ಮನೆಗೆ ಕರೆದು ಡಿ.ಕೆ.ಶಿವಕುಮಾರ್ಗೆ ಬುದ್ಧಿವಾದ ಹೇಳಿದ ಸಿದ್ದರಾಮಯ್ಯ
Recommended Video

ಬೆಂಗಳೂರು, ಸೆಪ್ಟೆಂಬರ್ 21: ನಿನ್ನೆ ರಾತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಬುದ್ದಿ ಹೇಳಿದ್ದಾರೆ.
ಅನಾರೋಗ್ಯದಿಂದ ಅಪೋಲೋ ಆಸ್ಪತ್ರಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಅವರು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನೇರವಾಗಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ತೆರಳಿ ಅಲ್ಲಿ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಜೊತೆ ಬಹು ಸಮಯ ಚರ್ಚೆ ನಡೆಸಿದರು.
ಈ ಸಮಯ ಡಿ.ಕೆ.ಶಿವಕುಮಾರ್ಗೆ ಬುದ್ಧಿವಾದ ಹೇಳಿದ ಸಿದ್ದರಾಮಯ್ಯ, ಇನ್ನು ಮುಂದೆ ಬೆಳಗಾವಿ ರಾಜಕೀಯದಲ್ಲಿ ತಲೆ ಹಾಕುವುದು ಬೇಡ. ನಿಮಗೆ ಇನ್ನೂ ಎರಡು ಜಿಲ್ಲೆಗಳ ಉಸ್ತುವಾರಿ ಇದೆ ಅದರ ಬಗ್ಗೆ ಗಮನವಹಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದ ಉಳಿವು ಮುಖ್ಯ
ನಮಗೆ ಸಮ್ಮಿಶ್ರ ಸರ್ಕಾರದ ಉಳಿವು ಮುಖ್ಯ ವೈಯಕ್ತಿಕ ಅಹಂಗಳಿಂದ ಸರ್ಕಾರಕ್ಕೆ ತೊಂದರೆ ಆಗುವುದು ಸರಿಯಲ್ಲ, ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸರಿಯಲ್ಲ ಎಂದು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಡಿಕೆಶಿ ಬೆಂಬಲದಿಂದ ಲಕ್ಷ್ಮಿ ಹೆಬ್ಬಾಳ್ಕರ್ಗೆ ಬಲ
ಡಿ.ಕೆ.ಶಿವಕುಮಾರ್ ಅವರ ಬೆಂಬಲದಿಂದಲೇ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯವಾಗಿ ಜಟಾಪಟಿ ನಡೆಸಿದ್ದರು. ಅಲ್ಲದೆ ಪಿಎಲ್ಡಿ ಬ್ಯಾಂಕ್ ಚುನಾವಣಾ ರಾಜಕೀಯದಲ್ಲಿ ಮೇಲುಗೈ ಸಹ ಸಾಧಿಸಿದರು.

ಬೆಳಗಾವಿ ಕಾಂಗ್ರೆಸ್ ಅನ್ನು ಆಳಿದ್ದ ಜಾರಕಿಹೊಳಿ ಸಹೋದರರು
ಬೆಳಗಾವಿ ಕಾಂಗ್ರೆಸ್ ಅನ್ನು ವರ್ಷಗಳಿಂದಲೂ ಆಳಿಕೊಂಡು ಬಂದಿದ್ದ ಜಾರಕಿಹೊಳಿ ಸಹೋದರರಿಗೆ ತಮ್ಮದೇ ಜಿಲ್ಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ವಿರುದ್ಧ ಮೇಲುಗೈ ಸಾಧಿಸಿದ್ದು ಅಸಹನೀಯವಾಗಿ ಕಂಡು ಸರ್ಕಾರಕ್ಕೆ ಕೊಡಲಿ ಪೆಟ್ಟು ನೀಡುವವರೆಗೂ ಮುಂದುವರೆದರು.

ಹೈಕಮಾಂಡ್ ಭೇಟಿ ಆಗಿದ್ದ ಸತೀಶ್ ಜಾರಕಿಹೊಳಿ
ಮೊನ್ನೆಯಷ್ಟೆ ಹೈಕಮಾಂಡ್ಗೆ ತೆರಳಿದ್ದ ಸಿದ್ದರಾಮಯ್ಯ ಅವರು, ಬೆಳಗಾವಿ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ಸತೀಶ್ ಜಾರಕಿಹೊಳಿ ಸಹ, ಡಿ.ಕೆ.ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಹೈಕಮಾಂಡ್ ಬಳಿ ಹೇಳಿದ್ದಾರೆ. ಹಾಗಾಗಿ ನಿನ್ನೆ ದಿಢೀರ್ ಸಭೆ ಕರೆಯಲಾಗಿದೆ.

ಇಂದು ಸಿದ್ದರಾಮಯ್ಯ ನಿವಾಸದಲ್ಲಿ ಸಭೆ
ಇಂದು (ಸೆಪ್ಟೆಂಬರ್ 21) ಸಹ ಸಿದ್ದರಾಮಯ್ಯ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರುಗಳು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.












Click it and Unblock the Notifications