ಚಾಮರಾಜನಗರ ಭೇಟಿ, ದಾಖಲೆ ಬರೆದ ಸಿದ್ದರಾಮಯ್ಯ!
ಚಾಮರಾಜನಗರ, ಜೂ.24 : ಚಾಮರಾಜನಗರದಲ್ಲಿ 1,600 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಶಂಕುಸ್ಥಾಪನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಎರಡು ವರ್ಷಗಳಲ್ಲಿ 8 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ದಾಖಲೆ ಬರೆದಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ. 1,600 ಎಕರೆ ಪ್ರದೇಶದ ಪೈಕಿ ಈಗಾಗಲೇ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ 1,057 ಎಕರೆ ಪ್ರದೇಶವನ್ನು ಕೆಐಎಡಿಬಿ ಅಭಿವೃದ್ಧಿ ಪಡಿಸಲಿದೆ. [1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ]
ಈ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸಲು 17 ಮಂದಿಗೆ ಭೂ ಮಂಜೂರಾತಿ ಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿತರಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಕೆಐಎಡಿಬಿ 125 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದೆ. ಸರ್ಕಾರ 50 ಕೋಟಿ ರೂ. ಬಿಡುಗಡೆ ಮಾಡಿದೆ. [ಶಾಪ ವಿಮೋಚನೆ ಮಾಡಿದ ಸಿಎಂ ಸಿದ್ದರಾಮಯ್ಯ]
ದಾಖಲೆ ಬರೆದ ಸಿಎಂ : ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯವನ್ನು ಬದಿಗೊತ್ತಿರುವ ಸಿದ್ದರಾಮಯ್ಯ ಅವರು 2 ವರ್ಷದ ಅವಧಿಯಲ್ಲಿ ಎಂಟು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲೆಯ ಮೊದಲ ಕೈಗಾರಿಕಾ ಪ್ರದೇಶ
ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಉದ್ಯಮ ಸ್ಥಾಪನೆಗೆ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಿತ್ತು. ಈಗ 1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ನಂಜನಗೂಡು ರಸ್ತೆಯಲ್ಲಿರುವ ಬದನಕುಪ್ಪೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ.
ಕೆಐಎಡಿಬಿಯಿಂದ ನಿರ್ಮಾಣ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕಾ ಪದೇಶವನ್ನು ಅಭಿವೃದ್ಧಿಪಡಿಸಲಿದೆ. ಈಗಾಗಲೇ 300 ಉದ್ಯಮಿಗಳು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತೋರಿಸಿದ್ದಾರೆ. ಚಾಮರಾಜನಗರದಲ್ಲಿ ನಿರ್ಮಾಣವಾಗುವ ಕೈಗಾರಿಕಾ ಪದೇಶ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಿಂದಲೂ ಉದ್ಯಮಿಗಳನ್ನು ಆಕರ್ಷಿಸಲಿದೆ. ಜಿಲ್ಲೆಯಲ್ಲಿ ಸುಮಾರು 12,000 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ.
17 ಮಂದಿಗೆ ಭೂ ಮಂಜೂರಾತಿ ಪತ್ರ ವಿತರಣೆ
ಈ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸಲು 17 ಮಂದಿಗೆ ಭೂ ಮಂಜೂರಾತಿ ಪತ್ರಗಳನ್ನು ಸಿದ್ದರಾಮಯ್ಯ ಮಂಗಳವಾರ ವಿತರಣೆ ಮಾಡಿದ್ದಾರೆ. ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಿರುವ 17 ಮಂದಿಯ ಪೈಕಿ ಬಹುತೇಕರು ಗ್ರಾನೈಟ್ ಉದ್ದಿಮೆದಾರರು. ಉಳಿದಂತೆ ತೆಂಗು, ಇತರೆ ಉದ್ಯಮದವರು ಇದ್ದಾರೆ.
ಮೂಲ ಸೌಕರ್ಯ ಒದಗಿಸಲು ಆದ್ಯತೆ
ಈ ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ಆದ್ಯತೆ ನೀಡಿದೆ. ಕಬಿನಿ ಮೂಲದಿಂದ 55 ಎಂಎಲ್ಡಿ ನೀರನ್ನು ಈ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತದೆ, 7 ಮೆಗಾವ್ಯಾಟ್ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗವೂ ಈ ಪ್ರದೇಶದ ಸಮೀಪ ಹಾದು ಹೋಗಲಿದೆ.
ಡೈರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ
1500 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೆ ಶಂಕುಸ್ಥಾಪನೆ ಮತ್ತು ಕುದೇರು ಗ್ರಾಮದಲ್ಲಿ ಪ್ರತ್ಯೇಕ ಹಾಲು ಒಕ್ಕೂಟವಾದ ಚಾಮುಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 23ರಂದು ಆಗಮಿಸಲಿದ್ದಾರೆ.
ದಾಖಲೆ ಬರೆದ ಸಿದ್ದರಾಮಯ್ಯ
ಜೂನ್ 23ರ ಮಂಗಳವಾರ ಚಾಮರಾಜನಗರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ. 2 ವರ್ಷದ ಅವಧಿಯಲ್ಲಿ ಜಿಲ್ಲೆಗೆ 8ಬಾರಿ ಅವರು ಭೇಟಿ ನೀಡಿದ್ದಾರೆ. ಯಾವುದೇ, ಮುಖ್ಯಮಂತ್ರಿಗಳು ಇಷ್ಟು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ. ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯವನ್ನು ಬದಿಗೊತ್ತಿ ಸಿಎಂ ದಾಖಲೆ ಮಾಡಿದ್ದಾರೆ.