ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ಕಿ ಭಾಗ್ಯ ಯಾಕಿಲ್ಲ.? ಸಿಎಂ ಬಳಿ ಉತ್ತರವಿದೆಯೇ ? : ಸಿದ್ದರಾಮಯ್ಯ
ಬೆಂಗಳೂರು,ಡಿಸೆಂಬರ್ 12: ಕಳೆದ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಶಾಸಕನಾಗಿ. ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತಮ್ಮೆಲ್ಲರ ಆಶೀರ್ವಾದ ಕಾರಣ. ಅಂಥಾ ಅವಕಾಶ ಮತ್ತೊಮ್ಮೆ ಸಿಕ್ಕಿದರೆ ನಿಮ್ಮ ಎಲ್ಲಾ ಬೇಡಿಕೆಗಳನ್ನು ಪೂರ್ತಿಗೊಳಿಸುವ ಕೆಲಸ ಮಾಡುತ್ತೇನೆ ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಸೆಯನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಅನಾವರಣಗೊಳಿಸಿ, ನಂತರ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲ ಜಾತಿಗಳ ಬಡವರಿಗೆ 7 ಕೆ.ಜಿ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಬಸವರಾಜ ಬೊಮ್ಮಾಯಿ ಅವರು ಈಗ ಕೇಂದ್ರ ಸರ್ಕಾರದ ಅಕ್ಕಿಯನ್ನು ಸಿದ್ದರಾಮಯ್ಯ ಕೊಟ್ಟಿದ್ದು ಎನ್ನುತ್ತಾರೆ, ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಈ ಯೋಜನೆ ಯಾಕಿಲ್ಲ? ಇದಕ್ಕೆ ಬೊಮ್ಮಾಯಿ ಅವರ ಬಳಿ ಉತ್ತರವಿದೆಯಾ? ಎಂದು ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿರುವಾಗ ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೆ. ಸರ್ಕಾರದ ವತಿಯಿಂದ ನೂರು ಎಕರೆ ಜಮೀನು ಮಂಜೂರು ಮಾಡಿ ರಾಯಣ್ಣ ಹೆಸರಿನಲ್ಲಿ ಒಂದು ಸೈನಿಕ ಶಾಲೆ, ಕೆರೆ ಅಭಿವೃದ್ಧಿ, ಯಾತ್ರಾ ಸ್ಥಳ ನಿರ್ಮಾಣ ಮಾಡುವ ಉದ್ದೇಶದಿಂದ 272 ಕೋಟಿ ರೂ. ಅನುದಾನ ನೀಡಿದ್ದೆ. ಕೆಲವರು ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಹೆಸರೇಳಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಾರೆ, ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ತ್ಯಾಗ ಬಲಿದಾನ ಮಾಡಿದ್ದಾರೆ. ರಾಯಣ್ಣ ಅವರು ಹುಟ್ಟಿದ್ದು ಆಗಸ್ಟ್ 15, ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ, ಅವರನ್ನು ನೇಣಿಗೇರಿಸಿದ್ದು ಜನವರಿ 26, ನಮ್ಮ ಸಂವಿಧಾನ ಜಾರಿಗೆ ಬಂದ ದಿನ. ಎಂಥಾ ಕಾಕತಾಳೀಯ ಇದು. ಪ್ರತೀ ಮನೆಯಲ್ಲಿ ಒಬ್ಬ ದೇಶಪ್ರೇಮಿ ಹುಟ್ಟಬೇಕು ಎಂಬುದು ರಾಯಣ್ಣ ಬಯಕೆ ಆಗಿತ್ತು. ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲ ರಾಯಣ್ಣ ಅವರಂತೆ ಸಿದ್ಧರಾಗಬೇಕು ಎಂಬ ಕಾರಣಕ್ಕೆ ಇಂಥಾ ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ ಮಾಡುವುದು. ಈ ನೆಲವನ್ನು ಪ್ರೀತಿಸುವುದು, ದೇಶದ ಐಕ್ಯತೆಗಾಗಿ ತ್ಯಾಗದ ಮನೋಭಾವ ಬೆಳೆಸಿಕೊಳ್ಳುವುದು ರಾಯಣ್ಣನಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ. ಕುರುಬ ಸಮುದಾಯದಲ್ಲಿ ರಾಯಣ್ಣ, ಕನಕದಾಸರು, ಕಾಳಿದಾಸರು ಮುಂತಾದ ಮಹಾನ್ ಚೇತನಗಳು ಹುಟ್ಟಿದ್ದಾರೆ.
