ಸಿದ್ದರಾಮಯ್ಯ ಬಗ್ಗೆ ಎಚ್ಡಿಕೆ ಹೇಳಿದ 'ಆಲಿಬಾಬ ಔರ್ ಚಾಲೀಸ್ ಕಳ್ಳರ' ಕಥೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸದಸ್ಯರಿಗೂ ' ಆಲಿಬಾಬಾ ಔರ್ ಚಾಲೀಸ್ ಚೋರ್' ಕಥೆಗೂ ಏನು ಸಂಬಂಧ? ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಕಾರ ಆಲಿಬಾಬನಿಗೂ ಮುಖ್ಯಮಂತ್ರಿಗಳಿಗೂ ನಿಕಟ ಸಂಬಂಧವಿದೆ.
ಶಕ್ತಿಪೀಠ ಶೃಂಗೇರಿಯಲ್ಲಿ ಹನ್ನೆರಡು ದಿನಗಳ ಕಾಲ ನಡೆದ ಅತಿರುದ್ರ ಮಹಾಯಾಗದ ಪೂರ್ಣಾಹುತಿಯ ನಂತರ ಮತ್ತೆ ರಾಜ್ಯ ಚುನಾವಣಾ ಪ್ರವಾಸಕ್ಕೆ ಧುಮುಕಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
'ಕುಮಾರ ಪರ್ವ ಪಯಣ ನಿಮ್ಮ ಕಡೆಗೆ' ಹೆಸರಿನಲ್ಲಿ ರಾಜ್ಯ ಪ್ರವಾಸ ಆರಂಭಿಸಿರುವ ಕುಮಾರಸ್ವಾಮಿ, ಬೀದರ್ ನಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯನವರ ಸರಕಾರ 'ಆಲಿಬಾಬ ಔರ್ ಚಾಲೀಸ್ ಚೋರ್' ಕಂಪೆನಿ ಇದ್ದಂತೆ ಎಂದು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಚುನಾವಣಾ ಪ್ರಚಾರಕ್ಕೂ ಮುನ್ನ ರೆಕುಳಿಗ್ಗಿ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಪಕ್ಷದ ಮುಖಂಡ ಬಂಡೆಪ್ಪ ಕಾಶಂಪೂರ ನಿವಾಸದಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದರು. ಬೀದರ್ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನಡೆದ ಜೆಡಿಎಸ್ ರ್ಯಾಲಿಗೆ ಉತ್ತಮ ಜನಸ್ಪಂದನೆ ವ್ಯಕ್ತವಾಗಿತ್ತು.
ನಮ್ಮ ರೈತರು ಕಷ್ಟ ಅಂದರೆ ಯಾರೂ ಕ್ಯಾರೇ ಮಾಡುವುದಿಲ್ಲ, ರೈತರಿಗೆ ಜಾತಿ ಅನ್ನುವುದು ಇಲ್ಲ. ಇವತ್ತು ರಾಜ್ಯ ಮತ್ತು ದೇಶದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿ ಇರುವಂತವನು ರೈತ. ಮಿರಾಜುದ್ದೀನ್ ಪಟೇಲ್ ಬದುಕಿದ್ದಾಗ ಅಣಕುಲಿ ಗ್ರಾಮದಲ್ಲಿ ನಾನು ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಗ್ರಾಮವಾಸ್ತವ್ಯ ಮಾಡಿದೆ. ಈ ನಾಡಿನಲ್ಲಿ ರೈತರ ಮೇಲಿರುವ ಸಾಲವನ್ನು ಮನ್ನಾ ಮಾಡುವ ಯೋಜನೆ ನಾವು ಹಾಕಿಕೊಂಡಿದ್ದೇವೆಂದು ಕುಮಾರಸ್ವಾಮಿ ಹೇಳಿದರು.

ನವಕರ್ನಾಟಕ ನಿರ್ಮಾಣ ರಾಜ್ಯ ಪ್ರವಾಸ
ಚುನಾವಣೆಗೆ ಇನ್ನು ಎರಡ್ಮೂರು ತಿಂಗಳು ಇರುವಾಗ ಮುಖ್ಯಮಂತ್ರಿಗಳು ನವಕರ್ನಾಟಕ ನಿರ್ಮಾಣ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಆದರೆ ಇಷ್ಟು ದಿನ ಯಾವ ಕರ್ನಾಟಕವನ್ನು ನಿರ್ಮಿಸಿದ್ದರು. ಜನರ ತೆರಿಗೆ ದುಡ್ಡಿನಲ್ಲಿ ಈ ಪ್ರಮಾಣದಲ್ಲಿ ಜಾಹೀರಾತನ್ನು ನೀಡಿ, ಹಣಪೋಲು ಮಾಡುತ್ತಿರುವ ಮುಖ್ಯಮಂತ್ರಿಗಳನ್ನು ನಾನೆಂದೂ ನೋಡಿಲ್ಲ- ಎಚ್ ಡಿ ಕುಮಾರಸ್ವಾಮಿ.

