ಕೆಎಸ್ಆರ್ಟಿಸಿ ನೌಕರರ ಬಗ್ಗೆ ಕಾಳಜಿ; ಸಿಎಂಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಜುಲೈ 14 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಒಂದು ವರ್ಷದ ವೇತನ ರಹಿತ ರಜೆ ನೀಡುವ ಆಲೋಚನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. "ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Recommended Video
ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. 'ಕೆಎಸ್ಆರ್ಟಿಸಿ ನೌಕರರಿಗೆ ಒಂದು ವರ್ಷದ ವೇತನ ರಹಿತ ರಜೆ ನೀಡುವ ಮುಖ್ಯಮಂತ್ರಿಗಳ ಆಲೋಚನೆ ಕಾರ್ಮಿಕ ವಿರೋಧಿ ಮಾತ್ರವಲ್ಲ ಅಮಾನವೀಯ ಕೂಡಾ' ಎಂದು ಆರೋಪ ಮಾಡಿದ್ದಾರೆ.
ಸುಮಾರು 1.30 ಲಕ್ಷ ನೌಕರರಿಗೆ ಒಂದು ವರ್ಷಗಳ ಕಾಲ ವೇತನ ರಹಿತ ಮತ್ತು ಭತ್ಯೆ ರಹಿತ ರಜೆಯನ್ನು ನೀಡಲು ಚರ್ಚೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಕೊರೊನಾ ನೆಪದಲ್ಲಿ ಈ ರೀತಿ ನೌಕರರ ಜೀವನದ ಜೊತೆ ಚೆಲ್ಲಾಟವಾಡಲು ಯೋಚಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ತಿಂಗಳು ಬರುವ ಸಂಬಳವನ್ನೇ ನಂಬಿಕೊಂಡು ಸಂಸಾರವನ್ನು ನಿರ್ವಹಿಸುವ ಈ ನೌಕರರ ಪರಿಸ್ಥಿತಿ ಏನಾಗಬಹುದು? ಎಂಬುದನ್ನು ಸರ್ಕಾರ ಯೋಚಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇತರ ಸೇವೆಗೆ ನಿಯೋಜನೆ ಮಾಡಿ
ಜನರು ಪ್ರಯಾಣ ಮಾಡದ ಕಾರಣಕ್ಕೆ ನೌಕರರು ಕೆಲಸವಿಲ್ಲದೆ ಇದ್ದರೆ ಸರ್ಕಾರ ಆಸಕ್ತ ನೌಕರರ ಕೈಗಳಿಗೆ ಇತರೆ ಕೆಲಸಗಳನ್ನು ನೀಡುವ ಮೂಲಕ ಇವರ ಸೇವೆಯನ್ನು ಸಮರ್ಥವಾಗಿ ಪಡೆದುಕೊಳ್ಳಲು ಯೋಚಿಸಬಹುದು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

ಕ್ರೌರ್ಯದ ಪರಮಾವಧಿ
ಕೆಎಸ್ಆರ್ಟಿಸಿ ನೌಕರರಿಗೆ ವೇತನವನ್ನೇ ನೀಡುವುದಿಲ್ಲ ಎಂಬುದು ಕ್ರೌರ್ಯದ ಪರಮಾವಧಿಯಾಗುತ್ತದೆ. ಸರ್ಕಾರ ವೇತನ ರಹಿತ ಮತ್ತು ಭತ್ಯೆ ರಹಿತವಾಗಿ ರಜೆ ನೀಡಬೇಕೆಂಬ ಆಲೋಚನೆಯನ್ನು ಕೈಬಿಡಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಹಿತಾಸಕ್ತಿ ಕಾಪಾಡಿ
ಕರ್ನಾಟಕ ಸರ್ಕಾರ ಕೆಎಸ್ಆರ್ಟಿಸಿ ನೌಕರರಿಗೆ ಸಮರ್ಪಕವಾಗಿ ಸಂಬಳ ನೀಡುವ ಮೂಲಕ ಅವರ ಕುಟುಂಬದ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಂದು ವರ್ಷದ ರಜೆ
ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಒಂದು ವರ್ಷದ ಅವಧಿಗೆ ವೇತನ ಹಾಗೂ ಭತ್ಯೆ ರಹಿತ ವಿಶೇಷ ರಜೆ ಮಂಜೂರು ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಬಸ್ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ. ಆದ್ದರಿಂದ, ಸಂಸ್ಥೆ ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ.












Click it and Unblock the Notifications