ಕೈಲಾಗದವರ ಜೊತೆ ವಾದ ಇಲ್ಲ:ವಿಶ್ವನಾಥ್ಗೆ ಸಿದ್ದರಾಮಯ್ಯ ಟ್ವೀಟ್ ಏಟು
ಬೆಂಗಳೂರು, ಮೇ 13: ತಮ್ಮ ಆಡಳಿತದ ಬಗ್ಗೆ ಮತ್ತು ತಮ್ಮ ಬೆಂಬಲಿಗರ ಬಗ್ಗೆ ಹಗುರವಾಗಿ ಮಾತನಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ವಿರುದ್ಧ ಸಿದ್ದರಾಮಯ್ಯ ಅವರ ಕೋಪ ಇನ್ನೂ ತಣ್ಣಗಾಗಿಲ್ಲ. ಟ್ವಿಟ್ಟರ್ ನಲ್ಲಿ ವಿಶ್ವನಾಥ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಸಿದ್ದರಾಮಯ್ಯ ಮುಂದುವರೆಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬೆಳಿಗ್ಗೆ ಇದೇ ವಿಷಯ ಕುರಿತು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಮೈತ್ರಿಧರ್ಮ ನನ್ನನ್ನು ಕಟ್ಟಿ ಹಾಕಿದೆ, ವಿಶ್ವನಾಥ್ ಅವರ ಹೇಳಿಕೆಗೆ ಪೂರ್ಣವಾಗಿ ಪ್ರತಿಕ್ರಿಯಿಸಲಾಗುತ್ತಿಲ್ಲ ಎಂದಿದ್ದರು, ಆದರೆ ಮತ್ತೆ ಸಂಜೆ ವೇಳೆಗೆ ಅದೇ ವಿಷಯವಾಗಿ ಟ್ವೀಟ್ ಮಾಡಿದ್ದಾರೆ.
ವಿಶ್ವನಾಥ್ ಅವರು ಈರ್ಶ್ಯೆಗೆ ಒಳಗಾಗಿದ್ದಾರೆ ಎಂದಿರುವ ಸಿದ್ದರಾಮಯ್ಯ, ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತೆ, ಇತಿಹಾಸ ಸ್ಮರಿಸುತ್ತದೆ. ದೇವರಾಜ ಅರಸು ಅವರ ಜನಪರ ಕೆಲಸಗಳನ್ನು ಮರೆತು ಜನ ಸೋಲಿಸಿದರು. ಅವರನ್ನು ಗುರುಗಳೆಂದು ಈಗ ಹೇಳುತ್ತಿರುವ ನಾಯಕರು ಕೂಡಾ ಬಿಟ್ಟು ಓಡಿಹೋಗಿದ್ದರು. ಆದರೆ ಅರಸು ಅವರನ್ನು ಈಗ ಇತಿಹಾಸ ಸ್ಮರಿಸುತ್ತಿದೆ. ಈರ್ಷ್ಯೆಗೆ ಕಾಲವೇ ಉತ್ತರ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದೇ ವಿಷಯದ ಬಗ್ಗೆ ಮತ್ತೊಂದು ಖಾರವಾದ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿ ಎಂಬ ಹೆಮ್ಮೆ ನನ್ನದು. ಇದನ್ನು ಪುಸ್ತಕ ಮಾಡಿ ಹಂಚಿದ್ದೇನೆ, ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ದ. ಮೈಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ನನ್ನ ವಾದ ಇಲ್ಲ ಎಂದು ಹೇಳಿದ್ದಾರೆ.
ನಿನ್ನೆ ಏಕವಚನದಲ್ಲಿಯೇ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಇಂದು ವಿಶ್ವನಾಥ್ ಅವರನ್ನು ಪರೋಕ್ಷವಾಗಿ ಮೈಪರಚಿಕೊಳ್ಳುತ್ತಿರುವ, ಕೈಲಾಗದವರು ಎಂದಿದ್ದಾರೆ.
ಈ ಇಬ್ಬರು ನಾಯಕರ ಜಗಳ ತಾರಕಕ್ಕೆ ಹೋಗುತ್ತಿದ್ದು, ಸಿದ್ದರಾಮಯ್ಯ ಪರ ಶಾಸಕರು ಮುಖಂಡರು, ವಿಶ್ವನಾಥ್ ಪರ ಶಾಸಕರು, ಮುಖಂಡರು ಪರಸ್ಪರ ಮೂದಲಿಕೆ ಇಳಿದಿದ್ದಾರೆ.












Click it and Unblock the Notifications