ಸಿದ್ದರಾಮಯ್ಯ ನೀಡಿದ ಭಾಗ್ಯಗಳ ಪ್ರಚಾರಕ್ಕೆ ಎಲ್ಸಿಡಿ ಪರದೆ
ಬೆಂಗಳೂರು, ಜುಲೈ 25: ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಧನೆಗಳ ಮಾಹಿತಿಯನ್ನು ನೇರವಾಗಿ ಜನರಿಗೆ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ.
ರಾಜ್ಯದ ಪ್ರತೀ ಜಿಲ್ಲೆಗಳಿಗೂ ಬೃಹತ್ ಎಲ್ ಸಿ ಡಿ ಪರದೆಯ ಮೂಲಕ ಸರ್ಕಾರದ ಸಾಧನೆಯನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಈ ಕುರಿತ ವಿಡಿಯೋ ಚಿತ್ರಣ ಇಲ್ಲಿದೆ.
* ಅಧಿಕಾರ ವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ-ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಐದು ಕೆ.ಜಿ ಅಕ್ಕಿ ಹಾಗೂ ಉಪ್ಪು, ತಾಳೆ ಎಣ್ಣೆ ವಿತರಣೆ.
* ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು 4 ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ 'ಮೊಬೈಲ್ ಒನ್' ಸೇವೆಯನ್ನು ದೇಶದಲ್ಲೇ ಮೊದಲ ಬಾರಿಗೆ ಆರಂಭಿಸಲಾಯಿತು.
*ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ. ನೆರವು ನೀಡುವ 'ಶಾದಿಭಾಗ್ಯ' ಯೋಜನೆ.
*ನಗರ ಪ್ರದೇಶಗಳಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಸರ್ಕಾರ ಬೈಕ್ ಅಂಬ್ಯುಲೆನ್ಸ್, ಹೆಲಿ ಆಂಬ್ಯುಲೆನ್ಸ್ ಮುಂತಾದ ಯೋಜನೆ.
*ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶ.
ಈ ಎಲ್ಲಾ ಯೋಜನೆಗಳಲ್ಲದೆ ಇನ್ನಷ್ಟು ಜನಪ್ರಿಯ ಯೋಜನೆಗಳ ಪರಿಚಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶ ಹೊಂದಲಾಗಿದೆ.