ಕಾಂಗ್ರೆಸ್ಸಿನದ್ದು ಆಲಿಬಾಬ ಔರ್ ಚಾಲೀಸ್ ಚೋರ್ ಕಥೆಯಿದ್ದಂತೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ ಬಿ ಪಾಟೀಲ್ ಸೇರಿ ನಾಲ್ಕೈದು ಸಚಿವರು ಈ ರಾಜ್ಯದ ಸಂಪತ್ತನ್ನು ಅಕ್ಷರಸ: ಲೂಟಿ ಮಾಡುತ್ತಿದ್ದಾರೆ. ಲೂಟಿ ಮಾಡಿದ ದುಡ್ಡಿನಲ್ಲಿ ಹೈಕಮಾಂಡಿಗೂ ಪಾಲು ನೀಡುತ್ತಿದ್ದಾರೆ. ಇದೊಂದು ರೀತಿ ಆಲಿಬಾಬ ಔರ್ ಚಾಲೀಸ್ ಚೋರ್ ಕಥೆಯಿದ್ದಂತೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಯಾವುದೇ ಹೊಸ ನೀರಾವರಿ ಯೋಜನೆಯನ್ನು ಕೈಗೊಳ್ಳಲಿಲ್ಲ
ಇದುವರೆಗಿನ 4.8ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಹೊಸ ನೀರಾವರಿ ಯೋಜನೆಯನ್ನು ಕೈಗೊಳ್ಳದೇ, ಬರೀ ಜಾಹೀರಾತಿನಲ್ಲಿ ಶೂರರಾಗಿದ್ದಾರೆ. ಆ ಭಾಗ್ಯ...ಈ ಭಾಗ್ಯ ಅಂದುಕೊಂಡು ಜನರ ದಾರಿತಪ್ಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ.

ಕಾರ್ಖಾನೆಗೆ ಮಾರುವಂತಹ ಪರಿಸ್ಥಿತಿಯಲ್ಲಿಲ್ಲ
ಕಬ್ಬಿನ ಹೊಲಕ್ಕೆ ನಾವು ಭೇಟಿ ಕೊಟ್ಟಿದ್ದೆವು. ಕಬ್ಬು ಕಟಾವಿಗೆ ಬಂದಿದ್ದರೂ ಕಾರ್ಖಾನೆಗೆ ಮಾರುವಂತಹ ಪರಿಸ್ಥಿತಿಯಲ್ಲಿಲ್ಲ. ರೈತರ ಸಹಕಾರೀ ಬ್ಯಾಂಕಿನ ಸಾಲಮನ್ನಾ ಘೋಷಿಸಿದ್ದರೂ, ಸರಕಾರ ಇನ್ನೂ ಹಣ ಬಿಡುಗಡೆ ಮಾಡಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷವೂ ಸಮಾವೇಶ ಮಾಡುತ್ತಿದ್ದಾರೆ. ಎರಡೂ ಪಕ್ಷಗಳು ಒಬ್ಬರೊನ್ನಬ್ಬರು ದೂರುತ್ತಿವೆಯೇ ಹೊರತು ಅಭಿವೃದ್ದಿಯ ಬಗ್ಗೆ ಮಾತನಾಡುತ್ತಿಲ್ಲ - ಕುಮಾರಸ್ವಾಮಿ.

ಜನರ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂದು ಕುಮಾರಸ್ವಾಮಿ ಲೇವಡಿ
ಯಡಿಯೂರಪ್ಪ ಹೇಳುತ್ತಾರೆ, ನಾನು ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆಂದು. ಅತ್ತ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಅವರ ಮುಖಂಡರು ಜೈಲಿಗೆ ಹೋಗಿ ಬಂದವರಲ್ಲವೇ ಎಂದು ಪ್ರತ್ಯುತ್ತರ ನೀಡುತ್ತಾರೆ. ಇದರಿಂದ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.












Click it and Unblock the Notifications