ಇಂದು ಜಾತಿ ವ್ಯವಸ್ಥೆ ಸೃಷ್ಟಿಯಾಗಲು ಕಾರಣ ಯಾರು? ಇದರಿಂದ ಯಾಕೆ ಅಸಮಾನತೆ ನಿರ್ಮಾಣ ಆಯಿತು? ಇದರ ವಿರುದ್ಧ ಕನಕದಾಸರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಹೋರಾಟ ಮಾಡಿದರು. ಕನಕದಾಸರು ನಮ್ಮ ಜಾತಿಯವರು ಎಂಬ ಕಾರಣಕ್ಕೆ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿಲ್ಲ, ಅವರ ಆಶಯಗಳು ಏನಾಗಿತ್ತು ಎಂಬ ಕಾರಣಕ್ಕೆ ಬುದ್ಧ, ಕನಕದಾಸರ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಕನಕದಾಸರು ಕುಲ, ಕುಲ, ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ? ಎಂದು ಹೇಳಿದ್ದರು. ನಾವು ಆಪರೇಷನ್ ಗಾಗಿ ಆಸ್ಪತ್ರೆಗೆ ಹೋದಾಗ ನಮ್ಮ ಜಾತಿಯವನ ರಕ್ತ ಮಾತ್ರ ಕೊಡಿ ಎಂದು ಕೇಳುತ್ತೀವಾ? ಯಾರ ರಕ್ತ ಆದರೂ ಪರವಾಗಿಲ್ಲ ಸಿಕ್ಕರೆ ಸಾಕು ಎಂದು ರಕ್ತ ಪಡೆದು ಪ್ರಾಣ ಉಳಿದ ಮೇಲೆ, ಅವಕಾಶ ಸಿಕ್ಕ ಕಡೆ ನೀನು ಯಾವ ಜಾತಿಯವನು ಎಂದು ಬೇರೆಯವರನ್ನು ಪ್ರಶ್ನೆ ಮಾಡುತ್ತೇವೆ. ಜಾತಿ, ದರ್ಮಗಳ ಕಾರಣಕ್ಕೆ ಅವರನ್ನು ದೂರ ಇಡುತ್ತೇವೆ. ಇಂಥಾ ದ್ವೇಷ, ಅಸಮಾನತೆಯನ್ನು ತೊಡೆದು ಹಾಕಲು ಕನಕದಾಸರು ಮೂರ್ತಿ ಸ್ಥಾಪನೆ ಮಾಡುವುದು.

ಪ್ರತೀ ಶೋಷಿತ ವರ್ಗದ ಜನ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸದೃಢರಾಗಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಂಘಟನೆ ಮಾಡಿ ಆದರೆ ಮತ ಹಾಕುವಾಗ ಎಚ್ಚರಿಕೆಯಿಂದ ನೀಡಿ. ಯಾರು ನಿಮ್ಮ ಜೊತೆ ಇರುತ್ತಾರೆ, ಯಾರು ನಿಮ್ಮ ಶ್ರೇಯಸನ್ನು ಬಯಸುತ್ತಾರೆ ಅವರ ಜೊತೆ ನೀವು ಗಟ್ಟಿಯಾಗಿ ನಿಲ್ಲಬೇಕು. 1994-95ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಸಂಪುಟ ಉಪಸಮಿತಿಯ ಸದಸ್ಯನಾಗಿದ್ದುಕೊಂಡು ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ಜಾರಿಗೆ ತಂದಿದ್ದು. ಇದು ನಮ್ಮ ಕೊಡುಗೆ. ಮಹಿಳೆಯರಿಗೆ 50% ಮೀಸಲಾತಿ ಸಿಕ್ಕಿರುವುದು ನಮ್ಮಿಂದ. ಇವೆಲ್ಲವನ್ನು ಇಂದು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜನ ಹುಷಾರಾಗಿರಬೇಕು.
ಕಾಗಿನೆಲೆಯಲ್ಲಿ ಗುರುಪೀಠ ಸ್ಥಾಪನೆ ಮಾಡಿ, ಅದನ್ನು ಪವಿತ್ರ ಸ್ಥಳವಾಗಿ ಮಾಡಿದ್ದು ನಾನು. ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ, ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಿದ್ದು ನಾನು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡುವಂತೆ ಆದೇಶ ನೀಡಿದ್ದು ನಾನು. ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಕುವೆಂಪು ಹೇಳಿದ್ದಾರೆ. ಆದರೆ ಇಂದು ಹಿಂದೂ ಮುಸ್ಲೀಂ ಎಂದು ಕಿತ್ತಾಟ ನಡೆಸುತ್ತಾರೆ. ಪ್ರತೀ ಮಗು ಹುಟ್ಟುವಾಗ ವಿಶ್ವಮಾನವಾಗಿ ಹುಟ್ಟಿ, ನಂತರ ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ ಎಂದು ಕುವೆಂಪು ಹೇಳಿದ್ದರು. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವ್ಯವಸ್ಥೆ ನಿರ್ಮಾಣವಾಗಬೇಕು.
ದೇಶದ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ಅವರಷ್ಟು ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿ ಬೇರೆ ಯಾರು ಇಲ್ಲ. ಹಾಗಾಗಿ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಕ್ಕಿದೆ. ಸಂವಿಧಾನದಿಂದ ಇಂದು ರಾಷ್ಟ್ರಪತಿ ಇಂದ ಹಿಡಿದು ಕೂಲಿ ಮಾಡುವವನ ವರೆಗೆ ಎಲ್ಲರ ಮತಕ್ಕೂ ಒಂದೇ ಮೌಲ್ಯ. ಆದರೆ ಇಂದು ಸಂವಿಧಾನದ ಕುತ್ತಿಗೆ ಹಿಸುಕುವ ಕೆಲಸ ನಡೆಯುತ್ತಿದೆ. ಬುದ್ದ, ಬಸವ, ಅಂಬೇಡ್ಕರ್, ರಾಯಣ್ಣ ಇವರೆಲ್ಲ ಯಾವುದೋ ಒಂದು ಜಾತಿಗೆ ಸೀಮಿತವಾದವರಲ್ಲ. ಹಾಗಾಗಿ ಮಹಾನ್ ವ್ಯಕ್ತಿಗಳ ಪ್ರತಿಮೆ ನಿರ್ಮಾಣ ಮಾಡುವುದು. ಇವರ ಆದರ್ಶಗಳನ್ನು ಪಾಲನೆ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದರು.












Click it and Unblock the Notifications