಿಗೆ ಮರಳುತ್ತಾರೆಯೇ ಎನ್ನುವುದು ತಿಳಿದಿಲ್ಲ. ಅಷ್ಟರೊಳಗೆ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬದಲಾವಣೆಗಳು ಆಗಬಹುದು. ಮತ್ತು ಸಿದ್ದರಾಮಯ್ಯ ಅವರು ಯಾವ ರೀತಿ ಹೆಜ್ಜೆ ಇಡುತ್ತಾರೆ ಎಂಬುದು ಸದ್ಯದ ಕುತೂಹಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+