ಸಿದ್ದರಾಮಯ್ಯ ಸರ್ಕಾರದಲ್ಲಿ ಗೋವು ಹತ್ಯೆ ಮಾತ್ರವಲ್ಲ, ಹಿಂದೂಗಳ ಹತ್ಯೆಯೂ ಆಗುತ್ತಿತ್ತು: ಅರುಣ್ ಸಿಂಗ್
ವಿಜಯಪುರ, ನವೆಂಬರ್ 9: ಕಾಂಗ್ರೆಸ್ನವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಹಿಂದೂ ಎಂಬ ಶಬ್ದ ಪರ್ಶಿಯನ್ ಭಾಷೆಯಿಂದ ಬಂದುದಾಗಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರೇ ಗೂಗಲ್ ನೋಡಿ ಏನೆಲ್ಲ ಹೇಳಬೇಡಿ. ಎಲ್ಲ ಕಾಂಗ್ರೆಸ್ ನಾಯಕರೂ ಹಿಂದೂಗಳನ್ನು ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಇತ್ತು ಅವಾಗ ಗೋವುಗಳ ಹತ್ಯೆ ಮಾತ್ರವಲ್ಲದೆ ಹಿಂದೂಗಳ ಹತ್ಯೆಯಾಗುತ್ತಿತ್ತು. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ನಾವು ಗೋ ಹತ್ಯಾ ನಿಷೇಧವನ್ನು ಜಾರಿಗೊಳಿಸಿದೆವು ಎಂದು ಮೆಚ್ಚುಗೆ ಸೂಚಿಸಿದರು.
ಹಿಮಾಚಲ ಚುನಾವಣೆ: ರಾಹುಲ್ ಗಾಂಧಿ ಎಲ್ಲಿದ್ದಾರೆ- ಬಿಜೆಪಿ ಪ್ರಶ್ನೆ
ಸತೀಶ ಜಾರಕಿಹೊಳಿಯವರೇ ಹಿಂದೂ ಎಂದರೆ ಏನು ಎಂದು ನಿಮಗೆ ಜನ್ಮ ನೀಡಿದವರಿಗೆ ಕೇಳಿ, ಗೂಗಲ್ ಕೇವಲ ಹತ್ತಾರು ವರ್ಷಗಳ ಕೆಳಗೆ ಬಂದಿದೆ. ನಾವು ಅದರಲ್ಲಿ ಏನು ಬರೆಯುತ್ತೇವೋ ಅದನ್ನೇ ಹೇಳುತ್ತದೆ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ನಾಯಕರ ಇಂಥ ಹೇಳಿಕೆ ಮತ್ತು ವರ್ತನೆಯಿಂದಾಗಿಯೇ ದೇಶದಲ್ಲಿ ಕೇವಲ 2 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ.
ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವು ದಾಖಲಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಗೆಲುವಿನ ಟ್ರೆಂಡ್ ಇದೆ. ಕಾಂಗ್ರೆಸ್ಗೆ ಸೋಲಿನ ಟ್ರೆಂಡ್ ಇದೆ. 150 ವಿಧಾನಸಭೆ ಸದಸ್ಯರಲ್ಲಿ ಇಂಡಿ ಮತಕ್ಷೇತ್ರದಿಂದ ಒಬ್ಬ ಬಿಜೆಪಿ ಶಾಸಕರು ಇರಬೇಕು. ತಾವು ಎಲ್ಲರೂ ಕೈ ಜೋಡಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವಿಜಯಪುದಲ್ಲಿ 2024 ಕ್ಕೆ ನಲ್ಲಿನೀರು ಇಲ್ಲದ ಯಾವುದೇ ಮನೆ ಇರುವುದಿಲ್ಲ. ಕಾಂಗ್ರೆಸ್ ದೇಶದಲ್ಲಿ ಆರು ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿದೆ. ಆದರೆ ದೇಶದಲ್ಲಿ ಸಾಕಷ್ಟು ಗ್ರಾಮಗಳು ವಿದ್ಯುತ್ ಸಂಪರ್ಕ ಹೊಂದಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ 10 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವಿಜಯಪುರದಲ್ಲಿ ಎಕ್ಸ್ ಪೋರ್ಟ್ ಪಾರ್ಕ್ ನಿರ್ಮಾಣವಾಗುತ್ತಿದೆ. ರಾಜ್ಯ ಸರ್ಕಾರ ರೈತರ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸುಮಾರು 10 ಲಕ್ಷ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಯೋಜನೆ ಜಾರಿಗೆ ತಂದಿದೆ. ಎಸ್ಸಿ ಹಾಗೂ ಎಸ್ಟಿ ಮೀಸಲಾತಿ ಹೆಚ್ಚಿಸಿದೆ. ನಾವು ಭರವಸೆ ನೀಡುವ ಮೂಲಕ ಚುನಾವಣೆ ಎದುರಿಸುವುದಿಲ್ಲ. ಮಾಡಿದ ಸಾಧನೆ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ. ದೇಶದ ತುಂಬ ಒಳ್ಳೆಯ ಕೆಲಸಗಳಾಗಿವೆ. ಕೋವಿಡ್ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಮತ್ತು 100 ಕೋಟಿಗೂ ಹೆಚ್ಚು ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಮೋದಿ ನಿಮ್ಮ ಜೀವ ಉಳಿಸುವ ಕೆಲಸ ಮಾಡಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಖಜಾನೆಯನ್ನು ಸಮಸ್ತ ಭಾರತೀಯರ ಖಜಾನೆಯಾಗಿ ರೂಪಿಸಿದ್ದಾರೆ. ಬಡವರು, ದಲಿತರು, ಕಾರ್ಮಿಕರ ಹಾಗೂ ರೈತರ ಖಜಾನೆಯಾಗಿದೆ. ಅದನ್ನು ಅವರ ಬಡವರ ಮತ್ತು ಶೋಷಿತರ ಅಭಿವೃದ್ಧಿಗೆ ಬಳಸೋಣ ಎಂಬ ಆಶಯ ಮೋದಿಜಿ ಅವರದು ಎಂದರು.
ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ, ಆ ಜಾತಿ ಈ ಜಾತಿ ಎಂಬುದನ್ನು ಬಿಡಿ, ನಮ್ಮವ ನಿಂತಾನೆ, ನಿಮ್ಮವ ನಿಂತಾನೆ ಎಲ್ಲವನ್ನು ಬಿಡಿ. ಅಭಿವೃದ್ಧಿಗೆ ದೃಷ್ಟಿಯಿಂದ ನಾವೆಲ್ಲರೂ ಒಂದೇ. ಅದು ಬಿಜೆಪಿ ಎಂದು ಭಾವಿಸಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಮನವಿ ಮಾಡಿದರು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ನಾನು ಕಾರಜೋಳ ಅವರು ಸೇರಿ 3 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಅದನ್ನು ಬಹಳ ಪ್ರಯಾಸದಿಂದ ಜಾರಿಗೊಳಿಸಿದ್ದೇವೆ. ಇನ್ನೂ ಒಂದೇ ವಾರದಲ್ಲಿ ಟೆಂಡರ್ ಕೂಡ ಆಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 8 ವರ್ಷಗಳಲ್ಲಿ ಬರಿ ಇಂಡಿ ಅಲ್ಲ, ಇಡೀ ಜಗತ್ತು ನಮ್ಮನ್ನು ಮೆಚ್ಚಿಕೊಳ್ಳುವಂತೆ ಮಾಡಿದ್ದಾರೆ. ಮೋದಿಜಿ ಇಂದು ಜಗತ್ತಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಇದು ನಮ್ಮ ಹೆಮ್ಮೆ. ಎಲ್ಲರೂ ಒಂದಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, 60ಕ್ಕೂ ಹೆಚ್ಚು ವರ್ಷ ದೇಶವನ್ನು ಆಳಿದ ಪಕ್ಷ ದೇಶದ ಜನರಿಗೆ ಏನನ್ನು ಕೊಡಲಿಲ್ಲ. ಸ್ವಾರ್ಥ ರಾಜಕಾರಣ ಮಾಡಿ ಕೇವಲ ತಮ್ಮ ಕುಟುಂಬವನ್ನು ಬೆಳೆಸಿಕೊಂಡಿತು. ಆದರೆ ಬಿಜೆಪಿ ಜನರ ಒಳತಿಗಾಗಿ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು 130 ಕೋಟಿ ಜನರ ಹಿತವನ್ನು ಇಟ್ಟುಕೊಂಡು ಯೋಜನೆ ರೂಪಿಸಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿರವರ ನೇತೃತ್ವದ ಸರ್ಕಾರಗಳು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಎಲ್ಲ ರಸ್ತೆಗಳು ಇಂದು ಹೊಸ ರಸ್ತೆಗಳನ್ನಾಗಿ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಹಾಗೂ ಕೋವಿಡ್ ಲಸಿಕೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿರ್ಮಾಣದ ಅವಶ್ಯಕತೆ ಇತ್ತು. ಆ ಕೆಲಸ ನಮ್ಮ ಪಕ್ಷ ಮಾಡಿದೆ ಎಂದು ತಿಳಿಸಿದರು.
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಜಿಲ್ಲೆ ನಮ್ಮದು. ರೈಲ್ವೆ ಜೋಡಿ ಹಳಿ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿಗೆ ನಾವೆಲ್ಲರೂ ಬಿಜೆಪಿ ಬೆಂಬಲಿಸಬೇಕು. ರಾಹುಲ್ ಕರ್ನಾಟಕಕ್ಕೆ ಬಂದರೆ ನಮಗೆ ಮತ್ತೆ ಶುಭ ಗಳಿಗೆ ಪ್ರಾರಂಭವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ನಾವು 150 ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಬೇಕಿದೆ. ಅದರಲ್ಲಿ ಇಂಡಿ ಶಾಸಕರು ಇರಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಅನಿಲ ಜಮಾದಾರ, ಸಿದ್ದಲಿಂಗ ಹಂಜಗಿ, ರಾಜಶೇಖರ್ ಪೂಜಾರಿ, ಅಪ್ಪಸಾಹೇಬ್ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ವಿಜಯ ಜೋಶಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.