ರಿಯಾಯಿತಿ ದರದ ಧಾರ್ಮಿಕ ಪ್ರವಾಸ 'ಪುನೀತ ಯಾತ್ರೆ'ಗೆ ಚಾಲನೆ
ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ಎಲ್ಲಾ ಧರ್ಮದ ಪ್ರವಾಸಿಗರನ್ನು ಕರೆದೊಯ್ಯುವ "ಪುನೀತ ಯಾತ್ರೆ"ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ರೂಪಿಸಿರುವ 'ಪುನೀತ ಯಾತ್ರೆ'ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಶುಭ ಕೋರಿದ ಸಿಎಂ, ಹೊಸ ಯೋಜನೆ ಯಶಸ್ವಿಯಾಗಲಿ, ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಲಿ ಎಂದು ಹಾರೈಸಿದರು.
'ಪುನೀತ ಯಾತ್ರೆ'ಯನ್ನು ಎರಡು ಹಂತದಲ್ಲಿ ಆಯೋಜಿಸಲಾಗುವುದು. ಒಟ್ಟು 1.38 ಲಕ್ಷ ಮಂದಿ ಇದರ ಲಾಭ ಪಡೆಯುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಎರಡು ಹಂತದ ಪುನೀತ ಯಾತ್ರೆ
ಮೊದಲ ಹಂತದ ಯಾತ್ರೆ ಇಂದಿನಿಂದಲೇ ಆರಂಭವಾಗಲಿದೆ. ಹೊಯ್ಸಳ, ಗೊಮ್ಮಟೇಶ್ವರ ದರ್ಶನ, ಉತ್ತರ ಕರ್ನಾಟಕದ ಪ್ರವಾಸಿ ತಾಣಗಳು, ಭಾರತದ ವಿಸ್ಮಯ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ತಿರುಪತಿ, ಕಾಳಹಸ್ತಿ, ಮಂತ್ರಾಲಯ ಮತ್ತು ಶಿರಡಿಯಂಥ ಧಾರ್ಮಿಕ ಕ್ಷೇತ್ರಗಳೂ ಪ್ಯಾಕೇಜ್ನಲ್ಲಿ ಒಳಗೊಂಡಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಕ್ಟೋಬರ್ 15ರಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಇದರಲ್ಲಿ ರಾಜ್ಯದ ಇತಿಹಾಸ ಪ್ರಸಿದ್ಧ ಚರ್ಚ್, ಮಸೀದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಗಾಣಗಾಪುರ, ದತ್ತಾತ್ರೇಯ ಮಳಖೇಡ ರಾಘವೇಂದ್ರ, ಸನ್ನತಿ ಚಂದ್ರಲಾಂಬಮ, ಸವದತ್ತಿ ಎಲ್ಲಮ್ಮ, ಶರಣಬಸವರ ಪವಿತ್ರ ಸ್ಥಳಗಳ ದರ್ಶನ ಇರಲಿದೆ.
ನಂಜನಗೂಡು, ಬಾಬಾ ಬುಡನಗಿರಿ, ಆದಿಚುಂಚನಗಿರಿ, ಗೋಕರ್ಣ, ಶಿರಸಿ ಮಾರಿಕಾಂಬೆ, ಶಿರಡಿ, ಶಬರಿಮಲೆ, ಮಧುರೈಗೆ ಪುನೀತ ಯಾತ್ರೆಯಡಿಯಲ್ಲಿ ಪ್ರವಾಸಿಗರನ್ನು ಕರೆದಯೊಯ್ಯಲಾಗುವುದು.
ಪುನೀತ ಯಾತ್ರೆಯಡಿಯಲ್ಲಿ 2,844 ರೂಪಾಯಿಯನ್ನು ಸರ್ಕಾರ ನೀಡಲಿದೆ. ಉಳಿದ ವೆಚ್ಚವನ್ನು ಯಾತ್ರಾರ್ಥಿಗಳು ಭರಿಸಬೇಕಾಗಿದೆ. ಪುನೀತ ಯಾತ್ರೆಗೆ ಚಾಲನೆ ನೀಡುವ ವೇಳೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.