ʼದಸರಾ ಹಬ್ಬದ ಬಳಿಕ ಸಿದ್ದರಾಮಯ್ಯ ರಾಜೀನಾಮೆʼ
ಬೆಂಗಳೂರು, ಅಕ್ಟೋಬರ್ 08: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗುಸು ಗುಸು ಕೇಳಿ ಬರುತ್ತಿದೆ. ಈ ಬೆನ್ನಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಸಾಲು ಸಾಲು ನಾಯಕರ ಜೊತೆಗೆ ರಹಸ್ಯ ಸಭೆ ನಡೆಸುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ದಸರಾ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ದೆಹಲಿಗೆ ಕಳುಹಿಸಿದ್ದೇ ಮುಖಯಸಿದ್ದರಾಮಯ್ಯನವರು'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಹೈಕಮಾಂಡ್ ಕೂಡ ರಾಜ್ಯದಲ್ಲಿ ತಮ್ಮ ಸರ್ಕಾರದಲ್ಲಿರುವ ನಾಯಕರು ನಡೆದುಕೊಳ್ಳುತ್ತಿರುವ ರೀತಿಯಿಂದ ಹೈರಾಣಾಗಿದ್ದಾರೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುವ ಚಿಂತನೆ ಮಾಡಿದೆ. ಹೈಕಮಾಂಡ್ ಏನು ಚರ್ಚೆ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ತಮ್ಮ ಅಧಿಕಾರಾವಧಿಯನ್ನು ತಾವೇ ಘೋಷಿಸಿಕೊಳ್ಳುವಂಥ ಕೆಟ್ಟ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂದೊದಗಿದೆ.
ಮತ್ತೊಂದು ಕಡೆ ಯಾವುದೇ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಇನ್ನು, ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳ ಮಾತೇ ಇಲ್ಲ. ಕೆಲಸ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯನವರಿಗೆ ಜಯಕಾರ ಹಾಕುತ್ತಿದ್ದಾರೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.
ಇನ್ನೂ ಮುಡಾದಿಂದ ಪಡೆದ ಹದಿನಾಲ್ಕು ಸೈಟುಗಳನ್ನು ಮರಳಿ ಕೊಡಬೇಕಾದರೆ 64 ಕೋಟಿ ರು.ಕೊಡಿ ಎನ್ನುತ್ತಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಈಗ ಯಾಕೆ ಏಕಾಏಕಿ ಸೈಟು ಹಿಂದಿರುಗಿಸಿದ್ದಾರೆ? ಎಂದು ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣ ಕೇವಲ ಹದಿನಾಲ್ಕು ಸೈಟ್ ವಿಚಾರದ್ದಲ್ಲ ಸಾವಿರಾರು ಕೋಟಿ ರು. ಇದರಲ್ಲಿ ಲೂಟಿಯಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ಆಯಿತು. ಆಗ ಯಾವುದೇ ಹಗರಣವೇ ಆಗಿಲ್ಲ, ಅದರ ಬಗ್ಗೆ ಚರ್ಚೆಯ ಅವಶ್ಯಕತೆಯೇ ಇಲ್ಲ ಎಂದರು. ಈಗ ಸಿದ್ದರಾಮಯ್ಯ ಅವರ ಸ್ಥಿತಿ ಎಲ್ಲಿಗೆ ಬಂತು? ಈಗ ಹೇಗೆ ಸಲೀಸಾಗಿ ಹದಿನಾಲ್ಕು ನಿವೇ ಶನಗಳನ್ನು ವಾಪಸ್ ಕೊಟ್ಟರು.ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾಗಿದೆ. ಹದಿನಾಲ್ಕು ಸೈಟ್ ಅವರ ಬುಡಕ್ಕೇ ಬಂದಿದೆ ಎಂಬ ಅರಿವಾಗಿದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ ಎಂಬ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಟಿ.ದೇವೇಗೌಡರನ್ನು ಕೇಳಿಕೊಂಡು ಬಿಜೆಪಿಯವರು ಮೈಸೂರು ಚಲೋ ಪಾದ ಯಾತ್ರೆ ಮಾಡಿಲ್ಲ. ಅದು ವಿಪಕ್ಷಗಳ ಜವಾಬ್ದಾರಿ. ಭ್ರಷ್ಟ ಮುಖ್ಯಮಂತ್ರಿ, ಭ್ರಷ್ಟ ಸರ್ಕಾ ರದ ವಿರುದ್ಧ ನಾವು ಪ್ರಾಮಾಣಿಕ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.












Click it and Unblock the Notifications